ಶಿವಕುಮಾರ ಕುಷ್ಟಗಿ

ಗದಗ: ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿರುವ ಕೋಟುಮಚಗಿ ಗ್ರಾಮದಲ್ಲಿ ಜೂ. 3ರಂದು ಕುಡಿಯುವ ನೀರು ತರಲು ಹೋದ ಚನ್ನಯ್ಯ ಬಳಿಗೇರಮಠ (56) ಎಂಬ ಮುಗ್ಧ ರೈತ ಖಾಸಗಿ ಕಂಪನಿಯ ನಡೆಸಿದ ಅಕ್ರಮ ಮಣ್ಣು ಗಣಿಗಾರಿಕೆಯ ಗುಂಡಿಗೆ ಬಿದ್ದು ಜೀವ ಕಳೆದುಕೊಂಡಿದ್ದಾರೆ.

ಗ್ರಾಮದ ಸರ್ವೇ ನಂಬರ್ 440/2 ಜಮೀನಿನಲ್ಲಿ ಗಾಳಿ ವಿದ್ಯುತ್ ಯಂತ್ರದ ಕಂಪನಿಯು ಗರಸಿಗಾಗಿ ತೆಗೆದಿದ್ದ 60ರಿಂದ 70 ಅಡಿ ಆಳದ ಬೃಹತ್ ಹೊಂಡದಲ್ಲಿ ನೀರನ್ನು ತರಲು ಹೋದಾಗ ಈ ಅವಘಡ ಸಂಭವಿಸಿದೆ. ಈ ಕುರಿತು ಮೃತನ ಕುಟುಂಬದವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಕಾರಣ: ಗಾಳಿ ವಿದ್ಯುತ್ ಸ್ಥಾವರ ನಿರ್ಮಿಸಲು ಸಾಕಷ್ಟು ಪ್ರಮಾಣದಲ್ಲಿ ಬೇಕಾಗುವ ಮಣ್ಣನ್ನು (ಗರಸು) ಕಂಪನಿಗಳು ಸ್ಥಳೀಯ ನಾಯಕರನ್ನು ಇಟ್ಟುಕೊಂಡು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ, ಮನಸೋ ಇಚ್ಛೆ (70 ಅಡಿಯಷ್ಟು) ಬೃಹತ್ ಕಂದಕಗಳನ್ನು ನಿರ್ಮಿಸಿವೆ. ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದರೂ ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳು ಜಾಣಕುರುಡುತನ ಪ್ರದರ್ಶಿಸಿಸುತ್ತಿದ್ದಾರೆ.

ಅನುಮತಿಯೇ ಇಲ್ಲ: ​ಇಷ್ಟೊಂದು ಆಳದ ಹೊಂಡ ತೋಡಲು ಕಂಪನಿಗಳಿಗೆ ಹಾಗೂ ಹೊಲದ ಮಾಲೀಕರಿಗೆ ಅನುಮತಿ ನೀಡಿದವರು ಯಾರು? ನಿಯಮಬಾಹಿರವಾಗಿ ಗಣಿಗಾರಿಕೆ ನಡೆಸಿದ ಕಂಪನಿಯ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ ಇದುವರೆಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಲ್ಲ.


ಘಟನೆ ಸಂಬಂಧ ಗದಗ ತಹಸೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ ಪ್ರತಿಕ್ರಿಯಿಸಿ, ಈ ಕುರಿತು ಪರಿಶೀಲನೆ ನಡೆಸಿ ಉತ್ತರಿಸುತ್ತೇನೆ ಎಂದು ತಿಳಿಸಿದ್ದಾರೆ.

ಕಠಿಣ ಕ್ರಮ ಕೈಗೊಳ್ಳಿ: ಒಂದು ಜೀವ ಬಲಿಯಾದರೂ ಊರಿನ ಮುಖಂಡರು ಹಾಗೂ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು ವ್ಯವಸ್ಥೆ ಸಂಪೂರ್ಣ ಜಿಡ್ಡುಗಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ತಕ್ಷಣವೇ ತಪ್ಪಿತಸ್ಥ ಕಂಪನಿ ಮತ್ತು ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಮೃತರ ಸಂಬಂಧಿ ಶರಣಯ್ಯ ಬಳಗೇರಮಠ ತಿಳಿಸಿದರು.

ಕಂದಕ ಮುಚ್ಚಿಸಿ: ಗದಗ ಮತ್ತು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಗಾಳಿ ವಿದ್ಯುತ್ ಕಂಪನಿಯು ಇಂತಹ ಹತ್ತಾರು ಬೃಹತ್ ಹೊಂಡಗಳನ್ನು ತೋಡಿ ಹಾಗೇ ಬಿಟ್ಟಿದೆ. ಈ ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಕಂಪನಿಯ ಖರ್ಚಿನಲ್ಲೇ ಈ ಎಲ್ಲ ಕಂದಕಗಳನ್ನು ಮುಚ್ಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಮಾಯಕ ಜೀವಗಳು ಅಥವಾ ಜಾನುವಾರುಗಳು ಬಲಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದರು.ಸುರಕ್ಷಾ ಸ್ಪಷ್ಟ ಉಲ್ಲಂಘನೆ

ಈ ಪ್ರಕರಣ ​ಬಿಎನ್ಎಸ್ ಕಲಂ 106 (ಹಳೆಯ IPC 304A) ಸ್ಪಷ್ಟ ಉಲ್ಲಂಘನೆಯಾಗಿದ್ದು, ಯಾವುದೇ ಸುರಕ್ಷತಾ ಕ್ರಮ ಇಲ್ಲದೆ ಸಾರ್ವಜನಿಕರ ಸಾವು ಸಂಭವಿಸುವ ರೀತಿಯಲ್ಲಿ ಗಣಿಗಾರಿಕೆ ನಡೆಸಲಾಗಿದೆ. ಇದು ​ಅಕ್ರಮ ಗಣಿಗಾರಿಕೆ ಕಾಯ್ದೆ (MMDR Act 1957) ಅಡಿಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಮಾಡಿ 70 ಅಡಿಯಷ್ಟು ಆಳಕ್ಕೆ ಭೂಮಿ ಅಗೆದಿರುವುದಕ್ಕೆ ಕಂಪನಿಗೆ ಕೋಟ್ಯಂತರ ದಂಡ ವಿಧಿಸಿ, ಯಂತ್ರೋಪಕರಣ ವಶಪಡಿಸಿಕೊಂಡು ಕಂಪನಿಯ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಯಾವುದನ್ನು ಅಧಿಕಾರಿಗಳು ಮಾಡುತ್ತಿಲ್ಲ.