ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಜನವರಿ 2 ರಿಂದ ಕರಾವಳಿ ಉತ್ಸವದ ಅಂಗವಾಗಿ ಭಾರತ್ ಸಿನಿಮಾ ಮಾಲ್ನಲ್ಲಿ ಫಿಲ್ಮ್ ಫೆಸ್ಟಿವಲ್ ಏರ್ಪಡಿಸಲಾಗಿದ್ದು ಉಚಿತ ಚಲನಚಿತ್ರ ಪ್ರದರ್ಶನ ಹಾಗೂ ಯುವ ಮ್ಯೂಸಿಕಲ್ ನೈಟ್ ಪ್ರದರ್ಶನ ನಡೆಯಲಿದೆ. ಕದ್ರಿ ಪಾರ್ಕ್ನಲ್ಲಿ ಜನವರಿ 4 ರಂದು ಹಳೆ ವಾಹನಗಳ ಪ್ರದರ್ಶನ ಮತ್ತು 5ರಂದು ಶ್ವಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ಪತ್ರ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕರಾವಳಿ ಉತ್ಸವ ಮೈದಾನದಲ್ಲಿ ಪ್ರದರ್ಶನ ಮೇಳ, ಕದ್ರಿ ಪಾರ್ಕ್ನಲ್ಲಿ ರೊಬೊಟಿಕ್ ಬಟರ್ಫ್ಲೈ ಶೋ ಸೇರಿದಂತೆ ಕರಾವಳಿ ಉತ್ಸವ ಉತ್ತಮ ಆಕರ್ಷಣೆ ಪಡೆದಿದೆ. ಇದೀಗ ಶ್ವಾನ ಪ್ರದರ್ಶನ, ಯುವ ಮನ ಹಾಗೂ ಚಲನಚಿತ್ರೋತ್ಸವದ ಮೂಲಕ ಕರಾವಳಿ ಉತ್ಸವಕ್ಕೆ ಇನ್ನಷ್ಟುಮೆರುಗು ನೀಡುವ ಪ್ರಯತ್ನ ನಡೆಯುತ್ತಿದೆ ಎಂದರು.ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನೇತೃತ್ವದಲ್ಲಿ ಜ.5ರಂದು ಶ್ವಾನ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನದಲ್ಲಿ 3ರಿಂದ 6 ತಿಂಗಳು, ಆರು ತಿಂಗಳಿನಿಂದ ಒಂದು ವರ್ಷ ಹಾಗೂ 1 ವರ್ಷ ಮೇಲ್ಪಟ್ಟು ತಳಿವಾರು ಸ್ಪರ್ಧೆ ನಡೆಯಲಿದ್ದು, ಪ್ರಥಮ ಬಹುಮಾನವಾಗಿ 10,000 ರು., ದ್ವಿತೀಯ 7,500 ರು. ಹಾಗೂ ತೃತೀಯ 5,000 ರು. ಬಹುಮಾನ ನೀಡಲಾಗುವುದು ಎಂದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪೊಲೀಸ್ ಶ್ವಾನದಳದಿಂದ ಆಕರ್ಷಕ ಪ್ರದರ್ಶನ ಈ ಸಂದರ್ಭ ನಡೆಯಲಿದೆ. ಅಪರಾಧ ಪತ್ತೆ ಕಾರ್ಯದಲ್ಲಿ ಶ್ವಾನಗಳ ಪಾಲ್ಗೊಳ್ಳುವಿಕೆ, ಅವುಗಳಿಗೆ ಇಲಾಖೆಯಿಂದ ನೀಡಲಾಗುವ ತರಬೇತಿ ಬಗ್ಗೆಯೂ ಪ್ರದರ್ಶನದಲ್ಲಿ ಮಾಹಿತಿ ನೀಡಲಾಗುತ್ತದೆ ಎಂದರು.4-5 ರಂದು ಯುವ ಮನ: ಕರಾವಳಿ ಉತ್ಸವದ ಭಾಗವಾಗಿ ಯುವಜನತೆಯ ಆಕರ್ಷಣೆಗಾಗಿ ‘ಯುವ ಮನ’ ಎಂಬ ವಿಶೇಷ ಕಾರ್ಯಕ್ರಮ ಕದ್ರಿ ಪಾರ್ಕ್ನಲ್ಲಿ ಜ. 4 ಮತ್ತು 5ರಂದು ನಡೆಯಲಿದೆ.