ಪಾಲಾರ್ ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆ ಸಾವು

| Published : Jul 10 2025, 12:46 AM IST

ಪಾಲಾರ್ ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ವಿಚಾರ ತಿಳಿಯುತ್ತಿದ್ದಂತೆ ವಲಯ ಅರಣ್ಯ ಅಧಿಕಾರಿ ಉಮಾಪತಿ ಹಾಗೂ ವೈದ್ಯಾಧಿಕಾರಿ ಆದರ್ಶ, ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತಪಟ್ಟಿದ್ದ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಯಿತು.

ಕೊಪ್ಪ ಅರಣ್ಯ ಪ್ರದೇಶದಲ್ಲಿ ಆನೆ ದಾಳಿಯಿಂದ ಗಾಯಗೊಂಡ ವ್ಯಕ್ತಿ

ಕನ್ನಡಪ್ರಭ ವಾರ್ತೆ ಹನೂರು

ಪಾಲಾರ್ ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆಯೊಂದು ಸಾವನ್ನಪ್ಪಿದ್ದು, ಮತ್ತೊಂದು ಪ್ರಕರಣದಲ್ಲಿ ಆನೆ ದಾಳಿಯಿಂದ ಮೇಕೆ ಮೇಯಿಸುತ್ತಿದ್ದ ರೈತನೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗದ ಪಾಲಾರ್ ಅರಣ್ಯ ಪ್ರದೇಶದ ದೊಡ್ಡ ಹಳ್ಳ ಗಸ್ತಿನ ಅರಣ್ಯ ಪ್ರದೇಶದಲ್ಲಿ 35 ವರ್ಷ ವಯಸ್ಸಿನ ಹೆಣ್ಣಾನೆ ಸ್ವಾಭಾವಿಕವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ

ಅರಣ್ಯ ಅಧಿಕಾರಿಗಳ ದೌಡು:ವಿಚಾರ ತಿಳಿಯುತ್ತಿದ್ದಂತೆ ವಲಯ ಅರಣ್ಯ ಅಧಿಕಾರಿ ಉಮಾಪತಿ ಹಾಗೂ ವೈದ್ಯಾಧಿಕಾರಿ ಆದರ್ಶ, ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತಪಟ್ಟಿದ್ದ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಯಿತು.

ಆನೆ ಸಾವಿಗೆ ತನಿಖೆಗೆ ಒತ್ತಾಯ:

ಕಾಡಾನೆ ಗಡಿ ಭಾಗದ ಪಾಲಾರ್ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿದ್ದು, ಈ ಬಗ್ಗೆ ಹಿರಿಯ ಅರಣ್ಯಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ.

ಆನೆ ದಾಳಿ ವ್ಯಕ್ತಿಗೆ ಗಾಯ, ಆಸ್ಪತ್ರೆಗೆ ದಾಖಲು:

ಮತ್ತೊಂದು ಪ್ರಕರಣದಲ್ಲಿ ಮಿಣ್ಯಂ ಸಮೀಪದ ಕೊಪ್ಪ ಅರಣ್ಯ ಪ್ರದೇಶದಲ್ಲಿ ಮಹದೇವ ಗೌಡ (60) ಎಂಬ ರೈತನೋರ್ವನಿಗೆ ಕಾಡಾನೆ ದಾಳಿಯಿಂದ ಗಂಭೀರವಾಗಿ ಕಾಲಿಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜರುಗಿದೆ.

ಕೊಪ್ಪ ಗ್ರಾಮದ ರೈತ ಮಹದೇವಗೌಡ ತನ್ನ ಮೇಕೆಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಿಸುತ್ತಿದ್ದಾಗ ಕಾಡಾನೆಯೊಂದು ದಿಢೀರ್ ದಾಳಿ ನಡೆಸಿ, ಅವರ ಎಡಗಾಲನ್ನು ಗಾಯಗೊಳಿಸಿದೆ. ಘಟನೆಯ ಬಳಿಕ ಗಾಯಾಳುವನ್ನು ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆ ಗಾಗಿ ತಮಿಳುನಾಡಿನ ಸಿಂಗಾರಿ ಪಾಳ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅರಣ್ಯದಂಚಿನಲ್ಲಿ ಮಾನವ- ಪ್ರಾಣಿ ಸಂಘರ್ಷ:

5 ಹುಲಿಗಳು ವಿಷದ ಹಸುವಿನ ಮಾಂಸ ತಿಂದು ಮೃತಪಟ್ಟಿರುವ ಬೆನ್ನಲ್ಲೇ ವಲಯ ಅರಣ್ಯ ಪ್ರದೇಶದಲ್ಲಿಯೇ ರೈತನ ಮೇಲೆ ಆನೆ ದಾಳಿ ನಡೆಸಿ ಗಾಯಗೊಂಡಿರುವ ಘಟನೆ ನಡೆದಿದೆ. ಗಾಜನೂರು, ಕೊಪ್ಪ, ಮಿಣ್ಯಾಂ ಸೇರಿದಂತೆ ಅರಣ್ಯದಂಚಿನಲ್ಲಿ ಅರಣ್ಯಾಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷತನಕ್ಕೆ ಮಾನವ- ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿದೆ, ಹೀಗಾಗಿ ಸಂಬಂಧಿಸಿದ ಅರಣ್ಯ ಅಧಿಕಾರಿಗಳು ಕೂಡಲೇ ಇಂತಹ ಘಟನೆಗಳು ಜರುಗದಂತೆ ಕ್ರಮ ವಹಿಸಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.