ಸಾರಾಂಶ
ಚಿತ್ರನಟಿ ಭಾವನಾ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಪರ ಭರಮಸಾಗರದಲ್ಲಿ ಮತ ಯಾಚನೆ ಮಾಡಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ:
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಚಲನಚಿತ್ರ ನಟಿ ಭಾವನಾ ಮಂಗಳವಾರ ಸಂಜೆ ಭರಮಸಾಗರದಲ್ಲಿ ಮಾಜಿ ಸಚಿವ ಎಚ್. ಆಂಜನೇಯ ಅವರೊಂದಿಗೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಪರವಾಗಿ ಮಿಂಚಿನ ಪ್ರಚಾರ ನಡೆಸಿದರು.ನೆರೆದಿದ್ದ ಅಪಾರ ಸಂಖ್ಯೆಯ ಮಹಿಳೆಯರೊಂದಿಗೆ ಸಂವಾದ ನಡೆಸಿದ ನಟಿ ಭಾವನಾ ಎಲ್ಲರಿಗೂ ಗೃಹಲಕ್ಷ್ಮಿ ಹಣ ಬರುತ್ತಿದೆಯಾ? ಗೃಹಜ್ಯೋತಿ ವಿದ್ಯುತ್ ಯೋಜನೆ ಅಡಿಯಲ್ಲಿ ಯಾರೂ ಕರೆಂಟ್ ಬಿಲ್ ಕಟ್ಟುತ್ತಿಲ್ಲ ತಾನೇ? ಶಕ್ತಿ ಯೋಜನೆ ಅಡಿಯಲ್ಲಿ ಎಲ್ಲ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದೀರಿ ತಾನೇ? ಎಂದು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶ್ನಿಸಿ ಎಲ್ಲರಿಂದ ಹೌದು ಹೌದು ಎಂಬ ಉತ್ತರ ಪಡೆದಾಗ ಎಲ್ಲರು ಹರ್ಷದಿಂದ ಚಪ್ಪಾಳೆ ತಟ್ಟಿದರು.
ಹಾಗಾದರೆ ನಿಮ್ಮ ಮತ ಯಾರಿಗೆ..? ಎಂಬ ಭಾವನಾ ಅವರ ಮತ್ತೊಂದು ಪ್ರಶ್ನೆಗೆ ನಮ್ಮ ಮತ ಸಿದ್ದರಾಮಯ್ಯನವರಿಗೆ, ನಮ್ಮ ಮತ ಹಸ್ತದ ಗುರುತಿಗೆ, ನಮ್ಮ ಮತ ಬಿ.ಎನ್.ಚಂದ್ರಪ್ಪ ನವರಿಗೆ ಎಂದು ಎಲ್ಲರೂ ಗಟ್ಟಿ ಧ್ವನಿಯಲ್ಲಿ ಕೂಗುವ ಮೂಲಕ ಎಲ್ಲರಲ್ಲೂ ಉತ್ಸಾಹ ಚಿಮ್ಮುವಂತೆ ಮಾಡಿದರು. ಈ ವೇಳೆ ಕೆಪಿಸಿಸಿ ಕಾರ್ಯದರ್ಶಿ ಶ್ರೀ ಎಸ್.ಎಮ್.ಎಲ್. ತಿಪ್ಪೇಸ್ವಾಮಿ, ಕೆಪಿಸಿಸಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಲಿಂಗರಾಜ್ ಡಿ.ಎ. ಭರಮಸಾಗರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಗ್ರಾಪಂ ಅಧ್ಯಕ್ಷ ಹರೀಶ್ ಕುಮಾರ್, ಗ್ರಾಪಂ ಸದಸ್ಯ ಜಹೀರ್ ಅಹಮದ್, ಕಾಂಗ್ರೆಸ್ ಮುಖಂಡರಾದ ಪ್ರವೀಣ್, ಅನಿಲ್ ಬೇವಿನಹಳ್ಳಿ, ವೆಂಕಟೇಶ್ ಬೇವಿನಹಳ್ಳಿ ಮುಂತಾದವರು ಹಾಜರಿದ್ದರು.