ಗಜೇಂದ್ರಗಡ: ತಾಲೂಕಿನ ಹಂಡೇವಜೀರ ಸಮಾಜದ ಪಾಲಕರು ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಜಾತಿ ಆದಾಯ ಪ್ರಮಾಣಪತ್ರ ಪ್ರವರ್ಗ ೨ಎ ಮೀಸಲಾತಿ ಕಲ್ಪಿಸಲು ಒತ್ತಾಯಿಸಿ ಏ. ೨೧ರಂದು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಎಫ್ಐ ಹಾಗೂ ಸಮಾಜದ ಮುಖಂಡರು ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಚಂದ್ರು ರಾಠೋಡ ಮಾತನಾಡಿ, ರಾಜ್ಯದಲ್ಲಿ ಹಂಡೇವಜೀರ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರ.ವರ್ಗ ೨ಎ ಮೀಸಲಾತಿ ನೀಡಲಾಗುತ್ತಿದೆ. ಆದರೆ ಗಜೇಂದ್ರಗಡ ತಾಲೂಕು ದಂಡಾಧಿಕಾರಿಗಳು ಹುಸಿಕಾರಣ ಹೇಳಿ ಅರ್ಜಿಗಳನ್ನು ತಿರಸ್ಕರಿಸಿ ಪ್ರ.ವರ್ಗ ೩ಬಿ ಮೀಸಲಾತಿ ನೀಡುತ್ತಿದ್ದಾರೆ ಎಂದರು.

ಇದು ಸರ್ಕಾರದ, ರಾಜ್ಯಪಾಲರ ಆದೇಶಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪ್ರಸ್ತುತ ವಿದ್ಯಾರ್ಥಿಗಳ ಶಾಲಾ ದಾಖಲಾತಿಯಲ್ಲಿ ಹಂಡೇವಜೀರ ಅಂತ ದೃಢಿಕರಣವಿದೆ. ಇದರ ಹಿಂದೆ ತಾವೇ ಮತ್ತು ಹಿಂದಿನ ತಹಸೀಲ್ದಾರ್ ಪ್ರವರ್ಗ ೨ಎ ಮೀಸಲಾತಿ ನೀಡಿದ್ದಾರೆ. ಆದರೆ ಈಗ ಸಮಾಜದ ವಿದ್ಯಾರ್ಥಿಗಳಿಗೆ ನವೀಕರಣ ಮಾಡುತ್ತಿಲ್ಲ. ಹೊಸ ಅರ್ಜಿಗಳಿಗೆ ಮಾನ್ಯ ಮಾಡದಿರುವುದು ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರವಾಗಿದೆ ಎಂದರು.

ಹೀಗಾಗಿ ಹಂಡೇವಜೀರ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರವರ್ಗ ೨ಎ ಮೀಸಲಾತಿ ನೀಡದಿದ್ದರೆ ಇದೇ ತಿಂಗಳು ಏ. ೨೧ರಂದು ವಿದ್ಯಾರ್ಥಿಗಳು, ಪಾಲಕರು ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದರು. ಹಂಡೇವಜೀರ ಸಮಾಜದ ತಾಲೂಕಾಧ್ಯಕ್ಷ ಬಸವರಾಜ ಅಡುರಾಜುರ ಮಾತನಾಡಿ, ತಾಲೂಕಿನಲ್ಲಿ ಹಂಡೇವಜೀರ ಸಮುದಾಯಕ್ಕೆ ಸೇರಿದ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ತಹಸೀಲ್ದಾರ್ ಅವರು, ಜಾತಿ ಆದಾಯ ಪ್ರಮಾಣಪತ್ರ ಒದಗಿಸಿದೆ. ಹಂಡೇವಜೀರ ಸಮುದಾಯವನ್ನು ಕಡೆಗಣಿಸುತ್ತಿರುವುದು ಸರಿಯಾಗಿ ಕ್ರಮವಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾಗಿ ಅವಕಾಶಗಳನ್ನು ಕಲ್ಪಿಸಲಾಗಿದೆ.

ಆದರೆ ತಾಲೂಕಿನಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದ್ದನ್ನು ಖಂಡಿಸಿ ತಾಲೂಕಿನ ಹಂಡೇವಜೀರ ಸಮಾಜದ ಎಲ್ಲ ವಿದ್ಯಾರ್ಥಿಗಳು, ಪಾಲಕರು ಸೇರಿ ಹೋರಾಟ ಹಮ್ಮಿಕೊಳ್ಳುತ್ತಿದ್ದೆವೆ ಎಂದರು.ಗಣೇಶ ರಾಠೋಡ, ಸುರೇಶಗೌಡ ಪಾಟೀಲ, ಶರಣಗೌಡ ಪಾಟೀಲ, ಮುತ್ತಪ್ಪ ಶರಣಗೌಡ ಪಾಟೀಲ, ರಾಮನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಮಹಾಂತೇಶ ಪಾಟೀಲ, ನಿಂಗನಗೌಡ ಪಾಟೀಲ, ಸಂಗನಗೌಡ ಪಾಟೀಲ, ಸಕ್ರಪ್ಪ ಕುಡಗುದ್ರಿ, ಬಸನಗೌಡ ನರಗುಂದ, ಯಲ್ಲನಗೌಡ ಪಾಟೀಲ, ಈರಣಗೌಡ ಪಾಟೀಲ, ಗವಿಸಿದ್ದಪ್ಪ ಪಾಟೀಲ ಇತರರು ಇದ್ದರು.