, ವೆಂಕಟೇಶ್ ಶಾಂತಿಪ್ರಿಯ ರಾಜಕಾರಣಿ. ಹಾಗಾಗಿ ತಾಲೂಕಿನ ಜನತೆ ಶಾಂತಿ ಸೌಹಾರ್ದತೆ ಬಾಳುತ್ತಿದ್ದಾರೆ. ಈ ಹಿಂದೆ ಶಾಸಕರಾಗಿದ್ದ ಮಾಜಿ ಶಾಸಕ ಕೆ. ಮಹದೇವ್ ಏನೆಲ್ಲಾ ಮಾಡಿದ್ದಾರೆ ಎಂದು ತಾಲೂಕಿನ ಜನತೆಗೆ ಗೊತ್ತಿದೆ. ಹಾಗಾಗಿ ಅವರನ್ನು ಜನತೆ ಮನೆಯಲ್ಲಿ ಕೂರಿಸಿದ್ದಾರೆ. ಹೀಗಿರುವಾಗ ತಾಲೂಕಿನ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಅವರನ್ನು ನಿದ್ದೆಗೆಡಿಸಿದೆ.
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಮಾಜಿ ಶಾಸಕ ಕೆ. ಮಹದೇವ್ ಹಾಗೂ ಅವರ ಮಗ ಪಿ.ಎಂ. ಪ್ರಸನ್ನ ಅವರು ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮರೆಮಾಚಿ ಸಚಿವ ಕೆ. ವೆಂಕಟೇಶ್ ಹಾಗೂ ಅವರ ಪುತ್ರ ನಿತಿನ್ ವೆಂಕಟೇಶ್ ಅವರ ವಿರುದ್ಧ ಜನರನ್ನು ಎತ್ತಿಕಟ್ಟುವ ಸಲುವಾಗಿ ಆಧಾರರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಜಿಲ್ಲಾ ಮೈಮುಲ್ ನಿರ್ದೇಶಕ ಬಿ.ಎ. ಪ್ರಕಾಶ್ ಆರೋಪಿಸಿದರು.ಪಟ್ಟಣದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ. ವೆಂಕಟೇಶ್ ಶಾಸಕರಾಗಿ ಆಯ್ಕೆಯಾದ ನಂತರ ಸರ್ಕಾರದ ಪಶುಪಾಲನಾ ಮತ್ತು ರೇಷ್ಮೆ ಖಾತೆ ಸಚಿವರಾದ ಮೇಲೆ ತಾಲೂಕಿನಾದ್ಯಂತ ಅಭಿವೃದ್ಧಿ ಕಾರ್ಯಗಳು ಸರಾಗವಾಗಿ ನಡೆಯುತ್ತಿವೆ. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಅವರು ತಾಲೂಕಿನಾದ್ಯಂತ ಸಂಚರಿಸಿ ಜನತೆಯ ಕಷ್ಟಸುಖ ಆಲಿಸುತ್ತಾ ಪಕ್ಷ ಸಂಘಟನೆ ಹಾಗೂ ರಾಜಕೀಯವಾಗಿ ಗಟ್ಟಿಯಾಗಿ ನಿಲ್ಲುತ್ತಿರುವುದು ಮಾಜಿ ಶಾಸಕ ಕೆ. ಮಹದೇವ್ ಹಾಗೂ ಅವರ ಪುತ್ರ ಪ್ರಸನ್ನ ಅವರನ್ನು ನಿದ್ದೆಗೆಡಿಸಿದೆ. ಹಾಗಾಗಿ ಸಚಿವರು ಹಾಗೂ ಅವರ ಪುತ್ರ ನಿತಿನ್ ವೆಂಕಟೇಶ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ತಾಲೂಕಿನಲ್ಲಿ 206 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಅವುಗಳಲ್ಲಿ ಐದಾರು ಸಂಘಗಳಿಗೆ ಚುನಾವಣೆ ನಡೆಯಬೇಕಿದೆ. ಕೆಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 136 ಅಕ್ರಮ ಮತದಾರರ ಸೇರ್ಪಡೆ ಮಾಡಲಾಗಿದೆ ಎಂದು ಅಲ್ಲಿನ ಸದಸ್ಯರು ಸಹಕಾರ ಸಂಘಗಳ ನಿಬಂಧಕರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ನ್ಯಾಯಾಲಯದ ಆದೇಶದ ಮೇರೆಗೆ ಅಲ್ಲಿನ ಆಡಳಿತ ಮಂಡಳಿ ವಜಾಗೊಳಿಸಿ ಆಡಳಿತಾಧಿಕಾರಿ ನೇಮಿಸಲಾಗಿದೆ.