ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಗಂಗಾ ಸಂಗೀತ ಶಾಲೆಯ ಶಿಕ್ಷಕರಾದ ಸೀತಾಲಕ್ಷ್ಮಿ ಅವರು ಮಾತನಾಡಿ, ಎಸ್. ಜಾನಕಿ ಅವರು ಕೇವಲ ಗಾಯಕಿಯಾಗಿರಲಿಲ್ಲ, ಇಡೀ ಸಂಗೀತ ಲೋಕಕ್ಕೆ ತಾಯಿಯಾಗಿದ್ದರು. ಲಕ್ಷಾಂತರ ಸಂಗೀತ ವಿದ್ಯಾರ್ಥಿಗಳು ಹಾಗೂ ಅಭಿಮಾನಿ ಮಕ್ಕಳನ್ನು ಅನಾಥರನ್ನಾಗಿಸಿ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ಸರಳತೆ ಮತ್ತು ಸಾಧನೆ ನಮಗೆಲ್ಲರಿಗೂ ಸದಾ ಮಾರ್ಗದರ್ಶಕ ಎಂದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಗಾನಕೋಗಿಲೆ ಎಸ್. ಜಾನಕಿ ಅಮ್ಮನವರು ಇಂದು ನಮ್ಮನ್ನಗಲಿದ್ದರೂ, ಅವರು ಹಾಡಿರುವ ಅಮರ ಗೀತೆಗಳು, ವಚನಗಳು ಮತ್ತು ದೇವರನಾಮಗಳ ಮೂಲಕ ಅವರ ದಿವ್ಯ ಶಾರೀರ (ಕಂಠ) ಸೂರ್ಯ-ಚಂದ್ರರಿರುವವರೆಗೂ ಶಾಶ್ವತವಾಗಿರಲಿದೆ ಎಂದು ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಮ.ಸುರೇಶ್ ಬಾಬು ಅವರು ನುಡಿನಮನ ಸಲ್ಲಿಸಿದರು. ಇಲ್ಲಿನ ಐತಿಹಾಸಿಕ ಮಹಾಂತಿನ ಮಠದ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘ, ಶರಣ ಸಾಹಿತ್ಯ ಪರಿಷತ್ತು ಹಾಗೂ ಜ್ಞಾನಗಂಗಾ ಸಂಗೀತ ಶಾಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.ಎಸ್. ಜಾನಕಿ ಅವರ ಅಗಲಿಕೆ ಇಡೀ ದೇಶದ ಕೋಟ್ಯಂತರ ಸಂಗೀತ ಪ್ರೇಮಿಗಳನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ. ಅವರ ಧ್ವನಿಗೆ ಸಾವಿಲ್ಲ ಎಂದು ಸುರೇಶ್ ಬಾಬು ಬೇಸರ ವ್ಯಕ್ತಪಡಿಸಿದರು.
ದೈವದತ್ತ ಗಾಯಕಿ ಜಾನಕಿ ಅಮ್ಮ;ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶರಣ ಸಾಹಿತ್ಯ ಪರಿಷತ್ತಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಹಡಪದ್, ಸಂಗೀತ ಲೋಕದಲ್ಲಿ ಜಾನಕಿ ಅಮ್ಮನವರು ಮಾಡಿರುವ ಸಾಧನೆ ಅನನ್ಯವಾದದ್ದು. ಒಂದೇ ವೇದಿಕೆಯಲ್ಲಿ ಅಥವಾ ಹಾಡಿನಲ್ಲಿ ಎಳೆಯ ಮಗುವಿನ ಧ್ವನಿಯಿಂದ ಹಿಡಿದು, ವೃದ್ಧರ ಗಾಂಭೀರ್ಯ ಹಾಗೂ ಪ್ರೇಮಿಗಳ ಭಾವನೆಗಳಿಗೆ ತಕ್ಕಂತೆ ಧ್ವನಿ ಬದಲಿಸಿ ಹಾಡುವ ಅದ್ಭುತ ಕಲೆ ಅವರಿಗೆ ದೈವದತ್ತವಾಗಿ ಒಲಿದಿತ್ತು. ಇಂತಹ ಅಪರೂಪದ ಗಾಯಕಿ ಮತ್ತೊಮ್ಮೆ ಹುಟ್ಟಿ ಬರಲು ಸಾಧ್ಯವಿಲ್ಲ ಎಂದು ಗುಣಗಾನ ಮಾಡಿದರು.
ಕೋಟ್ಯಂತರ ಅಭಿಮಾನಿಗಳ ಅಮ್ಮ ;ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಗಂಗಾ ಸಂಗೀತ ಶಾಲೆಯ ಶಿಕ್ಷಕರಾದ ಸೀತಾಲಕ್ಷ್ಮಿ ಅವರು ಮಾತನಾಡಿ, ಎಸ್. ಜಾನಕಿ ಅವರು ಕೇವಲ ಗಾಯಕಿಯಾಗಿರಲಿಲ್ಲ, ಇಡೀ ಸಂಗೀತ ಲೋಕಕ್ಕೆ ತಾಯಿಯಾಗಿದ್ದರು. ಲಕ್ಷಾಂತರ ಸಂಗೀತ ವಿದ್ಯಾರ್ಥಿಗಳು ಹಾಗೂ ಅಭಿಮಾನಿ ಮಕ್ಕಳನ್ನು ಅನಾಥರನ್ನಾಗಿಸಿ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ಸರಳತೆ ಮತ್ತು ಸಾಧನೆ ನಮಗೆಲ್ಲರಿಗೂ ಸದಾ ಮಾರ್ಗದರ್ಶಕ ಎಂದರು.
ಭಾವಪೂರ್ಣವಾಗಿ ಜರುಗಿದ ಈ ಶ್ರದ್ಧಾಂಜಲಿ ಸಭೆಯಲ್ಲಿ ಮಹಾಂತಿನ ಮಠದ ಕಾರ್ಯದರ್ಶಿಗಳಾದ ವಿ. ವಿಶ್ವನಾಥ್, ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ಕೆ.ಎಚ್. ಚಂದ್ರಶೇಖರ್ ಹಾಗೂ ಎ.ಎಂ. ನಾರಾಯಣಸ್ವಾಮಿ, ಪ್ರಸಿದ್ಧ ಸಂಗೀತ ನಿರ್ದೇಶಕ ವಿ.ಎಂ. ನಾಯ್ಡು, ಮಿತ್ರ ಸಂಘದ ಕಾರ್ಯದರ್ಶಿ ಆರ್. ಮುನಿರಾಜು, ಬಲಿಜ ಸಂಘದ ಮಾಜಿ ಅಧ್ಯಕ್ಷರು, ಘಂಟಸಾಲ ಖ್ಯಾತಿಯ ಮಹಾತ್ಮಾಂಜನೇಯ,ನರಸಿಂಹಪ್ಪ, ಸುಮಂತ್ ಕುಮಾರ್, ಯುವ ಮುಖಂಡರಾದ ಭರತ್ ಹಾಗೂ ಸೇರಿ ಕಲಾಭಿಮಾನಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದು ಮೃತರ ಆತ್ಮಕ್ಕೆ ಶಾಂತಿ ಕೋರಿದರು.