ಪೀಠೋಪಕರಣ ಮಳಿಗೆಯಲ್ಲಿ ಅಗ್ನಿ ಅವಘಡ:ಕೋಟ್ಯಂತರ ಮೌಲ್ಯದ ವಸ್ತು ಭಸ್ಮ

| Published : Sep 27 2025, 02:00 AM IST

ಪೀಠೋಪಕರಣ ಮಳಿಗೆಯಲ್ಲಿ ಅಗ್ನಿ ಅವಘಡ:ಕೋಟ್ಯಂತರ ಮೌಲ್ಯದ ವಸ್ತು ಭಸ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಪೀಠೋಪಕರಣ ಮಾರಾಟ ಮಳಿಗೆಯೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಕೋಟ್ಯಂತರ ರು. ಮೌಲ್ಯದ ವಸ್ತುಗಳು ಸುಟ್ಟು ಹೋಗಿರುವ ಘಟನೆ ಮಲ್ಲೇಶ್ವರದಲ್ಲಿ ಶುಕ್ರವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪೀಠೋಪಕರಣ ಮಾರಾಟ ಮಳಿಗೆಯೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಕೋಟ್ಯಂತರ ರು. ಮೌಲ್ಯದ ವಸ್ತುಗಳು ಸುಟ್ಟು ಹೋಗಿರುವ ಘಟನೆ ಮಲ್ಲೇಶ್ವರದಲ್ಲಿ ಶುಕ್ರವಾರ ನಡೆದಿದೆ.

ಮಲ್ಲೇಶ್ವರದ ದತ್ತಾತ್ರೇಯ ದೇವಾಲಯ ರಸ್ತೆಯಲ್ಲಿರುವ ‘ಅಡಿಗ ಕ್ರಿಯೇಷನ್ಸ್‌’ ಮಳಿಗೆಯಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಮಳಿಗೆಯಲ್ಲಿ ಮಲಗಿದ್ದ ಕೆಲಸಗಾರರು ಎಚ್ಚರಗೊಂಡು ಅಂಗಡಿಯಿಂದ ಹೊರಬಂದು ತಮ್ಮ ಮಾಲಿಕರಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯವನ್ನು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಲೀಕ ತಿಳಿಸಿದ್ದು, ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಲವು ವರ್ಷಗಳಿಂದ ದತ್ತಾತ್ರೇಯ ರಸ್ತೆಯಲ್ಲಿ ಪೀಠೋಪಕರಣ ಮಾರಾಟ ಮಳಿಗೆಯನ್ನು ಮಂಜುನಾಥ ಅಡಿಗ ನಡೆಸುತ್ತಿದ್ದು, ಈ ಮಳಿಗೆಯಲ್ಲಿ 10ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಾರೆ. ಇಲ್ಲೇ ಪೀಠೋಪಕರಣ ತಯಾರಿಕೆಯ ಕುಸುರಿ ಕೆಲಸಗಳು ನಡೆಯುತ್ತವೆ. ಹೀಗಾಗಿ ಮಳಿಗೆಯಲ್ಲಿ ರಾತ್ರಿ ವೇಳೆ ಇಬ್ಬರು ಕೆಲಸಗಾರರು ಇದ್ದರು.

ಎಂದಿನಂತೆ ಅಂಗಡಿ ವಹಿವಾಟು ಮುಗಿಸಿ ರಾತ್ರಿ ಮಾಲೀಕರು ಮನೆಗೆ ಮರಳಿದ್ದಾರೆ. ನಸುಕಿನ 3 ಗಂಟೆ ಸುಮಾರಿಗೆ ಶಾರ್ಟ್ ಸಕ್ಯೂರ್ಟ್‌ನಿಂದ ಕಿಡಿ ತಾಗಿ ಬೆಂಕಿ ಹೊತ್ತಿಕೊಂಡಿದೆ. ದಟ್ಟ ಹೊಗೆ ಪರಿಣಾಮ ಸುಟ್ಟು ವಾಸನೆ ಬಂದು ಮಲಗಿದ್ದ ಕೆಲಸಗಾರರು ಥಟ್ಟನೇ ಎಚ್ಚರಗೊಂಡಿದ್ದಾರೆ. ಕೂಡಲೇ ಮಳಿಗೆಯಿಂದ ಹೊರಬಂದು ಅವರು ಪ್ರಾಣ ಉಳಿಸಿಕೊಂಡಿದ್ದಾರೆ. ಈ ಅವಘಡ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಸತತ ಮೂರು ತಾಸುಗಳ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.