ಕರ್ನಾಟಕ ರಾಜ್ಯದ ಒಟ್ಟು ಗ್ರೀನ್ ಪ್ರಾಡಕ್ಟನಲ್ಲಿ ಸುಮಾರು ಶೇ.10 ರಷ್ಟು ಜಿಲ್ಲೆಯ ಪಾಲನ್ನು ಕಾಣುತ್ತವೆ
ಕೊಪ್ಪಳ: ಸಿರಿಧಾನ್ಯ ಬೆಳೆದವರು ಶ್ರೀಮಂತರಾಗುವಲ್ಲಿ ಸಂದೇಹವಿಲ್ಲ. ಹಾಗೇ ಸಿರಿಧಾನ್ಯ ಉಂಡವರು ಆರೋಗ್ಯದಲ್ಲೂ ಶ್ರೀಮಂತರಾಗುತ್ತಾರೆ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಹೇಳಿದರು.
ನಗರದ ಶ್ರೀಗವಿಸಿದ್ದೇಶ್ವರ ಮಠದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಅಂಗವಾಗಿ ಜರುಗಿದ ಸಿರಿಧಾನ್ಯ ಮೇಳ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಒಟ್ಟು ಗ್ರೀನ್ ಪ್ರಾಡಕ್ಟನಲ್ಲಿ ಸುಮಾರು ಶೇ.10 ರಷ್ಟು ಜಿಲ್ಲೆಯ ಪಾಲನ್ನು ಕಾಣುತ್ತವೆ. ಜಿಲ್ಲೆಯನ್ನು ಭತ್ತದ ಕಣಜ ಎಂದು ಸಹ ಕರೆಯಲಾಗುತ್ತದೆ. ಕೇವಲ ಭತ್ತಕ್ಕೆ ಮಾತ್ರ ಆದ್ಯತೆ ನೀಡದೆ ಸಿರಿಧಾನ್ಯ ಬೆಳೆ ಬೆಳೆಯಲು ರೈತರು ಮುಂದಾಗಬೇಕು. ಹಿಂದೆ ಯಾರು ಸಿರಿ ಧಾನ್ಯ ಬೆಳೆಯುತ್ತಾರೆ ಅವರು ಬಡವರು ಎನ್ನುವ ವಾಡಿಕೆ ಇತ್ತು. ಆದರೆ, ಈಗ ಒಂದು ಕೆಜಿ ರಾಗಿ, ಬರಗ, ಹರಕ ಎಷ್ಟು ಬೆಲೆಯಿದೆ ಅನ್ನುವುದನ್ನ ನಾವು ಕಾಣಬಹುದು. ಸಿರಿಧಾನ್ಯ ತಿನ್ನುವುದರಿಂದ ದೇಹಕ್ಕೆ ಫೈಬರ್ ಅಂಶ ದೊರೆಯುತ್ತೆ ಮತ್ತು ಇದರಿಂದ ಮನುಷ್ಯ ಆರೋಗ್ಯವಾಗಿರುತ್ತಾನೆ. ನಮ್ಮ ಜಿಲ್ಲೆಯಲ್ಲಿ ಒಟ್ಟು 6 ಸಾವಿರ ಹೆಕ್ಟೇರ್ ಪ್ರದೇದಲ್ಲಿ ಸಿರಿಧಾನ್ಯ ಬೆಳೆ ಬೆಳೆಯಲಾಗುತ್ತಿದೆ. ಅದನ್ನು ಇನ್ನೂ ಹೆಚ್ಚಿಗೆ ಮಾಡಬೇಕಾಗುತ್ತದೆ. ಜತೆಗೆ ಸಾವಯವ ಕೃಷಿಗೆ ಹೆಚ್ಚಿನ ಆಸಕ್ತಿ ಕೊಡಬೇಕು ಎಂದರು.ಪಿಎಂಎಫ್ಎಂಇ ಯೋಜನೆಯಲ್ಲಿ ಜೋಳದ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದಕತೆ ಹೆಚ್ಚಿಸುವ ಮೂಲ ಉದ್ದೇಶದೊಂದಿಗೆ ರೈತರು ಕೇವಲ ಬೆಳೆಗಾರರಾಗಿ ಉಳಿಯದೆ ಮೌಲ್ಯವರ್ಧಿತ ಉತ್ಪನ್ನ ತಯಾರಿಸುವ ಯಶಸ್ವಿ ಉದ್ದಿಮೆದಾರರಾಗಲು ಈ ಯೋಜನೆಯು ಒಂದು ಪೂರಕ ಶಕ್ತಿಯಾಗಿದೆ. ಜೋಳವನ್ನು ಸಂಸ್ಕರಿಸಿ, ಆಕರ್ಷಕ ಪ್ಯಾಕೇಜಿಂಗ್ ಮತ್ತು