ಸಾರಾಂಶ
ಬರಗಾಲದ ಪರಿಹಾರವನ್ನು ಎಕರೆಗೆ ₹ 25 ಸಾವಿರ, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಹಾಗೂ ಕೃಷಿಗಾಗಿ ರೈತರ ಪಂಪಸೆಟ್ ಗಳಿಗೆ ದಿನಕ್ಕೆ 10 ಗಂಟೆ ವಿದ್ಯುತ್ ಒದಗಿಸಬೇಕೆಂದು ಆಗ್ರಹಿಸಿ ನರಗುಂದದಲ್ಲಿ ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ಸಂಗನಗೌಡ ಪಾಟೀಲ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ನರಗುಂದ: ಬರಗಾಲದ ಪರಿಹಾರವನ್ನು ಎಕರೆಗೆ ₹ 25 ಸಾವಿರ, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಹಾಗೂ ಕೃಷಿಗಾಗಿ ರೈತರ ಪಂಪಸೆಟ್ ಗಳಿಗೆ ದಿನಕ್ಕೆ 10 ಗಂಟೆ ವಿದ್ಯುತ್ ಒದಗಿಸಬೇಕೆಂದು ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ಸಂಗನಗೌಡ ಪಾಟೀಲ ಸರ್ಕಾರಕ್ಕೆ ಆಗ್ರಹಿಸಿದರು. ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ತಹಸೀಲ್ದಾರ್ಗೆ ಮನವಿ ನೀಡಿ ಆನಂತರ ಅವರು ಮಾತನಾಡಿ, ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆಯಾಗದೆ ರೈತ ಬಿತ್ತನೆ ಮಾಡಿದ ಬೆಳೆಗಳು ತೇವಾಂಶ ಕೊರತೆಯಿಂದ ಬಿಸಿಲಿನ ತಾಪಕ್ಕೆ ಒಣಗಿ ಹೋಗಿವೆ. ಆದ್ದರಿಂದ ಸರ್ಕಾರ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ ಮಾಡಿಕೊಂಡ ರೈತರ ಪ್ರತಿ 1 ಎಕರೆಗೆ 25 ಸಾವಿರ ಪರಿವಾರವನ್ನು ತಕ್ಷಣವೆ ಸರ್ಕಾರ ಬಿಡುಗಡೆ ಮಾಡಬೇಕಂದು ಹೇಳಿದರು. ಕೃಷಿ ಹಾಗೂ ಕಂದಾಯ ಇಲಾಖೆಯಲ್ಲಿ ಫಸಲ್ ಬಿಮಾ ಯೋಜನೆ ಬಗ್ಗೆ ಸರಿಯಾದ ಮಾಹಿತಿ ದೊರೆಯದ ಕಾರಣ ಮಳೆ ಆಧಾರಿತ ಸರಳ ಸಮೀಕ್ಷೆಗೆ ಸಮಸ್ಯೆಯಾಗುತ್ತಿದೆ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು ಎಂದರು.
ತಾಲೂಕಿನಲ್ಲಿರುವ ಹಳ್ಳ ಕೊಳ್ಳಗಳಿಗೆ ಪ್ರತಿ ಕಿಮೀಗೊಂದರಂತೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸಿದರೆ ಅಂತರ್ಜಲ ಹೆಚ್ಚಳ ಆಗುತ್ತದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತುಂಬಾ ಅನುಕೂಲವಾಗುತ್ತದೆ. ಮುಂಗಾರು ಹಂಗಾಮಿನ ಹೆಸರು ಬೆಳೆಗಳಿಗೆ ಮಾತ್ರ ಬೆಳೆ ವಿಮೆಯನ್ನು ಹಾಕಲಾಗಿದೆ. ಇನ್ನುಳಿದ ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಹಾಕಬೇಕೆಂದರು. ಕಳೆದ ಮೂರು ವರ್ಷಗಳಿಂದ ತಾಲೂಕಿನಲ್ಲಿ ಅತಿವೃಷ್ಟಿಯಾಗಿದೆ. ಈ ವರ್ಷ ಅನಾವೃಷ್ಟಿಯಿಂದ ರೈತ ಸಮುದಾಯ ನಲುಗಿ ಹೊಗಿದೆ. ಮುಂಗಾರು ಹೆಸರು ಬೆಳೆಗಳು ಸಂಪೂರ್ಣ ಹಾನಿಯಾಗಿದೆ. ಸಂಕಷ್ಟದಲ್ಲಿರುವ ರೈತರ ಎಲ್ಲ ಬ್ಯಾಂಕುಗಳಲ್ಲಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. ತಹಸೀಲ್ದಾರ ಶ್ರೀಶೈಲ ತಳವಾರ ರೈತರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವದೆಂದು ಹೇಳಿದರು. ಈ ಸಂದರ್ಭದಲ್ಲಿ ಸಂತೋಷ ಮುಧೋಳೆ, ವಿಠ್ಠಲ ಮುಧೋಳೆ, ಬಿ. ಎಚ್. ಗಂಗೋಡಿ, ಎಂ. ಬಿ. ಯಲಿಗಾರ, ವ್ಹಿ .ಎಸ್ . ಹಲಗತ್ತಿ, ಶಿವಾನಂದ ತೆಗ್ಗಿನಮನಿ, ಬಸವರಾಜ ಕಿತ್ತೂರ, ಭೀಮಪ್ಪ ಹಾದಿಮನಿ, ಹನುಮಂತ ಮಲ್ಲಾಪೂರ ಮುಂತಾದವರು ಉಪಸ್ಥಿತರಿದ್ದರು.