ಭರ್ತಿಯಾದ ನಾರಿಹಳ್ಳ ಜಲಾಶಯ: ಎರಡು ಗೇಟ್‌ಗಳ ಮೂಲಕ ಹೆಚ್ಚುವರಿ ನೀರು ಹೊರಕ್ಕೆ

| Published : Jun 14 2025, 01:16 AM IST

ಭರ್ತಿಯಾದ ನಾರಿಹಳ್ಳ ಜಲಾಶಯ: ಎರಡು ಗೇಟ್‌ಗಳ ಮೂಲಕ ಹೆಚ್ಚುವರಿ ನೀರು ಹೊರಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಡೂರು ಪಟ್ಟಣ ಹಾಗೂ ದೋಣಿಮಲೈ ಟೌನ್‌ಶಿಪ್‌ಗಳಿಗೆ ಕುಡಿಯುವ ನೀರು ಪೂರೈಸುವ ನಾರಿಹಳ್ಳ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಜಲಾಶಯದ ಎರಡು ಗೇಟ್‌ಗಳ ಮೂಲಕ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ.

ಸಂಡೂರು: ಸಂಡೂರು ಪಟ್ಟಣ ಹಾಗೂ ದೋಣಿಮಲೈ ಟೌನ್‌ಶಿಪ್‌ಗಳಿಗೆ ಕುಡಿಯುವ ನೀರು ಪೂರೈಸುವ ನಾರಿಹಳ್ಳ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಜಲಾಶಯದ ಎರಡು ಗೇಟ್‌ಗಳ ಮೂಲಕ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ.

ನಾರಿಹಳ್ಳದ ಪಾತ್ರದಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಜಲಾಶಯದಿಂದ ಸ್ವಲ್ಪ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.

ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ ೦.೮೧ ಟಿಎಂಸಿ. ಜಲಾಶಯದ ಒಳ ಹರಿವಿನ ಪ್ರಮಾಣ ೭೦೦ ಕ್ಯುಸೆಕ್ ಇದೆ. ಗುರುವಾರ ರಾತ್ರಿಯಿಂದ ಶುಕ್ರವಾರ ಜಲಾಶಯದ ಎರಡು ಗೇಟ್‌ಗಳ ಮೂಲಕ ಒಟ್ಟು ೧೪೦೦ ಕ್ಯುಸೆಕ್ ನೀರನ್ನು ಹೊರ ಬಿಡಲಾಗಿದೆ ಎಂದು ಜಲಾಶಯದ ಸಹಾಯಕ ಎಂಜಿನಿಯರ್ ಧನಾರ್ಜುನ ರೆಡ್ಡಿ ''''ಕನ್ನಡಪ್ರಭ''''ಕ್ಕೆ ತಿಳಿಸಿದರು. ಮೈದುಂಬಿಕೊಂಡಿರುವ ನಾರಿಹಳ್ಳ ಜಲಾಶಯವು ನೋಡುಗರ ಕಣ್ಮನ ಸೆಳೆಯುತ್ತಿದೆ.

ಕೊಟ್ಟೂರು ತಾಲೂಕಿನಲ್ಲಿ ಮನೆಗೆ ಹಾನಿ: ಕೊಟ್ಟೂರು ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಮಳೆ ಬಿಟ್ಟು ಬಿಟ್ಟು ಬರುತ್ತಿದ್ದು, ಹೊನ್ನಿಹಳ್ಳಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿದೆ. ಪ್ರಾಣಾಪಾಯವಾಗಿಲ್ಲ.

ಕೊಟ್ಟೂರಿನಲ್ಲಿ 7.4 ಮಿಮೀ ಮಳೆ ಆಗಿದೆ. ತಾಲೂಕಿನ ಕೋಗಳಿಯಲ್ಲಿ 3.2 ಮಿಮೀ ಮಳೆ ಬಿದ್ದಿದೆ. ಒಟ್ಟು ತಾಲೂಕಿನಲ್ಲಿ ಮಳೆಯ ಪ್ರಮಾಣ 10.6 ಮಿಮೀ ಇತ್ತು. ಎಲ್ಲ ಕಡೆ ಕೃಷಿಭೂಮಿಗಳು ಸಂಪೂರ್ಣ ಜಲಾವೃತಗೊಂಡಿವೆ. ರೈತರು ಬಿತ್ತನೆ ಮಾಡಿದ ಬೆಳೆಗಳು ವಿಪರೀತ ಮಳೆಯಿಂದಾಗಿ ಕೊಳೆತು ಹೋಗತೊಡಗಿವೆ. ಇನ್ನು ಕೆಲವು ರೈತರು ಬಿತ್ತನೆ ಕಾರ್ಯ ಕೈಗೊಳ್ಳಲು ಕಾಯುತ್ತಿದ್ದು, ಒಂದು ವಾರ ಕಾಯಬೇಕು ಎಂದು ಕೃಷಿ ಇಲಾಖೆ ಸಲಹೆ ನೀಡಿದೆ.ತಾಲೂಕಿನ ಹೊನ್ನಿಹಳ್ಳಿ ಗ್ರಾಮದಲ್ಲಿ ಕವಿತಾ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ನಷ್ಟದ ಅಂದಾಜನ್ನು ಪರಿಶೀಲಿಸುವ ಕಾರ್ಯವನ್ನು ಕಂದಾಯ ಅಧಿಕಾರಿಗಳು ಕೈಗೊಂಡಿದ್ದಾರೆ.

ಮಳೆ ಗಾಳಿಗೆ 4 ಮನೆ ಕುಸಿತ: ಹೂವಿನಹಡಗಲಿ ತಾಲೂಕಿನಲ್ಲಿ ವಿವಿಧ ಕಡೆಗಳಲ್ಲಿ ಮಳೆಯಾಗುತ್ತಿದ್ದು, ಇದರ ಪರಿಣಾಮ 4 ಮಣ್ಣಿನ ಮನೆಗಳು ಕುಸಿದು ಬಿದ್ದಿವೆ. ಹಿರೇಮಲ್ಲನಕೆರೆ, ಹರವಿ, ಕೊಯಿಲಾರಗಟ್ಟಿ, ಕೊಂಬಳಿ ಗ್ರಾಮದಲ್ಲಿ ತಲಾ ಒಂದು ಮನೆ ಕುಸಿದು ಬಿದ್ದಿವೆ. ಆದರೆ ಯಾವ ಜೀವ ಹಾನಿ ಸಂಭವಿಸಿಲ್ಲ. ನಿರಂತರವಾಗಿ ಹಳ್ಳಗಳು ತುಂಬಿ ಹರಿಯುತ್ತಿವೆ. ಮಳೆ ನೀರಿನ ರಭಸಕ್ಕೆ ರಸ್ತೆಯಂತೂ ಕೆಸರು ಗದ್ದೆಯಂತಾಗಿವೆ.