ಬ್ರಾಂಡಿಂಗ್ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲು ಪಿಎಂಎಫ್ಎಂಇ ಯೋಜನೆಯಡಿ ತಾಂತ್ರಿಕ ತರಬೇತಿ ಹಾಗೂ ಶೇ.50 ರಷ್ಟು ಸಹಾಯಧನ ಲಭ್ಯವಿದ್ದು, ರೈತರು ಇದನ್ನು ಸದುಪಯೋಗಪಡಿಸಿಕೊಂಡರೆ ತಮ್ಮ ಅದಾಯ ಹೆಚ್ಚಿಸಿಕೊಳ್ಳುವುದರ ಜತೆಗೆ ಕೃಷಿಯನ್ನು ಒಂದು ಲಾಭದಾಯಕ ಉದ್ದಿಮೆಯನ್ನಾಗಿ ಪರಿವರ್ತಿಸಬಹುದು ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ ಮಾತನಾಡಿ, ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ ಇದೇ ತಿಂಗಳಲ್ಲಿ ಜಿಲ್ಲಾ ಮಟ್ಟದ ಕೃಷಿ ವಾಣಿಜ್ಯ ಮೇಳದೊಂದಿಗೆ ಆಯೋಜಿಸಲಾಗುತ್ತಿದ್ದು, ಈ ಮೂಲಕ ರೈತರು ಮತ್ತು ಸಾರ್ವಜನಿಕರಲ್ಲಿ ಬೆಳೆ ಉತ್ಪಾದನೆ ನಂತರ ಸಂಸ್ಕರಣೆ, ಮೌಲ್ಯವರ್ಧನೆ ಮೂಲಕ ಆದಾಯ ಹೆಚ್ಚಿಸುವ ಕ್ರಮಗಳು ಹಾಗೂ ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ ಎಂದರು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯಸ್ಥ ಯೋಗಿನಿ ಅಕ್ಕ ಮಾತನಾಡಿ, ಸಿರಿಧಾನ್ಯಗಳಿಂದ ಆರೋಗ್ಯ ಸಂಪತ್ತು ಪಡೆದುಕೊಂಡು ಔಷಧಿಗಳಿಂದ ದೂರವಿರಿ ಎಂದು ಹೇಳಿದರು.
ಇಟಗಿಯ ಶ್ರೀಗುರುಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿರಿಧಾನ್ಯ ಸೇವಿಸುವುದರಿಂದ ಮನುಷ್ಯನ ಜೀವಿತಾವಧಿ ಹೆಚ್ಚಾಗಲಿದ್ದು, ಮಾರಣಾಂತಿಕ ಕಾಯಿಲೆಗಳಿಂದ ಮುಕ್ತರಾಗುತ್ತಾರೆ. ಹಾಗಾಗಿ ಎಲ್ಲರು ಹೆಚ್ಚಾಗಿ ಸಿರಿಧಾನ್ಯ ಪದಾರ್ಥ ಬಳಸಲು ಆದ್ಯತೆ ನೀಡಿ ಎಂದರು.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಉಪ ಕೃಷಿ ನಿರ್ದೇಶಕ ಎಲ್.ಸಿದ್ದೇಶ್ವರ, ಕೃಷಿ ತಂತ್ರಜ್ಞಾನ ಸಂಸ್ಥೆಯ ಮುಖ್ಯಸ್ಥ ವೀರಣ್ಣ ಕಮತರ್, ಜಿಲ್ಲೆಯ ಎಲ್ಲ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ವಿಸ್ತರ್ಣ ಶಿಕ್ಷಣ ಕೇಂದ್ರದ ಅಧಿಕಾರಿಗಳು, ಜಿಲ್ಲಾ ಕೃಷಿ ಪರಿಕರ ಮಾರಾಟಗಾರರು, ಪೊಲೀಸ್ ಸಿಬ್ಬಂದಿ ಹಾಗೂ ಕೃಷಿ ಇಲಾಖೆಯ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳಿದ್ದರು.