ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯ ಕುರುಹಿನಶೆಟ್ಟಿ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ನೇಕಾರ ಕುರುಹಿನಶೆಟ್ಟಿ ಪತ್ತಿನ ಸಹಕಾರ ಸಂಘ ಹಾಗೂ ಜಿಲ್ಲಾ ಕುರುಹಿನಶೆಟ್ಟಿ ಸಂಘದ ಸಂಯುಕ್ತ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ 13ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಇದೇ ಜುಲೈ 19ರಂದು ಹಾಸನ ನಗರದ ರವೀಂದ್ರನಗರದಲ್ಲಿರುವ ಜಿಲ್ಲಾ ಕುರುಹಿನಶೆಟ್ಟಿ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ಸಿ. ಕೃಷ್ಣಶೆಟ್ಟಿ ಮತ್ತು ಸಂಘದ ನಿರ್ದೇಶಕರಾದ ತಿಮ್ಮರಾಯಶೆಟ್ಟಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಇದೇ ಭಾನುವಾರ ಬೆಳಿಗ್ಗೆ 11.30 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಕುರುಹಿನಶೆಟ್ಟಿ ಸಮಾಜದ 2025-26ನೇ ಸಾಲಿನಲ್ಲಿ ಸ್ನಾತಕ, ಸ್ನಾತಕೋತ್ತರ ಹಾಗೂ ವಿವಿಧ ವೃತ್ತಿಪರ ಕೋರ್ಸ್ಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಸಿ. ಕೃಷ್ಣಶೆಟ್ಟಿ ವಹಿಸಲಿದ್ದು, ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಜೆ. ಗೌಡ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ಜಿಲ್ಲಾ ಕುರುಹಿನಶೆಟ್ಟಿ ಸಂಘದ ಅಧ್ಯಕ್ಷ ಕೆ. ಎಚ್. ನಾರಾಯಣಶೆಟ್ಟಿ, ಅಧ್ಯಯನ ಪಿಯು ಕಾಲೇಜಿನ ಪ್ರಾಂಶುಪಾಲ ಚರಣ್ ಕುಮಾರ್, ಕುರುಹಿನಶೆಟ್ಟಿ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಪ್ರೇಮಮ್ಮ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಭಾಗವಹಿಸಲಿದ್ದಾರೆ. 2014-15ರಲ್ಲಿ ಸ್ಥಾಪನೆಯಾದ ನೇಕಾರ ಕುರುಹಿನಶೆಟ್ಟಿ ಪತ್ತಿನ ಸಹಕಾರ ಸಂಘವು ಹಾಸನ ಜಿಲ್ಲೆಯ ಕುರುಹಿನಶೆಟ್ಟಿ ಸಮಾಜದ ಏಕೈಕ ಪತ್ತಿನ ಸಹಕಾರ ಸಂಘವಾಗಿದ್ದು, ಕಳೆದ 12 ವರ್ಷಗಳಿಂದ ನಿರಂತರವಾಗಿ ಲಾಭಗಳಿಸಿ ಯಶಸ್ವಿಯಾಗಿ 13ನೇ ವರ್ಷಕ್ಕೆ ಕಾಲಿಟ್ಟಿದೆ.2025-26 ನೇ ಸಾಲಿನಲ್ಲಿ ಸಂಘವು 4,71,964 ನಿವ್ವಳ ಆದಾಯ ಗಳಿಸಿದ್ದು, ಸಂಘದಲ್ಲಿ ಪ್ರಸ್ತುತ 401 ಮಂದಿ ಷೇರುದಾರರು ಇದ್ದಾರೆ. ಸದಸ್ಯರಿಂದ 19 ಲಕ್ಷ ಷೇರು ಬಂಡವಾಳ ಸಂಗ್ರಹಿಸಲಾಗಿದ್ದು, ಇದೇ ಅವಧಿಯಲ್ಲಿ 40.62 ಲಕ್ಷ ಹೂಡಿಕೆ ಹಾಗೂ1.10 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಸಂಘದ ಒಟ್ಟು ದುಡಿಯುವ ಬಂಡವಾಳ 2.29 ಕೋಟಿ ತಲುಪಿದ್ದು, ಪ್ರತಿವರ್ಷ ಸದಸ್ಯರಿಗೆ ಶೇ.10ರಷ್ಟು ಲಾಭಾಂಶ ವಿತರಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲೇ ಅಪರೂಪದ ರೀತಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಈ ಬಾರಿ 28 ಮಂದಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಹರೆಲ್ಲರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಸಂಘದ ಸದಸ್ಯರು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಇಂಡಿಯಾನಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಜುಲೈ19ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿಲ್ಲಾ ಕುರುಹಿನಶೆಟ್ಟಿ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಅವರು ಮನವಿ ಮಾಡಿದರು.ಸಂಘವು ಆರಂಭಿಸಿರುವ ಔದಾರ್ಯ ನಿಧಿ ಮೂಲಕ ನಿಧನರಾದ ಸದಸ್ಯರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಐದು ಮಂದಿ ಪಿಗ್ಮಿ ಏಜೆಂಟರ ಮೂಲಕ ಪ್ರತಿದಿನ ಸುಮಾರು 50 ಸಾವಿರ ಉಳಿತಾಯ ಸಂಗ್ರಹಿಸಲಾಗುತ್ತಿದೆ. ಪ್ರತಿವರ್ಷ ಬಹುಬಣ್ಣದ ಕ್ಯಾಲೆಂಡರ್ ಪ್ರಕಟಿಸಿ ಸದಸ್ಯರಿಗೆ ವಿತರಿಸಲಾಗುತ್ತಿದೆ. ಗೃಹಸಾಲ, ನಿವೇಶನ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ವಿವಿಧ ಹಣಕಾಸು ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಹಾಸನಾಂಬ ಲಯನ್ಸ್ ಕ್ಲಬ್ ವತಿಯಿಂದ ಕುರುಹಿನಶೆಟ್ಟಿ ವಿದ್ಯಾರ್ಥಿನಿಲಯಕ್ಕೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯುಪಿಎಸ್ ಬ್ಯಾಟರಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಕೆ. ಎಚ್. ನಾರಾಯಣಶೆಟ್ಟಿ, ಸಂಘದ ನಿರ್ದೇಶಕರಾದ ತಿಮ್ಮರಾಯಶೆಟ್ಟಿ, ಎಚ್. ವಿ. ಬಾಲಕೃಷ್ಣ, ಚಂದ್ರಶೇಖರ್, ಹೇಮಂತ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.