ಸಾರಾಂಶ
ಕೊಪ್ಪಳ: ಲೋಕಸಭಾ ಚುನಾವಣೆ ಬಂದಿರುವುದರಿಂದ ಕಾಂಗ್ರೆಸ್ ಪಕ್ಷ ಹಿಜಾಬ್ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ಧರ್ಮ ಧರ್ಮಗಳ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ಬಸವರಾಜ ದಢೇಸ್ಗೂರು ಆರೋಪಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಿಜಾಬ್ ನಿಷೇಧವನ್ನು ವಾಪಸ್ ಪಡೆಯುವ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.ರಾಜ್ಯದ ರೈತರು ಬರದಿಂದ ತತ್ತರಿಸಿದ್ದಾರೆ. ಹನಿ ನೀರಿಗೂ ತತ್ವಾರ ಶುರುವಾಗಿದೆ. ಹೀಗಿದ್ದಾಗ್ಯೂ ಅದಕ್ಕೆ ಸ್ಪಂದಿಸುವುದನ್ನು ಬಿಟ್ಟು ಸುಪ್ರೀಂಕೋರ್ಟಿನಲ್ಲಿರುವ ಹಿಜಾಬ್ ವಿಷಯವನ್ನು ಪ್ರಸ್ತಾಪಿಸಿ ಬೆಂಕಿ ಹಚ್ಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಿ, ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ರೈತರು ಬರದಿಂದ ಬಳಲುತ್ತಿದ್ದರೂ ಪರಿಹಾರ ನೀಡಿಲ್ಲ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ₹25 ಸಾವಿರ ಬರಪರಿಹಾರ ನೀಡಿದೆ. ಆದರೆ, ಈಗ ಕೇವಲ ₹2 ಸಾವಿರ ನೀಡುತ್ತಿದ್ದಾರೆ. ಹಳ್ಳಿಗಳಿಗೆ ಹೋದರೆ ಕಾಂಗ್ರೆಸ್ ನಾಯಕರಿಗೆ ಜನರು ಕಲ್ಲು ತೆಗೆದುಕೊಂಡು ಹೊಡೆಯುತ್ತಾರೆ. ಅಷ್ಟೊಂದು ಆಕ್ರೋಶಿತರಾಗಿದ್ದಾರೆ. ಹನುಮಮಾಲೆ ವಿಸರ್ಜನಾ ಕಾರ್ಯಕ್ರಮಕ್ಕೆ ಭಕ್ತರು ನೀಡಿರುವ ಹಣವನ್ನೇ ಬಳಕೆ ಮಾಡುತ್ತಿದ್ದಾರೆಯೇ ಹೊರತು ಸರ್ಕಾರದಿಂದ ನಯಾಪೈಸೆ ನೀಡುತ್ತಿಲ್ಲ ಎಂದು ದೂರಿದರು.ಸಮಾಂತರ ಜಲಾಶಯ ಕುರಿತು ಸಿಎಂ ಸಿದ್ದರಾಮಯ್ಯ ಸಮ್ಮತಿಸಿದರೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸುಳ್ಳು ಹೇಳಿ, ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.