ಸಾರಾಂಶ
ಕನ್ನಡಪ್ರಭ ವಾರ್ತೆ ಹುಲಸೂರು
ಗ್ರಾಮೀಣ ಜೀವನೋಪಾಯ ಅಭಿಯಾನದಡಿ ನಡೆಸುವ ಸಂಜೀವಿನಿ ಮಾಸಿಕ ಸಂತೆಯು ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತಗೊಳಿಸುತ್ತ ಮುನ್ನುಗ್ಗುತ್ತಿದೆ, ಇನ್ನೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಅಭಿಯಾನದ ಲಾಭ ಪಡೆದುಕೊಂಡು ಸ್ವಾಲಂಬಿಯಾಗ ಬೇಕೆಂದು ಇಲ್ಲಿನ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ವೈಜಣ್ಣ ಫುಲೆ ಹೇಳಿದರು.ಅವರು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಹುಲಸೂರ ತಾ.ಪಂ. ಸಹಕಾರದೊಂದಿಗೆ ದೀಪಾವಳಿ ನಿಮಿತ್ತ ಪಟ್ಟಣದ ತಾ.ಪಂ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶೇಷ ದೀಪ ಸಂಜೀವಿನಿ ಹಾಗೂ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಾಸಿಕ ಸಂತೆ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಯಾ ಗ್ರಾಪಂಗಳಲ್ಲಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಿದ್ದು, ಸಂಘದ ಸದಸ್ಯರು ಸ್ವ-ಉದ್ಯೋಗ ಸೃಷ್ಟಿಸಿ ಉತ್ತಮವಾಗಿ ಜೀವನ ನಡೆಸುತ್ತಿದ್ದಾರೆ. ಸಂಘದಿಂದ ಇನ್ನಷ್ಟು ಸೃಜನಾತ್ಮಕ ಕಸುಬುಗಳು ಹುಟ್ಟಲಿ ಇದಕ್ಕೆ ತಾಲೂಕು ಪಂಚಾಯತ್ ಯಾವಾಗಲೂ ನಿಮ್ಮ ಬೆನ್ನೆಲುಬಾಗಿ ನಿಂತಿದೆ ಎಂದರು.ನವೀನ್ ಕುಮಾರ ಅವರು ಮಾತನಾಡಿ, ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಸಂಘದ ಮಹಿಳೆಯರು ತಾವು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕಾಗಿ ಸಂಜೀವಿನಿ ಶೆಡ್ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. ಸಂಜೀವಿನಿ ಕ್ಯಾಂಟಿನ್ ಕೂಡ ಆರಂಭಿಸಿ ಸ್ವಾವಲಂಬಿಗಳಾಗಬಹುದು. ಸ್ವ-ಸಹಾಯ ಸಂಘದ ಮಹಿಳೆ ಯರು ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳ ಖರೀದಿಗೆ ಗ್ರಾಹಕರು ಕೂಡ ಮುಂದೆ ಬಂದು ದೇಶಿ ಉತ್ಪನ್ನಗಳನ್ನು ಉಳಿಸಿ ಬೆಳೆಸಬೇಕು ಎಂದರು.
ಬಿಆರ್ಪಿ ಪೂಜಾ ಪ್ರಾಸ್ತಾವಿಕ ಮಾತನಾಡಿ, ಈ ಸಂತೆ ಮೇಳದಲ್ಲಿ ಮಣ್ಣಿನಿಂದ ಮಾಡಲ್ಪಟ್ಟ ದೀಪಗಳು, ಹಣತೆ ಪಣತಿಗಳು ಮತ್ತು ಅಗರಬತ್ತಿ, ಶೇಂಗಾ ಚಟ್ನಿ, ಚಹಾ ಪುಡಿ ಇತ್ಯಾದಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟಕ್ಕಿಡಲಾಗಿದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ತಾಪಂ ಸಹಾಯಕ ಲೆಕ್ಕಾಧಿಕಾರಿ ಮಾಧವ ನಿರ್ಮಲೆ, ಪ್ರವೀಣ ಕುಮಾರ, ಮಲ್ಲಿಕಾರ್ಜುನ ಕಂಬ್ಳಿ, ತಾಪಂ ಸಿಬ್ಬಂದಿ ವರ್ಗ, ವಿವಿಧ ಗ್ರಾಪಂಗಳಿಂದ ಆಗಮಿಸಿದ ಎಂಬಿಕೆ, ಎಸ್ಸಿಆರ್ಪಿ, ಪಶು ಸಖಿ, ಕೃಷಿ ಸಖಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ತಾಲೂಕು ಐಇಸಿ ಸಂಯೋಜಕ ಗಣಪತಿ ಹರಕೂಡೆ ನಿರೂಪಿಸಿದರು.ದೀಪಾವಳಿ ನಿಮಿತ್ತ ತಾ.ಪಂ ಆವರಣದಲ್ಲಿ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಾಸಿಕ ಸಂತೆ ಮೇಳ ಕಾರ್ಯಕ್ರಮ ಆಯೋಜನೆ