ಹುಬ್ಬಳ್ಳಿ:

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರಿಂದ ಒಳ್ಳೆಯ ಹೆಸರು ಪಡೆದು, ಇದೀಗ ಹಿಂದಿನಿಂದ ಆಟವಾಡಲು ಶುರು ಮಾಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗಿರುವುದು ಸಿದ್ದರಾಮಯ್ಯ ಅವರಿಗೆ ಸಹನೆ ಇಲ್ಲ. ಹೀಗಾಗಿ ಬೇರೆಯವರಿಂದ ಆಟವಾಡಿಸುತ್ತಿದ್ದಾರೆ. ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಇದರ ಭಾಗವೇ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.ಈ ಸರ್ಕಾರ ಸರಳವಾಗಿ ನಡೆಯುವುದಿಲ್ಲ ಎಂದು ನಾನು ಈ ಮೊದಲೇ ಹೇಳಿದ್ದೆ. ಅದರಂತೆ ಇದೀಗ ಆ ಎಲ್ಲ ಲಕ್ಷಣಗಳು ಕಾಣುತ್ತಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವರನ್ನು ಕೆಳಗಿಳಿಸಲು ಡಿ.ಕೆ. ಶಿವಕುಮಾರ ಆಟವಾಡಿದ್ದರು. ಇದೀಗ ಸಿದ್ದರಾಮಯ್ಯ ತಮ್ಮ ಆಪ್ತರೊಂದಿಗೆ ಆಟವಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯ ಬರಗಾಲ ಎದುರಿಸುವ ಲಕ್ಷಣ ಕಾಣುತ್ತಿದೆ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಹಿತ ಎಲ್ಲ ಸಚಿವರು, ಶಾಸಕರು ಕಾಳಜಿ ವಹಿಸಿ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಆದರೆ, ಇವರು ಖಾತೆಗಾಗಿ ಹೊಡೆದಾಡುತ್ತಿರುವುದು ದುರದೃಷ್ಟಕರ. ಜನರ ಹಾಗೂ ರಾಜ್ಯದ ಬಗ್ಗೆ ಕಾಳಜಿ ಇಲ್ಲದ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ನಡೆಯುವುದು ಅನುಮಾನವೇ. ಇಂತಹ ಸರ್ಕಾರಗಳಿಗೆ ಜನರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ‌ ವಿರುದ್ಧ ಮಾತನಾಡುವ ಪ್ರಿಯಾಂಕ ಖರ್ಗೆ ಅವರಿಗೆ ಗೃಹ ಸಚಿವ ಸ್ಥಾನ ನೀಡಲಾಗಿದೆ. ಜವಾಬ್ದಾರಿಯುತ ಸ್ಥಾನ ಪಡೆದ ಪ್ರಿಯಾಂಕ ಅವರು, ಸಂಘ-ಸಂಸ್ಥೆಗಳನ್ನು ಕಾಮಾಲೆ ಕಣ್ಣಿನಿಂದ ನೋಡದೆ ಅವರ ಕೆಲಸಗಳನ್ನು ಗಮನಿಸಲಿ ತಿಳಿಸಿದ್ದಾರೆ.