ಪ್ರತಿ ಟನ್‌ ಕಬ್ಬಿಗೆ ₹ 4800 ನಿಗದಿಪಡಿಸಿ

| Published : Nov 06 2025, 02:15 AM IST

ಸಾರಾಂಶ

ಕಬ್ಬು ಬೆಳೆಗಾರರು ಹಲವಾರು ಕಷ್ಟ-ನಷ್ಟಗಳ ನಡುವೆ ಕಬ್ಬು ಬೆಳೆದು ಕಡಿಮೆ ಬೆಲೆಗೆ ಮಾರಾಟ ಮಾಡಿ ಕಾರ್ಖಾನೆ ಮಾಲೀಕರ ಶೋಷಣೆಯಿಂದ ಬಸವಳಿದ್ದಾರೆ. ಲಾಭವಿಲ್ಲದ ಬೆಲೆ ನಿಗದಿ, ವಿಳಂಬ ಕಟಾವು, ಬಾಕಿ ಪಾವತಿ ಉಳಿಸಿಕೊಂಡಿರುವುದು, ಪ್ರಕೃತಿ ವಿಕೋಪ, ಹಲವು ವರ್ಷಗಳಿಂದ ಉತ್ಪಾದನಾ ವೆಚ್ಚಗಳು ನಿರಂತರವಾಗಿ ಏರಿಕೆಯಾಗುತ್ತಿದೆ.

ಧಾರವಾಡ:

ರೈತರು ಬೆಳೆದ ಪ್ರತಿ ಟನ್ ಕಬ್ಬಿಗೆ ₹ 4800 ನಿಗದಿ ಮಾಡಬೇಕು ಮತ್ತು ಬಾಕಿ ವೇತನ ಬಿಡುಗಡೆ ಮಾಡುವಂತೆ ಅಖಿಲ ಭಾರತ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ಬುಧವಾರ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟಿನೆ ನಡೆಸಲಾಯಿತು.

ಕಬ್ಬು ಬೆಳೆಗಾರರು ಹಲವಾರು ಕಷ್ಟ-ನಷ್ಟಗಳ ನಡುವೆ ಕಬ್ಬು ಬೆಳೆದು ಕಡಿಮೆ ಬೆಲೆಗೆ ಮಾರಾಟ ಮಾಡಿ ಕಾರ್ಖಾನೆ ಮಾಲೀಕರ ಶೋಷಣೆಯಿಂದ ಬಸವಳಿದ್ದಾರೆ. ಲಾಭವಿಲ್ಲದ ಬೆಲೆ ನಿಗದಿ, ವಿಳಂಬ ಕಟಾವು, ಬಾಕಿ ಪಾವತಿ ಉಳಿಸಿಕೊಂಡಿರುವುದು, ಪ್ರಕೃತಿ ವಿಕೋಪ, ಹಲವು ವರ್ಷಗಳಿಂದ ಉತ್ಪಾದನಾ ವೆಚ್ಚಗಳು ನಿರಂತರವಾಗಿ ಏರಿಕೆಯಾಗುತ್ತಿದೆ. ರೈತರಿಗೆ ದೊರೆಯುತ್ತಿರುವ ಕಬ್ಬಿನ ಬೆಲೆ ಆ ವೆಚ್ಚವನ್ನು ಕೂಡಾ ಮುಟ್ಟಲಾರದೆ ಇದ್ದು, ರೈತರು ಆರ್ಥಿಕ ಹಿನ್ನಡೆಯತ್ತ ಸಾಗುತ್ತಿದ್ದಾರೆ ಎಂದು ಸಂಘದ ರಾಜ್ಯಾಧ್ಯಕ್ಷ ಎಂ ಶಶಿಧರ್, ರಾಜ್ಯ ಕಾರ್ಯದರ್ಶಿ ಬಿ ಭಗವಾನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆ ಬೆಳೆಯಲು ಪ್ರತಿ ಎಕರೆಗೆ ಸರಾಸರಿ ₹ 60 ಸಾವಿರ ಖರ್ಚಾಗುತ್ತಿದೆ. ಗೊಬ್ಬರ, ಬೀಜ, ಕಾರ್ಮಿಕರ ವೇತನ, ನೀರಾವರಿ, ಡೀಸೆಲ್, ಯಂತ್ರೋಪಕರಣ ಮತ್ತು ಸಾರಿಗೆ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ, ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು ಸಮರ್ಪಕ ಹಾಗೂ ನ್ಯಾಯಯುತ ಬೆಲೆ ನೀಡುತ್ತಿಲ್ಲ. ಇದು ಕೈಗಾರಿಕಾ ಮಾಲೀಕರ ಲಾಭ ಹೆಚ್ಚಿಸುವ ನೀತಿಯಾಗಿದೆ. ಆದ್ದರಿಂದ ಈ ಲಾಭದ ಒಂದು ನ್ಯಾಯಯುತ ಭಾಗ ರೈತರಿಗೆ ಹಂಚಿಕೆಯಾಗಬೇಕು ಎಂದು ಪ್ರತಿಪಾದಿಸಿದರು.

ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಒಂದು ಟನ್ ಕಬ್ಬಿಗೆ ₹ 4000 ರೈತರಿಗೆ ನೀಡಲಾಗುತ್ತಿದೆ ಹಾಗೂ ಕೇರಳ ಮತ್ತು ತಮಿಳುನಾಡಿನಲ್ಲಿ ಕರ್ನಾಟಕದ ಕಬ್ಬಿನ ಗುಣಮಟ್ಟ ಇಲ್ಲದಿದ್ದರೂ ಕರ್ನಾಟಕಕ್ಕಿಂತ ಹೆಚ್ಚಿನ ಬೆಲೆ ನೀಡಲಾಗುತ್ತಿದೆ. ಆದ್ದರಿಂದ ರಾಜ್ಯದಲ್ಲಿ ಪ್ರತಿ ಟನ್ ಗೆ ಕನಿಷ್ಠ ₹ 4800 ನಿಗದಿ ಮಾಡಲು ಆಗ್ರಹಿಸಲಾಯಿತು.

ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಕಾರ್ಯದರ್ಶಿ ಶರಣು ಗೋನವಾರ, ಎಸ್‌.ಎನ್. ಸ್ವಾಮಿ, ವಿ. ನಾಗಮ್ಮಳ್, ರಾಜ ಗುರಳ್ಳಿ, ಜಮಾಲ್ ಸಾಬ್, ಉಳುವಪ್ಪ ದೇವಟಗಿ ಇದ್ದರು.