ಕೀಲಾರ- ಆಲಕೆರೆಯಲ್ಲಿ ವೀರಭದ್ರೇಶ್ವರಸ್ವಾಮಿ ಕೊಂಡೋತ್ಸವಕ್ಕಾಗಿ ಅಗ್ನಿ ಸ್ಪರ್ಶ

| Published : May 07 2025, 12:50 AM IST

ಕೀಲಾರ- ಆಲಕೆರೆಯಲ್ಲಿ ವೀರಭದ್ರೇಶ್ವರಸ್ವಾಮಿ ಕೊಂಡೋತ್ಸವಕ್ಕಾಗಿ ಅಗ್ನಿ ಸ್ಪರ್ಶ
Share this Article
  • FB
  • TW
  • Linkdin
  • Email

ಸಾರಾಂಶ

ಎರಡನೇ ದಿನದಂದು ಬೆಳಿಗ್ಗಿನಿಂದಲೇ ಭಕ್ತರು ಕೊಂಡ ಪ್ರದಕ್ಷಣಿಯೆಲ್ಲಿ ಮಹಿಳೆಯರು ಹೆಜ್ಜೆ ನಮಸ್ಕಾರ ಹಾಕುವ ಮೂಲಕ ಹಾಗೂ ಬಾಯಿಬೀಗದಲ್ಲಿ ಸಾವಿರಾರು ಜನ ಭಾಗವಹಿಸಿ ಹರಕೆ ತೀರಿಸಿದರು. ವೀರಭದ್ರೇಶ್ವರ ಸ್ವಾಮಿಯ ದರ್ಶನಕ್ಕೆ ದೂರದೂರಿನಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕೀಲಾರ- ಆಲಕೆರೆಯಲ್ಲಿ ವೀರಭದ್ರೇಶ್ವರಸ್ವಾಮಿ ಕೊಂಡ ಬಂಡಿ ಉತ್ಸವದಲ್ಲಿ ಕೊಂಡೋತ್ಸವಕ್ಕೆ ಮಂಗಳವಾರ ಭಕ್ತರ ಜೈಕಾರದೊಂದಿಗೆ ಸಂಜೆ ಅಗ್ನಿ ಸ್ಪರ್ಶ ಮಾಡಲಾಯಿತು.

ಎರಡನೇ ದಿನದಂದು ಬೆಳಿಗ್ಗಿನಿಂದಲೇ ಭಕ್ತರು ಕೊಂಡ ಪ್ರದಕ್ಷಣಿಯೆಲ್ಲಿ ಮಹಿಳೆಯರು ಹೆಜ್ಜೆ ನಮಸ್ಕಾರ ಹಾಕುವ ಮೂಲಕ ಹಾಗೂ ಬಾಯಿಬೀಗದಲ್ಲಿ ಸಾವಿರಾರು ಜನ ಭಾಗವಹಿಸಿ ಹರಕೆ ತೀರಿಸಿದರು. ವೀರಭದ್ರೇಶ್ವರ ಸ್ವಾಮಿಯ ದರ್ಶನಕ್ಕೆ ದೂರದೂರಿನಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.

ಕೀಲಾರದ ಕಂಚಿನ ಮಾರಮ್ಮ ಹಾಗೂ ಸೋಮೇಶ್ವರ ದೇವಸ್ಥಾನದಿಂದ ಕೀಲಾರ ಗ್ರಾಮಸ್ಥರು ನಾಲ್ಕು ಜೋಡೆತ್ತುಗಳೊಂದಿಗೆ ಮೆರವಣಿಗೆ ಮೂಲಕ ಆಲಕೆರೆ ಗ್ರಾಮದ ಗಡಿಗೆ ಬಂದರು. ಆಲಕೆರೆ ಗ್ರಾಮಸ್ಥರು ಎಲ್ಲರನ್ನೂ ಬರಮಾಡಿಕೊಂಡರು. ತಮಟೆ ಸದ್ದಿನ ಜತೆ ಮೆರವಣಿಗೆ ಮೂಲಕ ಜೋಡೆತ್ತುಗಳು ಹಾಗೂ ಗ್ರಾಮಸ್ಥರು ದೇವಸ್ಥಾನದ ಆವರಣಕ್ಕೆ ಆಗಮಿಸಿದ್ದು ವಿಶೇಷ ಎನಿಸಿತು.

ಆಲಕೆರೆ ಗ್ರಾಮದ ಬಂಡಿಗಳನ್ನು ಕಟ್ಟಿ ಗುಡ್ಡಪ್ಪರನ್ನು ಹೊತ್ತ ಬಂಡಿಗಳು ಕೊಂಡದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಂಜೆ 5.05ಕ್ಕೆ ಸೇರಿದ್ದ ಭಕ್ತರ ಸಮ್ಮುಖದಲ್ಲಿ ಅಗ್ನಿಸ್ಪರ್ಶ ಮಾಡಲಾಯಿತು.

