ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ: ತೊಗರಿ ಬೆಳೆಗೆ ಪರಿಹಾಕ್ಕಾಗಿ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ನೇತೃತ್ವದಲ್ಲಿ ಹಾಗೂ ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಸೂಚನೆ ಮೇರೆಗೆ ಡಿ.೯ ರಂದು ತಾಳಿಕೋಟೆಯಲ್ಲಿ ನಡೆಯಲಿರುವ ಬೃಹತ್ ಹೋರಾಟದಲ್ಲಿ ರೈತರು ಟ್ರ್ಯಾಕ್ಟರ್ನೊಂದಿಗೆ ಭಾಗವಹಿಸಲಿದ್ದಾರೆಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ ಹೇಳಿದರು. ರವಿವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಎ.ಎಸ್.ಪಾಟೀಲ(ನಡಹಳ್ಳಿ) ಅವರು ಮುದ್ದೇಬಿಹಾಳ ಹೋರಾಟದ ಸಮಯದಲ್ಲಿ ಅಧಿಕಾರಿಗಳ ಮನವಿ ಮೇರೆಗೆ ಡಿ.೯ರವರೆಗೆ ಸರ್ವೆ ಪ್ರಾರಂಭಕ್ಕೆ ಗಡವು ನೀಡಿದ್ದರು. ಆ ಗಡುವು ಮುಗಿಯಲು ಬಂದರೂ ಸರ್ವೇ ಪ್ರಾರಂಭಿಸಿಲ್ಲ. ಹೀಗಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗಿದೆ. ಪಕ್ಷಾತೀತವಾಗಿ ನಡೆಯಲಿರುವ ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕೆಂದು ಮನವಿ ಮಾಡಿದರು.ಮುಖಂಡ ಬಸನಗೌಡ ವಣಕ್ಯಾಳ ಮಾತನಾಡಿ ತೊಗರಿ ಬೆಳೆಯು ಕಳಪೆ ಬೀಜದಿಂದ ಶೇ.೮೦ ರಷ್ಟು ಹಾನಿ ಉಂಟಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಕೃಷಿ ಇಲಾಖೆಯ ಜೆಡಿ ಕಳಪೆ ಬೀಜ ವಿತರಿಸಿದ ಖಾಸಗಿ ಏಜನ್ಸಿಯವರನ್ನು ರಕ್ಷಣೆ ಮಾಡಲು ಹೊರಟಿದ್ದಾರೆಂದು ಆರೋಪಿಸಿದ ಅವರು, ಈ ಹೋರಾಟ ರೈತರ ಹೃತದೃಷ್ಠಿಯಿಂದ ಆಗಿದೆ. ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಮುಖಂಡರಾದ ಮಡುಸಾಹುಕಾರ ಬಿರಾದಾರ, ರಾಜುಗೌಡ ಗುಂಡಕನಾಳ, ರಾಜುಗೌಡ ಕೊಳೂರ, ಈಸುಗೌಡ ಲಕ್ಕುಂಡಿ, ಎಂ.ಎಂ.ಪಾಟೀಲ, ಬಿ.ಎಸ್.ಇಸಾಂಪೂರ, ಎಚ್.ಬಿ.ಬಿರಾದಾರ, ಮಂಜು ಮೈಲೇಶ್ವರ, ತಿಪ್ಪಣ್ಣ ಆದ್ವಾನಿ ಮೊದಲಾದವರು ಇದ್ದರು.
_______