ಸಾರಾಂಶ
ನರಸಿಂಹರಾಜಪುರದಲ್ಲಿ ನಾಝೀಮ್ ಎಂಬುವರಿಗೆ ಸೇರಿದ ಮರದಿಂದ ಪೀಠೋಪಕರಣ ತಯಾರಿಕಾ ಶೆಡ್ಗೆ ಮಂಗಳವಾರ ಬೆಳಗಿನ ಜಾವ ಬೆಂಕಿ ಬಿದ್ದು ಪೀಠೋಪಕರಣಗಳು, ಸಾಗುವಾನಿ ಮರದ ತುಂಡುಗಳು ಸುಟ್ಟು ಹೋಗಿವೆ
ನಾಝೀಮ್ಗೆ ಸೇರಿದ ಮಳಿಗೆಯಲ್ಲಿ ದುರಂತ
ನರಸಿಂಹರಾಜಪುರ: ಪಟ್ಟಣದ 1 ನೇ ವಾರ್ಡಿನಲ್ಲಿ ಬರುವ ಶಾರದಾ ವಿದ್ಯಾಮಂದಿರ ಹಿಂಭಾಗದ ರಸ್ತೆಯಲ್ಲಿದ್ದ ನಾಝೀಮ್ ಎಂಬುವರಿಗೆ ಸೇರಿದ ಮರದಿಂದ ಪೀಠೋಪಕರಣ ತಯಾರಿಕಾ ಶೆಡ್ಗೆ ಮಂಗಳವಾರ ಬೆಳಗಿನ ಜಾವ ಬೆಂಕಿ ಬಿದ್ದು ಪೀಠೋಪಕರಣಗಳು, ಸಾಗುವಾನಿ ಮರದ ತುಂಡುಗಳು ಸುಟ್ಟು ಹೋಗಿವೆ. ಇದರಿಂದ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ದಿನಪತ್ರಿಕೆ ಹಾಕಲು ಬಂದವರೊಬ್ಬರಿಗೆ ಶೆಡ್ಗೆ ಬೆಂಕಿ ಬಿದ್ದಿರುವುದು ಗೊತ್ತಾಗಿದೆ. ತಕ್ಷಣ ಶೆಡ್ನಿಂದ ಸ್ವಲ್ಫ ದೂರದಲ್ಲಿದ್ದ ಮಾಲೀಕರ ಮನೆಗೆ ಹೋಗಿ ತಿಳಿಸಿದ್ದಾನೆ. ಮನೆಯವರು ಹಾಗೂ ಅಕ್ಕಪಕ್ಕದವರು ಸೇರಿ ಸಮೀಪದಲ್ಲಿದ್ದ 2 ಬೋರ್ ವೆಲ್ ನೀರಿನಿಂದ ಬೆಂಕಿ ನಂದಿಸಿದ್ದಾರೆ. ಆದರೆ, ಕೆಲವು ಸಾಗುವಾನಿ ಮರಗಳು, ಪೀಠೋಪಕರಣಗಳು ಬೆಂಕಿ ಕೆನ್ನಾಲಿಗೆಗೆ ಸುಟ್ಟು ಹೋಗಿವೆ.
ಸುಮಾರು 10 ಲಕ್ಷ ರುಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದು ಬಂದಿಲ್ಲ. ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಲಾಗಿದೆ. ಸ್ಥಳಕ್ಕೆ 1 ನೇ ವಾರ್ಡಿನ ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದ,ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ,ನರಸಿಂಹರಾಜಪುರ ಉಪ ವಲಯ ಅರಣ್ಯಾಧಿಕಾರಿ ಗೌಸ್ ಮಹಿಯುದ್ದೀನ್, ರೆವೆನ್ಯೂ ಇನ್ಸ್ಪೆಕ್ಟರ್ ಮಂಜುನಾಥ್, ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ ಬೇಟಿ ನೀಡಿ ಪರಿಶೀಲನೆ ನಡೆಸಿದರು.