ಇನ್ನು ಚಿಕ್ಕನೇರಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಇಟ್ಟಿದ್ದ 10 ಲಕ್ಷ ರೂ. ಎಫ್.ಡಿ.ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದಾಗಿ ಎಫ್.ಡಿ. ಇಟ್ಟ ರೈತರು ದೂರು ನೀಡಿದ್ದರು. ಹಾಗಾಗಿ ಇದು ರುಜುವಾತಾದ ಕಾರಣಕ್ಕೆ ಅಲ್ಲಿನ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಆಡಳಿತಾಧಿಕಾರಿ ನೇಮಿಸಲಾಗಿದೆ. ಸರ್ಕಾರದ ಆದೇಶದ ಮೇರೆಗೆ ಜನ ಸಾಮಾನ್ಯರ ಅಗತ್ಯತೆಗೆ ಅನುಗುಣವಾಗಿ ಸೌಲಭ್ಯ ತಲುಪಿಸುವ ಉದ್ದೇಶದಿಂದ 7 ಹೊಸ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ. ಇನ್ನು ಟಿಎಪಿಸಿಎಂಎಸ್ ಸಂಸ್ಥೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಂತೆ ಸದಸ್ಯರು ದೂರು ನೀಡಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ. ಇದರಲ್ಲಿ ಸಚಿವರನ್ನು ಎಳೆದು ತರುವುದು ತರವಲ್ಲ ಎಂದರು.
ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ನಿರ್ದೇಶಕ ಬಿ.ಎನ್. ಕರೀಗೌಡ ಮಾತನಾಡಿ, ವೆಂಕಟೇಶ್ ಶಾಂತಿಪ್ರಿಯ ರಾಜಕಾರಣಿ. ಹಾಗಾಗಿ ತಾಲೂಕಿನ ಜನತೆ ಶಾಂತಿ ಸೌಹಾರ್ದತೆ ಬಾಳುತ್ತಿದ್ದಾರೆ. ಈ ಹಿಂದೆ ಶಾಸಕರಾಗಿದ್ದ ಮಾಜಿ ಶಾಸಕ ಕೆ. ಮಹದೇವ್ ಏನೆಲ್ಲಾ ಮಾಡಿದ್ದಾರೆ ಎಂದು ತಾಲೂಕಿನ ಜನತೆಗೆ ಗೊತ್ತಿದೆ. ಹಾಗಾಗಿ ಅವರನ್ನು ಜನತೆ ಮನೆಯಲ್ಲಿ ಕೂರಿಸಿದ್ದಾರೆ. ಹೀಗಿರುವಾಗ ತಾಲೂಕಿನ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಅವರನ್ನು ನಿದ್ದೆಗೆಡಿಸಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರು ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಗೌಡ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸಾಲುಕೊಪ್ಪಲು ಪುಟ್ಟರಾಜು, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಆಲನಹಳ್ಳಿ ರಾಜಣ್ಣ, ಕಿರಂಗೂರು ಮಂಜುನಾಥ್, ಮುಖಂಡರಾದ ಕಾನೂರು ಗೋವಿಂದೇಗೌಡ, ಮಾಕೋಡು ಸುರೇಶ್, ಹಿಟಗಳ್ಳಿ ಮಹಾದೇವ್, ಸತೀಶ್, ಹಬಟೂರು ರಘು ಇದ್ದರು.