ಹುಚ್ಚನಹಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಹಲವಾರು ಜನರಿಗೆ ಮಲೇರಿಯಾ, ಡೆಂಘಿ, ಚಿಕೂನಗುನ್ಯ ರೀತಿಯ ತೀವ್ರ ಸಾಂಕ್ರಾಮಿಕ ಜ್ವರದ ಭೀತಿ ಆವರಿಸಿದ್ದು, ಗ್ರಾಮಸ್ಥರು ಭಯಭೀತರಾಗಿ ಆಡಳಿತದ ವಿರುದ್ಧ ಆಕ್ರೋಶಗೊಂಡಿದ್ದಾರೆ.
ತಿಪಟೂರು: ತಾಲೂಕಿನ ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಚ್ಚನಹಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಹಲವಾರು ಜನರಿಗೆ ಮಲೇರಿಯಾ, ಡೆಂಘಿ, ಚಿಕೂನಗುನ್ಯ ರೀತಿಯ ತೀವ್ರ ಸಾಂಕ್ರಾಮಿಕ ಜ್ವರದ ಭೀತಿ ಆವರಿಸಿದ್ದು, ಗ್ರಾಮಸ್ಥರು ಭಯಭೀತರಾಗಿ ಆಡಳಿತದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಇಲ್ಲಿನ ಚರಂಡಿಗಳಲ್ಲಿ ವಿಪರೀತ ಕೊಳಚೆ ನೀರು ತುಂಬಿಕೊಂಡು ದುರ್ವಾಸನೆ ಭೀರುತ್ತಿದ್ದು ಮನೆಗಳಲ್ಲಿ ಉಸಿರಾಡುವುದೇ ಕಷ್ಟವಾಗಿದೆ. ಸಣ್ಣ ಗಾಳಿ ಬೀಸಿದರೆ ಇಡೀ ಊರಿಗೆ ಊರೇ ಗಬ್ಬುನಾರುತ್ತಿದೆ ಎಂಬುದು ಗ್ರಾಮಸ್ಥರ ಅಳಲಾಗಿದೆ. ಕೊಳಚೆ ನೀರಿಗೆ ವಿಪರೀತ ಸೊಳ್ಳೆಗಳ ಹಾವಳಿ ಆಗಿದೆ. ಇದು ಕಂದಾಯ ಗ್ರಾಮವಾದರೂ ಹುಚ್ಚನಹಟ್ಟಿ ಅಭಿವೃದ್ಧಿ ಮಾತ್ರ ಇನ್ನೂ ಕಂಡಿಲ್ಲ ಇಲ್ಲಿ ಕುಡಿಯುವ ನೀರು, ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಪಂಚಾಯಿತಿಗೆ ಎಷ್ಟು ಬಾರಿ ಮನವಿ ಮಾಡದರೂ ನಮ್ಮ ಗ್ರಾಮದಲ್ಲಿ ಸ್ವಚ್ಛತೆ ಮಾತ್ರ ಇನ್ನು ಕಂಡಿಲ್ಲ. ಇಲ್ಲಿ ಹೆಚ್ಚು ಬಡವರು, ಕೂಲಿಕಾರ್ಮಿಕರೇ ವಾಸಿಸುತ್ತಿದ್ದು ನಿತ್ಯ ಆಸ್ಪತ್ರೆಗಳಿಗೆ ಹಣ ಹೊಂದಿಲಾಗುತ್ತಿಲ್ಲ. ಇತ್ತೀಚೆಗೆ ಕಾಯಿಲೆಯಿಂದ ಒಬ್ಬರು ಸತ್ತು ಹೋಗಿದ್ದರೂ ಆಡಳಿತ ಗಮನ ಹರಿಸಿಲ್ಲ. ಕೂಡಲೇ ಗ್ರಾಮದ ಸ್ವಚ್ಛತೆ, ಆರೋಗ್ಯ ತಪಾಸಣೆ, ಬೀದಿ ದೀಪಗಳ ವ್ಯವಸ್ಥೆ ಆಗದಿದ್ದರೆ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಮುಂದೆ ಧರಣೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.