ಚುಟುಕು ಸಾಹಿತ್ಯದ ಬೆಳವಣಿಗೆಗೆ ಉತ್ತೇಜನ ನೀಡುವ ಹಾಗೂ ಹೊಸ ತಲೆಮಾರಿನ ಸಾಹಿತ್ಯಾಸಕ್ತರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸಮ್ಮೇಳನ ಅರ್ಥಪೂರ್ಣವಾಗಿ ಆಯೋಜಿಸಲು ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು.

ಕುಷ್ಟಗಿ: ತಾಲೂಕು ಮಟ್ಟದ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ನಡೆಯಲಿದೆ.

ಪಟ್ಟಣದ ಬಸವ ಭವನದಲ್ಲಿ ನಡೆದ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಸುಧೀರ್ಘ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಯಿತು.

ಸಮ್ಮೇಳನದ ಯಶಸ್ವಿ ಆಯೋಜನೆಗಾಗಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ, ಸಂಘಟನಾ ಸಿದ್ಧತೆ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.

ಚುಟುಕು ಸಾಹಿತ್ಯದ ಬೆಳವಣಿಗೆಗೆ ಉತ್ತೇಜನ ನೀಡುವ ಹಾಗೂ ಹೊಸ ತಲೆಮಾರಿನ ಸಾಹಿತ್ಯಾಸಕ್ತರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸಮ್ಮೇಳನ ಅರ್ಥಪೂರ್ಣವಾಗಿ ಆಯೋಜಿಸಲು ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು.

ಕೊಪ್ಪಳ ಸೇರಿದಂತೆ ವಿವಿಧ ಭಾಗಗಳ ಕವಿ, ಸಾಹಿತಿ, ಸಾಹಿತ್ಯಾಭಿಮಾನಿಗಳನ್ನು ಸಮ್ಮೇಳನದಲ್ಲಿ ಭಾಗವಹಿಸುವಂತೆ ಆಹ್ವಾನಿಸಲು ತೀರ್ಮಾನಿಸಲಾಯಿತು. ಸಮ್ಮೇಳನದ ಸವಿನೆನಪಿಗಾಗಿ ವಿಶೇಷ ಕಿರುಹೊತ್ತಿಗೆ ಪ್ರಕಟಿಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.

ಚುಟುಕು ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನ, ಕವನಗಳು, ಸಾಹಿತ್ಯ ಸಾಧಕರ ಪರಿಚಯ ಹಾಗೂ ಸಮ್ಮೇಳನದ ಮಾಹಿತಿ ಒಳಗೊಂಡ ಸಂಚಿಕೆ ಪ್ರಕಟಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲು ನಿರ್ಧರಿಸಲಾಯಿತು.

ಡುಂಡಿರಾಜರಿಗೆ ಆಹ್ವಾನ: ಸಮ್ಮೇಳನದ ಉದ್ಘಾಟನೆಗೆ ಖ್ಯಾತ ಸಾಹಿತಿ ಎಚ್.ಡುಂಡಿರಾಜ ಅವರನ್ನು ಆಹ್ವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅವರ ಉಪಸ್ಥಿತಿಯಿಂದ ಸಮ್ಮೇಳನಕ್ಕೆ ವಿಶೇಷ ಮೆರುಗು ದೊರೆಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಸಾಹಿತಿ ಹನಮಂತಪ್ಪ ಅಂಡಗಿ ವೇದಿಕೆ: ಸಮ್ಮೇಳನದ ಮುಖ್ಯ ವೇದಿಕೆಗೆ ಹನಮಂತಪ್ಪ ಅಂಡಗಿ ವೇದಿಕೆ ಎಂದು ನಾಮಕರಣ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಸ್ಮರಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಯಿತು.

ವಿವಿಧ ವಿಷಯಗಳ ಚರ್ಚೆ: ಸಮ್ಮೇಳನದ ಸಂಘಟನೆ, ಅತಿಥಿಗಳ ಆಹ್ವಾನ, ಸಾಹಿತ್ಯ ಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಸ್ಮರಣ ಸಂಚಿಕೆ ಪ್ರಕಟಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಸಮ್ಮೇಳನ ಯಶಸ್ವಿಯಾಗಿ ನಡೆಸಲು ವಿವಿಧ ಸಮಿತಿ ರಚಿಸಿ ಜವಾಬ್ದಾರಿ ಹಂಚಿಕೆ ಮಾಡುವ ಬಗ್ಗೆಯೂ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಸಾಹಿತಿಗಳಾದ ಹನುಮೇಶ ಗುಮಗೇರಿ, ನಟರಾಜ ಸೋನಾರ, ಕುಮಾರಸ್ವಾಮಿ ಹಿರೇಮಠ, ಶಿವಾಜಿ ಪಾಟೀಲ, ವೆಂಕಟೇಶ ಚಾಗಿ ಹಾಗೂ ಮಹೇಶ ಹಡಪದ ಉಪಸ್ಥಿತರಿದ್ದು, ಸಮ್ಮೇಳನದ ಯಶಸ್ವಿ ಆಯೋಜನೆಗೆ ತಮ್ಮ ಸಲಹೆ-ಸೂಚನೆ ನೀಡಿದರು.

ಈಗಾಗಲೆ ಚುಸಾಪ ಪದಾಧಿಕಾರಿಗಳ ಪೂರ್ವಭಾವಿ ಸಭೆ ಜರುಗಿದ್ದು ಆಗಸ್ಟ್ ಕೊನೆ ವಾರದಲ್ಲಿ ತಾಲೂಕು ಮಟ್ಟದ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ ಮಾಡಲು ನಿರ್ಣಯ ಮಾಡಲಾಗಿದೆ ಎಂದು ಕುಷ್ಟಗಿ ಚುಸಾಪ ತಾಲೂಕಾಧ್ಯಕ್ಷ ಮಹೇಶ ಹಡಪದ ತಿಳಿಸಿದ್ದಾರೆ.