ಖಾಸಗಿ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ: 140 ವಿದ್ಯಾರ್ಥಿಗಳ ಸ್ಥಳಾಂತರ

| Published : Jun 17 2025, 01:27 AM IST

ಖಾಸಗಿ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ: 140 ವಿದ್ಯಾರ್ಥಿಗಳ ಸ್ಥಳಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಿದ್ದ ದೇರಳಕಟ್ಟೆ ಜಂಕ್ಷನ್ನಿನಲ್ಲಿರುವ ಕಟ್ಟಡದಲ್ಲಿ ಭಾನುವಾರ ಸಂಜೆ ವಿದ್ಯುತ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ತಗಲಿದ್ದು, ಕಟ್ಟಡದೊಳಕ್ಕಿದ್ದ 140 ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಸ್ಥಳೀಯರು ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಇಲ್ಲಿನ ಖಾಸಗಿ ಸಂಸ್ಥೆಯ ವಿದ್ಯಾರ್ಥಿಗಳಿದ್ದ ದೇರಳಕಟ್ಟೆ ಜಂಕ್ಷನ್ನಿನಲ್ಲಿರುವ ಕಟ್ಟಡದಲ್ಲಿ ಭಾನುವಾರ ಸಂಜೆ ವಿದ್ಯುತ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ತಗಲಿದ್ದು, ಕಟ್ಟಡದೊಳಕ್ಕಿದ್ದ 140 ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಸ್ಥಳೀಯರು ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.

ಇಂದು ಸಂಜೆ 7.45 ರ ಹೊತ್ತಿಗೆ ಕಟ್ಟಡದ ನೆಲಮಹಡಿಯಲ್ಲಿರುವ ಸ್ವಿಚ್ ಬೋರ್ಡಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿ ಹರಡಲು ಆರಂಭವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸ್ಥಳೀಯರು ಎದುರುಗಡೆಯಿದ್ದ ಪೆಟ್ರೋಲ್ ಪಂಪ್ ನಿಂದ ಬೆಂಕಿ ನಂದಿಸಲು ಉಪಯೋಗಿಸುವ ಸಾಮಗ್ರಿಗಳ ಸಹಾಯದಿಂದ ಬೆಂಕಿ ನಂದಿಸಲು ಆರಂಭಿಸಿದ್ದಾರೆ. ತಕ್ಷಣ ಕಟ್ಟಡದ ಮೇಲಿದ್ದ 140 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರ ತಂದಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ತಡವಾಗಿ ಆಗಮಿಸಿದ್ದರಿಂದಾಗಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಅದಾಗಲೇ ಭಾಗಶಃ ಬೆಂಕಿ ನಂದಿಸುವಲ್ಲಿ ಸ್ಥಳೀಯರು ಸಫಲರಾಗಿದ್ದು, ವಿದ್ಯಾರ್ಥಿನಿಯರೆಲ್ಲರನ್ನೂ ಶಿಕ್ಷಣ ಸಂಸ್ಥೆ ಬೇರೆ ವಿದ್ಯಾರ್ಥಿನಿ ನಿಲಯಗಳಿಗೆ ಸ್ಥಳಾಂತರಿಸಿದ್ದಾರೆ. ಈ ಐದು ಮಹಡಿಯ ಕಟ್ಟಡದ ಕೆಳಗಿನ ಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಕೆಳಗಿನ ವಿದ್ಯುತ್ ಬೋರ್ಡ್‌ಗಳೆಲ್ಲವೂ ಸಂಪೂರ್ಣ ಸುಟ್ಟುಹೋಗಿದೆ. ಸ್ಥಳೀಯರು ಕಾರ್ಯಾಚರಿಸಿ ಬೆಂಕಿ ನಂದಿಸಿದ್ದಾರೆ. 140 ವಿದ್ಯಾರ್ಥಿಗಳನ್ನು ಖಾಸಗಿ ಸಂಸ್ಥೆಯವರೇ ಸ್ಥಳಾಂತರ ಮಾಡಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಹಸೀಲ್ದಾರ್ ಪುಟ್ಟರಾಜು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಅಗ್ನಿ ಶಾಮಕ ದಳ ಹಾಗೂ ಕೊಣಾಜೆ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾದರು. ಮಸೀದಿಯಲ್ಲಿ ಅಗ್ನಿ ಆಕಸ್ಮಿಕ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮಸೀದಿಗೆ ಹಾನಿಯಾದ ಘಟನೆ ಮೋಂಟುಗೋಳಿ ಸಮೀಪದ ಗೌಸಿಯ ಮಸೀದಿಯಲ್ಲಿ ನಡೆದಿದೆ. ಹವಾ ನಿಯಂತ್ರಿತ ಮೆಷಿನ್ ಗೆ ಹಿಡಿದ ಬೆಂಕಿ ಎಲ್ಲೆಡೆ ವ್ಯಾಪಿಸಿದ್ದು, ಗೋಡೆ ಹಾಗೂ ಇನ್ನಿತರ ವಸ್ತುಗಳು ಹಾನಿಯಾಗಿದೆ. ಈ ಘಟನೆಯನ್ನು ಗಮನಿಸಿದ ಆಡಳಿತ ಸಮಿತಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದೆ. ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು, ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.