ಜ. 4ರಂದು ಸಂಜೆ 3ರಿಂದ 6ರವರೆಗೆ ಕಾರು ಮತ್ತು ಬೈಕ್ಗಳ ಪ್ರದರ್ಶನ ನಡೆಯಲಿದೆ. ಇದರಲ್ಲಿ ವಿಂಜೇಟ್ ಕಾರು, ಬೈಕುಗಳಲ್ಲದೆ, ವಿನೂತನ ಮಾದರಿಯ ಹೊಸ ಕಾರು ಹಾಗೂ ಬೈಕ್ಗಳ ಪ್ರದರ್ಶನವೂ ಇರಲಿದೆ. ಜ. 5 ರಂದು ಬೆಳಗ್ಗೆ 7 ರಿಂದ 8.30ರ ವರೆಗೆ ಜಿಲ್ಲೆಯ ವಯೋಲಿನ್ ವಾದಕರಿಂದ ಉದಯ ರಾಗ ಎಂಬ ವಿಶೇಷ ಕಾರ್ಯಕ್ರಮ ಕದ್ರಿ ಪಾರ್ಕ್ನ ಮುಖ್ಯವೇದಿಕೆಯಲ್ಲಿ ನಡೆಯಲಿದೆ. ಎರಡು ದಿನ ಸಂಜೆ 5 ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಗಳ ಸಂದರ್ಭ ಕದ್ರಿ ಉದ್ಯಾನವನ ನಡುವಿನ ರಸ್ತೆಯಲ್ಲಿ ಸಾರ್ವಜನಿಕರ ವಾಹನ ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ದ.ಕ.ಜಿಲ್ಲಾ ಉಪನಿರ್ದೇಶಕ ಡಾ. ಅರುಣ್ ಕುಮಾರ್, ಎಸ್ಪಿ ಯತೀಶ್ ಎನ್., ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ರಶ್ಮಿ ಇದ್ದರು....................ಜ.17ರಿಂದ 25 ರಾಜ್ಯ ಮಟ್ಟದ ಒಲಂಪಿಕ್ಮಂಗಳಾ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಉದ್ಘಾಟನೆಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಜ. 17ರಿಂದ 23ರವರೆಗೆ ದ.ಕ. ಮತ್ತು ಉಡುಪಿ ಜಿಲ್ಲೆಯ ಆತಿಥ್ಯದಲ್ಲಿ ಒಳಗೊಂಡಂತೆ ಮಂಗಳೂರಲ್ಲಿ ರಾಜ್ಯ ಮಟ್ಟದ ಒಲಂಪಿಕ್ಸ್ ಕ್ರೀಡಾಕೂಟ ಆಯೋಜಿಸಲಾಗಿದೆ.ಜ.17ರಂದು ಸಂಜೆ 5 ಗಂಟೆಗೆ ಮಂಗಳಾ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮ್ಯ ರಾಜ್ಯ ಒಲಿಂಪಿಕ್ಸ್ಗೆ ಚಾಲನೆ ನೀಡಲಿದ್ದಾರೆ. ದ.ಕ. ಜಿಲ್ಲೆಯಲ್ಲಿ 12 ವಿವಿಧ ಕ್ರೀಡೆಗಳು ವಿವಿಧ ಕಡೆಗಳಲ್ಲಿ ಹಾಗೂ ಉಡುಪಿ ಜಿಲ್ಲೆಯಲ್ಲಿ 11 ವಿವಿಧ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ಅಥ್ಲೇಟ್ಗಳು ಸೇರಿದಂತೆ ಒಟ್ಟು 4,000ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.