ಮತ್ತೆ ಗೋಕಾಕ ನಗರಕ್ಕೆ ನುಗ್ಗಿದ ಫಟಪ್ರಭ ನೀರು

| Published : Aug 02 2024, 12:48 AM IST / Updated: Aug 02 2024, 12:49 AM IST

ಸಾರಾಂಶ

ಘಟಪ್ರಭ ನದಿಗೆ 53 ಸಾವಿರ ಕ್ಯುಸೆಕ್‌ ನೀರನ್ನು ಹರಿಬಿಟ್ಟಿರುವ ಪರಿಣಾಮ ಬುಧವಾರ ರಾತ್ರಿ ಮತ್ತೆ ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಲೋಳಸೂರ ಸೇತುವೆ ಮೇಲೆ ಮತ್ತೆ ನೀರು ಬಂದು ಸೇತುವೆ ಮುಳುಗಡೆಯಾಗಿದೆ.

ಕನ್ನಡಪ್ರಭ ವಾರ್ತೆ ಗೋಕಾಕ

ಬುಧವಾರ ಸಂಜೆ ಹಿಡಕಲ್ ಜಲಾಯಶ, ದುಪಧಾಳ, ಮಾರ್ಕಂಡೇಯ, ಬಳ್ಳಾರಿ ನಾಲಾದಿಂದ ಘಟಪ್ರಭ ನದಿಗೆ 53 ಸಾವಿರ ಕ್ಯುಸೆಕ್‌ ನೀರನ್ನು ಹರಿಬಿಟ್ಟಿರುವ ಪರಿಣಾಮ ಬುಧವಾರ ರಾತ್ರಿ ಮತ್ತೆ ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಲೋಳಸೂರ ಸೇತುವೆ ಮೇಲೆ ಮತ್ತೆ ನೀರು ಬಂದು ಸೇತುವೆ ಮುಳುಗಡೆಯಾಗಿದೆ.

ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ನಗರದ ಹಳೆ ದನಗಳ ಪೇಟೆ, ಕುಂಬಾರ ಓಣಿ, ಬೋಜಗರ ಓಣಿ, ಉಪ್ಪಾರ ಓಣಿಗಳಲ್ಲಿ ಮತ್ತೆ ನೀರು ನುಗ್ಗುತ್ತಿದ್ದು, ನೀರು ಕಡಿಮೆಯಾಗಿದೆ ಎಂದು ಕಾಳಜಿ ಕೇಂದ್ರಗಳಿಂದ ಮನೆಗಳಿಗೆ ಬಂದು ಸ್ವಚ್ಛತೆ ಕಾರ್ಯಕೈಗೊಂಡಿದ್ದ ಜನರು ರಾತ್ರಿ ಏಕಾಏಕಿ ನೀರು ಹೆಚ್ಚಾಗಿದ್ದರಿಂದ ಮತ್ತೆ ಕಾಳಜಿ ಕೇಂದ್ರಗಳಿಗೆ ತೆರಳಿದ್ದಾರೆ.

ಕಾಳಜಿ ಕೇಂದ್ರ ತೊರೆಯದಿರಿ: ಕಳೆದೆರಡು ದಿನಗಳಿಂದ ಘಟಪ್ರಭಾ ಪ್ರವಾಹದ ನೀರು ಇಳಿಮುಖವಾಗುತ್ತಿದ್ದಂತೆ ಕಾಳಜಿ ಕೇಂದ್ರ ತೊರೆಯಬೇಡಿ. ಮಳೆಯ ಪ್ರಮಾಣ ಕಡಿಮೆಯಾಗುವವರೆಗೆ ನದಿ ಪಾತ್ರದ ಜನರು ಯಾವುದೇ ಕಾರಣಕ್ಕೂ ಮನೆಗಳಿಗೆ ತೆರಳದಿರಿ ತಾಲೂಕಾಡಳಿತದಿಂದ ಕಾಳಜಿ ಕೇಂದ್ರದ ಸಂತ್ರಸ್ತರಿಗೆ ಖುದ್ದಾಗಿ ನಾವೇ ತಿಳಿಸುತ್ತೇವೆ ಎಂದು ತಹಸೀಲ್ದಾರ ಡಾ.ಮೋಹನ ಭಸ್ಮೆ ಮನವಿ ಮಾಡಿದ್ದಾರೆ.