ಸಾರಾಂಶ
ಇಲ್ಲಿನ ಸಾಲಿಗ್ರಾಮದ ಪಡುಹೋಳಿ ಎಂಬಲ್ಲಿ ಪತಿ ಪತ್ನಿ ಜಗಳ, ಪತ್ನಿಯ ಕೊಲೆಯಲ್ಲಿ ಕೊನೆಗೊಂಡ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.ಜಯಶ್ರೀ (34) ಕೊಲೆಯಾದ ಮಹಿಳೆ.
ಕೋಟ : ಇಲ್ಲಿನ ಸಾಲಿಗ್ರಾಮದ ಪಡುಹೋಳಿ ಎಂಬಲ್ಲಿ ಪತಿ ಪತ್ನಿ ಜಗಳ, ಪತ್ನಿಯ ಕೊಲೆಯಲ್ಲಿ ಕೊನೆಗೊಂಡ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.ಜಯಶ್ರೀ (34) ಕೊಲೆಯಾದ ಮಹಿಳೆ.
ಆಕೆಯ ಗಂಡ ಕಿರಣ್ ಉಪಾಧ್ಯಾಯ (43) ಆರೋಪಿ, ಆತನನ್ನು ಪೊಲೀಸರು ಬಂಧಿಸಿದ್ದಾರೆ.ಕಿರಣ್ ಇಲ್ಲಿನ ಸಾಸ್ತಾನ ಗ್ರಾಮದ ನಿವಾಸಿ, 9 ತಿಂಗಳ ಹಿಂದೆ ಬೀದರ್ ಜಿಲ್ಲೆಯ ದಂಬಳಾಪುರದ ಜಯಶ್ರಿ ಎಂಬವರನ್ನು ಮದುವೆಯಾಗಿದ್ದರು. ಕೋಟ ದೇವಸ್ಥಾನದಲ್ಲಿ ಅಡುಗೆ ಭಟ್ಟರಾಗಿದ್ದ ಕಿರಣ್, ಪತ್ನಿಯೊಂದಿಗೆ ಮೂರು ತಿಂಗಳ ಹಿಂದೆ ಪಡುಹೋಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಜಯಶ್ರೀ ಅವರಿಗೆ ಮೊಬೈಲಿನಲ್ಲಿ ರೀಲ್ಸ್ ಮಾಡುವ ಚಟ ಇತ್ತು, ಅಲ್ಲದೇ ಇತ್ತೀಚೆಗೆ ಆನ್ಲೈನ್ ವ್ಯವಹಾರ ಕೂಡ ಮಾಡುತ್ತಿದ್ದರು. ಇದು ಕಿರಣ್ಗೆ ಇಷ್ಟವಿಲ್ಲದಿದ್ದುದರಿಂದ ಪ್ರತೀದಿನ ಅವರ ನಡುವೆ ಜಗಳವಾಗುತ್ತಿತ್ತು. ಗುರುವಾರ ರಾತ್ರಿಯೂ ಜಗಳವಾಡಿದ್ದರು. ಶುಕ್ರವಾರ 4 ಗಂಟೆಗೆ ಎದ್ದು ಮತ್ತೆ ಜಗಳವಾಡಿದ್ದು, ತಾರಕಕ್ಕೇರಿ ಕಿರಣ್, ಕತ್ತಿಯಿಂದ ಜಯಶ್ರಿ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಜಯಶ್ರೀ ತಲೆಗೆ ಗಂಭೀರ ಗಾಯವಾಗಿತ್ತು.
ಬೊಬ್ಬೆ ಕೇಳಿ ಬಂದ ಅಕ್ಕಪಕ್ಕದ ಮನೆಯವರು ಗಾಯಗೊಂಡಿದ್ದ ಜಯಶ್ರೀ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಆಕೆ ಅದಾಗಲೇ ವೃತಪಟ್ಟಿದ್ದರು. ಮಾಹಿತಿ ಪಡೆದ ಕೋಟ ಠಾಣಾ ಎಸ್ಐ ಸುಧಾ ಪ್ರಭು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆರೋಪಿ ಕಿರಣ್ನನ್ನು ಬಂಧಿಸಿದ್ದಾರೆ.