ಗದಗ: ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗಳ ಮುಖಾಂತರ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಶಂಕರಗೌಡ ಜಯನಗೌಡ್ರ ಮಾತನಾಡಿ, ವಿದ್ಯುತ್‌ ಖಾಸಗೀಕರಣದಿಂದ ವಿದ್ಯುತ್ ದರ ಏರಲಿದೆ. ಸಬ್ಸಿಡಿ ಕಡಿತ, ಕೃಷಿ ವಲಯ, ಗೃಹಬಳಕೆ ಸೇರಿದಂತೆ ರೈತರಿಗೆ ತೀವ್ರ ತೊಂದರೆಯಾಗಲಿದೆ. ರಾಜ್ಯ ಸರ್ಕಾರ ಟಾಟಾ ಪವರ್ ಕಂಪನಿಗೆ ಪರವಾನಗಿ ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸುತ್ತೇವೆ. ಒಂದು ವೇಳೆ ಖಾಸಗೀಕರಣಕ್ಕೆ ಆದೇಶ ನೀಡಿದ್ದೆ ಆದರೆ ರಾಜ್ಯಾದಂತ ಬಂದ್‌ಗೆ ಕರೆ ಕೊಡುವ ಮೂಲಕ ಸರ್ಕಾರದ ವಿರುದ್ಧ ಬಾರಕೋಲ್ ಚಳವಳಿ, ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ಉಚಿತ ವಿದ್ಯುತ್ ರದ್ದಾಗುವುದು. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲಾಗುವುದು. ಸರ್ಕಾರದ ಯೋಜನೆಗಳಾದ ಗೃಹಜ್ಯೋತಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಗಂಗಾ ಕಲ್ಯಾಣ ಯೋಜನೆಗಳು, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ ಉದ್ದಿಮೆದಾರರಿಗೆ ಮತ್ತು ಹೆಸ್ಕಾಂನಲ್ಲಿ ದುಡಿಯುವ ಕಾರ್ಮಿಕರಿಗೆ ಅಪಾಯಕಾರಿ ಕಾಯ್ದೆ ಜಾರಿಯಾಗುವುದು. ಕೈಮಗ್ಗ ನೇಕಾರರಿಗೆ, ತೋಟಗಾರಿಕೆ ಬೆಳೆಗಾರರಿಗೆ ನೀಡುವ ಸಬ್ಸಿಡಿ ರದ್ದಾಗುವುದು. ನಿರುದ್ಯೋಗಿ ಯುವಕರಿಗೆ ಉದ್ಯೋಗವಕಾಶಗಳಿಂದ ವಂಚಿತರಾಗುವರು ಎಂದರು.ಈ ವೇಳೆ ಬಸವರಾಜ ಮರಾಠ, ಎಂ.ಎಸ್. ಗುತ್ತೇದಾರ, ಮಹದೇವ ವೇರ್ಣೇಕರ, ಗೂಳಪ್ಪ ಗುಡದೂರ, ವೀರೇಶ ಮಾಳೊತ್ತರ, ಟಿ.ವಿ. ಕರವಿ, ಶಂಕರಗೌಡ ಪಾಟೀಲ, ಐ.ಬಿ. ಗದಗಿನ, ಫಕ್ಕೀರೇಶ ಬೆಳ್ಳಟ್ಟಿ, ವಿನಾಯಕ ಅಚಲಕರ, ವೀರೇಶ ಅಚಲಕರ, ಆದೇಶ ಹುಲಗೂರ, ಸಂಜಯ ಚಳಗೇರಿ, ಅನಿಲ ಕರಣೆ, ಹಸನಸಾಬ ದೊಡ್ಡಮನಿ, ಬಸನಗೌಡ ಮಲ್ಲನಗೌಡರ, ವೀರೇಶ ಕರವೀರಮಠ, ಜಗದೀಶ ಅಂಗಡಿ, ಅಂದಪ್ಪ ಅಂಗಡಿ ಸೇರಿದಂತೆ ಅನೇಕ ರೈತರು ಇದ್ದರು.ಸಾಮಾನ್ಯ ಗ್ರಾಹಕರ ಹಿತಾಸಕ್ತಿಗೆ ಧಕ್ಕೆ: ಆರೋಪ


ಮುಳಗುಂದ: ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡಬಾರದು ಎಂದು ಆಗ್ರಹಿಸಿ ಸ್ಥಳೀಯ ರೈತ ಸಂಘಟನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ, ಸ್ಥಳೀಯ ಹೆಸ್ಕಾಂ ಕಚೇರಿ ಅಧಿಕಾರಿ ಪ್ರವೀಣ ಅಸೂಟಿ ಅವರ ಮೂಲಕ ಕರ್ನಾಟಕ ವಿದ್ಯುಶಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.ರೈತ ಸಂಘಟನೆ ಪದಾಧಿಕಾರಿಗಳು ಹಾಗೂ ನೂರಾರು ರೈತರು ಪಟ್ಟಣದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠದಿಂದ ಸ್ಥಳೀಯ ಹೆಸ್ಕಾಂ ಕಚೇರಿ ವರೆಗೆ ಪಾದಯಾತ್ರೆ ನಡೆಸಿ, ವಿದ್ಯುತ್‌ ಖಾಸಗೀಕರಣ ವಿರೋಧಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡಿದರೆ ಭವಿಷ್ಯದಲ್ಲಿ ವಿದ್ಯುತ್ ದರ ಹೆಚ್ಚಾಗುವ ಸಾಧ್ಯತೆ ಇದ್ದು, ಖಾಸಗಿ ಕಂಪನಿಗಳು ಲಾಭದಾಯಕ ಗ್ರಾಹಕರಿಗೆ ಮಾತ್ರ ಆದ್ಯತೆ ನೀಡುವ ಸಂಭವವಿದೆ. ವಿದ್ಯುತ್‌ ಖಾಸಗೀಕರಣದಿಂದ ಗ್ರಾಮೀಣ ಹಾಗೂ ಸಾಮಾನ್ಯ ಗ್ರಾಹಕರ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ. ಜತೆಗೆ ಸರಕಾರಿ ವಿದ್ಯುತ್ ಸಂಸ್ಥೆಗಳ ಆದಾಯ ಕಡಿಮೆಯಾಗುತ್ತದೆ ಎಂದು ರೈತರು ಎಚ್ಚರಿಸಿದರು.ಈ ವೇಳೆ ರೈತ ಸಂಘದ ಅಧ್ಯಕ್ಷ ದೇವಪ್ಪ ಅಣ್ಣಿಗೇರಿ, ಬಸವರಾಜ ಕರಿಗಾರ, ಶಂಕ್ರಯ್ಯ ಹಿರೇಮಠ, ಮಹಮ್ಮದ ಅಲಿ ಶೇಖ್, ಮುತ್ತಪ್ಪ ಬಳ್ಳಾರಿ, ಕಿರಣ ಕುಲಕರ್ಣಿ, ದೇವರಾಜ ಸಂಗನಪೇಟಿ, ಗಂಗಪ್ಪ ವಿಜಾಪುರ, ಮಹಾಂತೇಶ ಹುಣಸಿಮರದ, ಮಹಾಂತೇಶ ಲಾಳಿ, ಮಹಾಂತೇಶ ಗುಂಜಳ, ದತ್ತಣ್ಣ ಯಳವತ್ತಿ, ಬಸವರಾಜ ಮಟ್ಟಿ, ಚನ್ನಪ್ಪ ಕಣವಿ ಸೇರಿದಂತೆ ರೈತರು ಇದ್ದರು.