ತಂದೆ-ಮಗ ಸೇರಿ ಯತ್ನಾಳರ ಉಚ್ಚಾಟನೆ

| Published : Apr 07 2025, 12:33 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ಶಾಸಕ ಯತ್ನಾಳ ಅವರನ್ನು ಉಚ್ಚಾಟನೆ ಮಾಡಿರುವುದನ್ನು ಖಂಡಿಸಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಯತ್ನಾಳ ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿಸಿದ್ದಾರೆ ಎಂದು ಪಂಚಮಸಾಲಿ ಮುಖಂಡ ಅಪ್ಪಣ್ಣ ಗಂಗನಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ಶಾಸಕ ಯತ್ನಾಳ ಅವರನ್ನು ಉಚ್ಚಾಟನೆ ಮಾಡಿರುವುದನ್ನು ಖಂಡಿಸಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಯತ್ನಾಳ ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿಸಿದ್ದಾರೆ ಎಂದು ಪಂಚಮಸಾಲಿ ಮುಖಂಡ ಅಪ್ಪಣ್ಣ ಗಂಗನಗೌಡರ ಹೇಳಿದರು.

ಯತ್ನಾಳ ಉಚ್ಚಾಟನೆ ವಿರೋಧಿಸಿ ಪಟ್ಟಣದಲ್ಲಿ ರವಿವಾರ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ವೃತ್ತದಿಂದ ವೀರೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಅವರು ಕರ್ನಾಟದಲ್ಲಿ ಹಿಂದು ಹುಲಿ ಯಾರಾದರು ಇದ್ದರೆ ಅದು ಬಸನಗೌಡ ಪಾಟೀಲ ಯತ್ನಾಳ ಮಾತ್ರ. ಆದರೆ, ಅವರನ್ನು ತಂದೆ ಮಗ ಕೂಡಿಕೊಂಡು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಲಿದ್ದಾರೆ. ಬಿಜೆಪಿ ಅಂದರೆ ಯತ್ನಾಳ ಎಂಬ ವಾತಾವರಣ ಕರ್ನಾಟಕದಲ್ಲಿ ನಿರ್ಮಾಣವಾಗಿದೆ. ಇದನ್ನು ಕೇಂದ್ರದ ನಾಯಕರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಮಾಜದ ನಾಯಕರ ವಿಷಯಕ್ಕೆ ಬಂದ ತಂದೆ ಮಕ್ಕಳಿಗೆ 2028ರ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ, ಶೀಘ್ರದಲ್ಲೆ ಯತ್ನಾಳ ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.ಸಮಾಜದ ಮುಖಂಡರ ಸಂಗಮೇಶ ಗಂಗನಗೌಡರ ಮಾತನಾಡಿ, ಯತ್ನಾಳ ಅವರನ್ನು ಪಕ್ಷ ಉಚ್ಚಾಟನೆ ಮಾಡಿದಾಗ ಮುದ್ದೇಬಿಹಾಳ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಯತ್ನಾಳ ಹಿಂದು ಹುಲಿ ಅಲ್ಲ, ಇಲಿ ಎಂದು ನಾಲಿಗೆ ಹರಿಬಿಟ್ಟು ಮಾತನಾಡಿದರು, ಯಾವ ರೀತಿ ಚುನಾವಣೆಯಲ್ಲಿ ಯತ್ನಾಳರು ಹಿಂದು ವಿರೋಧಿಗಳ ಮತ ನನಗೆ ಅವಶ್ಯಕತೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಅದೇ ರೀತಿ ತಾವು ಹೇಳಿಕೆ ನೀಡಿ ಅವಾಗ ನಾವು ನಿಮ್ಮನ್ನು ನಿಜವಾದ ರಾಜಕಾರಣಿ ಎಂದು ಒಪ್ಪಿಕೊಳ್ಳುತ್ತೇವೆ. ಯಾರನ್ನೋ ಮೆಚ್ಚಿಸಲು ಹೋಗಿ ಪಂಚಮಸಾಲಿ ನಾಯಕರ ತಂಟೆಗೆ ಬಂದರೆ ಸಮಾಜ ಸುಮ್ಮನಿರುವದಿಲ್ಲ ಎಂದು ಎಚ್ಚರಿಸಿದರು.ನಡಹಳ್ಳಿ ಭಾವಚಿತ್ರಕ್ಕೆ ಚಪ್ಪಲಿ ಸೇವೆ:

ಪಟ್ಟಣದ ಮುಖ್ಯ ಬಜಾರ್‌ನಲ್ಲಿ ಮೆರವಣಿಗೆ ಸಾಗುತ್ತಿರುವ ಮಧ್ಯ ಬಿ.ಎಸ್.ಯಡಿಯೂರಪ್ಪ, ಎ.ಎಸ್.ಪಾಟೀಲ ನಡಹಳ್ಳಿ, ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾವಚಿತ್ರಗಳಿಗೆ ಚಪ್ಪಲಿ ಸೇವೆ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಮತ್ತೊಂದು ಕಡೆ ವೀರೇಶ್ವರ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎ.ಎಸ್.ಪಾಟೀಲ ನಡಹಳ್ಳಿ, ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಅವರ ಬ್ಯಾನರ್ ಸುಟ್ಟು ಯತ್ನಾಳ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು.

ಈ ವೇಳೆ ಪಂಚಮಸಾಲಿ ಸಮಾಜದ ಶಂಕರರಾವ ದೇಶಮುಖ, ಗುರುಪ್ರಸಾದ ದೇಶಮುಖ, ಎ.ಜಿ.ಗಂಗನಗೌಡರ(ಗುಂಡುಸೌಕಾರ), ಸಂಗಪ್ಪ ಹಂಪನಗೌಡರ, ಅಪ್ಪಣ್ಣ ಗಂಗನಗೌಡರ, ಸಂಗಮೇಶ ಗಂಗನಗೌಡರ, ವೀರೇಶ ಗಂಗನಗೌಡರ, ಮುದಕಪ್ಪ ಕಸಬೇಗೌಡರ, ಮುತ್ತಣ್ಣ ಹಾದಿಮನಿ, ಸಂಗಪ್ಪ ಹಾದಿಮನಿ, ಈರಪ್ಪ ಕರಡಿ, ವಿರೇಶ ಕಸಬೇಗೌಡರ ಹಾಗೂ ಅಪಾರ ಸಂಖ್ಯೆಯಲ್ಲಿ ಪಂಚಮಸಾಲಿ ಸಮಾಜದವರು ಭಾಗವಹಿಸಿದ್ದರು.