ರಾತ್ರಿಯಿಡಿ ರಂಗ ಕುಣಿತ ನಡೆಯುತ್ತದೆ. ಮಧ್ಯರಾತ್ರಿ ದೇವರಿಗೆ ಹೂ ಹೊಂಬಾಳೆ ನಡೆಸಿ ಬುಧವಾರ ಬೆಳಗಿನ ಜಾವ ದೇವರ ಗುಡ್ಡರಾದ ರೇಣುಕಾಸ್ವಾಮಿ ಹಾಗೂ ಕಾಂತೇಶ್ ಕುಮಾರ್ ಅವರು ಕೊಂಡ ಹಾಯುವರು.

ಈ ವೇಳೆ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಕೀಲಾರ ಮತ್ತು ಆಲಕೆರೆ ಗ್ರಾಮದ ಮುಖಂಡರು, ಯಜಮಾನರು ಹಾಗೂ ಅಪಾರ ಭಕ್ತರು ಭಾಗವಹಿಸಿದ್ದರು.

ಬಗ್ಗವಳ್ಳಿಯಲ್ಲಿ ಶ್ರೀ ವೀರಭದ್ರ ಸ್ವಾಮಿ ಅದ್ಧೂರಿ ಕೆಂಡೋತ್ಸವಬಗ್ಗವಳ್ಳಿ (ಅಜ್ಜಂಪುರ ತಾ.):ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಶ್ರೀ ಕಾಳಿಕಾಂಬ ಅಮ್ಮನವರ ಅಗ್ನಿ ಪ್ರತಿಷ್ಠಾಪನೆ ಮತ್ತು ಕೆಂಡಾರ್ಚನೆ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ ಅದ್ಧೂರಿಯಾಗಿ ನೆರವೇರಿತು.

ಕೆಂಡದರ್ಚನೆಗೆ ಮುನ್ನ ಊರಿನ ಮುಖ್ಯ ಬೀದಿಗಳಲ್ಲಿ ದೇವರುಗಳ ಹೂವಿನ ಪಲ್ಲಕ್ಕಿ ಉತ್ಸವ, ಮೆರವಣಿಗೆ ಹಾಗೂ ಗುಗ್ಗಳ ಸೇವೆಯು ವೀರಗಾಸೆ ತಂಡಗಳೊಂದಿಗೆ ನಡೆಯಿತು. ಅನಂತರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಚನ್ನಗಿರಿಯ ವಡ್ನಾಳ್ ಕಾಶಿಮಠದ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳು ಭಕ್ತರಿಗೆ ಆಶೀರ್ವಚನ ನೀಡಿದರು.

ಅನುದಾನ ನೀಡುವೆ- ಶ್ರೀನಿವಾಸ್:

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಜಿ.ಎಚ್. ಶ್ರೀನಿವಾಸ್ ಅವರು, ಇಡೀ ವಿಶ್ವಕ್ಕೆ ರೂಪ ಕೊಟ್ಟಂತಹ ಸಮುದಾಯ ವಿಶ್ವಕರ್ಮ. ಇವರ ಕ್ರಿಯಾಶೀಲ ಕೈಂಕರ್ಯಗಳು ಸದಾ ಸ್ಮರಣೀಯ. ವಿಶ್ವಕರ್ಮ ಜನಾಂಗದ ಸಭಾಭವನ ನಿರ್ಮಾಣ ಕಾಮಗಾರಿ ಆರಂಭಿಸಿದರೆ ಸೂಕ್ತ ಅನುದಾನ ನೀಡುವುದಾಗಿ ಶಾಸಕರು ವಾಗ್ದಾನ ಮಾಡಿದರು.

ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ನಿವೇಶನ ದಾನ ಮಾಡಿದ ಪುಟ್ಟಪ್ಪ ದಂಪತಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿಯೇ ಅತ್ಯಧಿಕ ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಜೆ.ಎಲ್. ಚಂದ್ರಶೇಖರಾಚಾರ್ ಅಧ್ಯಕ್ಷತೆ ವಹಿಸಿದ್ದರು.

ವಡ್ನಾಳ್ ಕಾಶಿಮಠದ ಅಧ್ಯಕ್ಷ ಟಿ.ಮಹೇಂದ್ರಾಚಾರ್, ಗ್ರಾಪಂ ಅಧ್ಯಕ್ಷ ಗುರುಮೂರ್ತಿ, ಒಕ್ಕಲಿನ ಹಿರಿಯರಾದ ಕಲಿವೀರಾಚಾರ್, ಸೇವಾ ಸಮಿತಿ ಕಾರ್ಯದರ್ಶಿ ಬಿ.ಆರ್‌‌. ಪರಮೇಶ್ವರಾಚಾರ್, ನಾಗೇಂದ್ರಾಚಾರ್, ತೀರ್ಥಾಚಾರ್ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರದ ಅನೇಕ ಸೇವೆಗಳ ಸೇವಾರ್ಥಿಗಳನ್ನು ಗೌರವಿಸಲಾಯಿತು. ಶಾರದಾ ಪ್ರಾರ್ಥಿಸಿದರು. ಭದ್ರಾಚಾರ್ ಸ್ವಾಗತಿಸಿ, ವಂದಿಸಿದರು.