ಸಮಿತಿಯ ಕಾರ್ಯಚಟುವಟಿಕೆ ಬಗ್ಗೆ ರಾಜ್ಯ ಉಸ್ತುವಾರಿ ಸಮಿತಿಗೆ ಆಕ್ಷೇಪ ಸಲ್ಲಿಸಲಾಗುವುದು

ಕನ್ನಡಪ್ರಭ ವಾರ್ತೆ ಭಟ್ಕಳ

ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ನಿರ್ದಿಷ್ಟ ದಾಖಲೆ ಕೊರತೆಯಿಂದ, ದಾಖಲಾತಿಗಾಗಿ ಅಧಿಕಾರಿ ತಂಡದಿಂದ ಜರುಗುತ್ತಿರುವ ಮಹಜರ್ ಪ್ರಕ್ರಿಯೆ ನ್ಯೂನ್ಯತೆ ಸರಿಪಡಿಸುವ ಉದ್ದೇಶದಿಂದ ಹೋರಾಟಗಾರರ ವೇದಿಕೆಯು ಸಮಿತಿಯ ಕಾರ್ಯ ಚಟುವಟಿಕೆಗೆ ರಾಜ್ಯ ಉಸ್ತುವಾರಿ ಸಮಿತಿಗೆ ಆಕ್ಷೇಪ ಸಲ್ಲಿಸಲಾಗುವುದು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಸೋಮವಾರ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಹಜರ್ ಪ್ರಕ್ರಿಯೆ ಕುರಿತು ತಾಲೂಕಿನ ವಿವಿಧ ಅರಣ್ಯ ಅತಿಕ್ರಮಣದಾರರ ಸ್ಥಳಕ್ಕೆ ಭೇಟಿ ಕೊಟ್ಟ ನಂತರ ಬೆಳಕೆಯಲ್ಲಿ ಈ ಕುರಿತು ಮಾತನಾಡಿದರು.

ನಿರ್ದಿಷ್ಟ ದಾಖಲೆ ಕೊರತೆಯಿಂದ ದಾಖಲೆಗಾಗಿ ವಿವಿಧ ಅರಣ್ಯ ಭೂಮಿ ಹಕ್ಕು ಸಮಿತಿಯಲ್ಲಿ ತಿರಸ್ಕರಿಸಿದ ಅರ್ಜಿಗಳ ಕ್ಷೇತ್ರದ ಸಾಗುವಳಿ ದೃಡೀಕರಣಕ್ಕೆ, ಉನ್ನತ ಮಟ್ಟದ ಸಮಿತಿಯಿಂದ ಮಹಜರ್ ಮಾಡಿ, ಮಹಜರ್ ವರದಿಯನ್ನು ದಾಖಲೆಯಾಗಿ ಪರಿಗಣಿಸಲು ರಾಜ್ಯ ಉಸ್ತುವಾರಿ ಸಮಿತಿಯು ಜಿಲ್ಲಾಧಿಕಾರಿಗೆ ಜ. ೬ ರಂದು ನಿರ್ದೇಶನ ನೀಡಲಾಗಿತ್ತು. ಆದರೆ, ನಿರ್ದೇಶನದ ಮೂಲ ಅಂಶವಾದ ಸಾಗುವಳಿ ಕುರುಹು ಮತ್ತು ಸಾಂದರ್ಭಿಕ ದಾಖಲೆ ಪರಿಗಣಿಸದೇ ಅರ್ಜಿದಾರನ ಅರ್ಜಿಗೆ ಸಂಬಂಧಿಸಿ ಮೌಲ್ಯತೆ ಪರಿಶೀಲಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದ ಅವರು, ಮಹಜರಲ್ಲಿ ಸಾಗುವಳಿಯ ವಯಕ್ತಿಕ ದಾಖಲೆ ಮಾತ್ರ ದಾಖಲಿಸಿ, ಸಾಗುವಳಿ ಮತ್ತು ವಾಸ್ತವ್ಯಕ್ಕೆ ಸಂಬಂಧಿಸಿದ ಅರಣ್ಯವಾಸಿ ಮತ್ತು ಗ್ರಾಮದಲ್ಲಿ ಜನವಸತಿ ಇರುವ ಕುರಿತು ಸಾಂದರ್ಭಿಕ ದಾಖಲೆಗಳನ್ನ ಮಹಜರ್‌ನಲ್ಲಿ ಉಲ್ಲೇಖಿಸಿರುವುದು ಹಾಗೂ ಅರ್ಜಿದಾರರ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚಿನ ಅರ್ಜಿ ಸಲ್ಲಿಸಿರುವ ಅರ್ಜಿ ಪರಿಗಣನೆಗೆ ಅವಕಾಶ ಇಲ್ಲದಿರುವುದು ಕಾನೂನಿಗೆ ವ್ಯತಿರಿಕ್ತವಾದ ನೀತಿಯಾಗಿದೆ. ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಯ ನಡವಳಿಕೆಗೆ ವ್ಯತಿರಿಕ್ತವಾಗಿ ಕಾನೂನು ನೀತಿ, ನಿಯಮ ಬಾಹಿರವಾಗಿ ಹಾಗೂ ಸಾಗುವಳಿ ಮಹಜರ್ ವರದಿಗೆ ಪ್ರಾತಿನಿಧ್ಯ ನೀಡದೇ ಅರ್ಜಿದಾರನ ಹಿಡುವಳಿ, ಆರ್ಥಿಕ ಉತ್ಪನ್ನ ಮುಂತಾದ ಷರತ್ತುಬದ್ದ ಪರಿಗಣನೆ ಮೇರೆಗೆ ಮಾಹಿತಿ ಸಂಗ್ರಹಿಸುವುದು ಹಾಗೂ ಅರ್ಜಿ ಮೌಲ್ಯತೆಯನ್ನ ಪರಿಶೀಲಿಸುವ ಕಾರ್ಯ ಜಿಲ್ಲೆಯಲ್ಲಿ ನಿಯಮವನ್ನು ಉಲ್ಲಂಘಿಸಿರುವ ಕುರಿತು ರಾಜ್ಯ ಅರಣ್ಯ ಭೂಮಿ ಹಕ್ಕು ಉಸ್ತುವಾರಿ ಸಮಿತಿಗೆ ಆಕ್ಷೇಪ ಸಲ್ಲಿಸಲಾಗುತ್ತಿದೆ ಎಂದರು.


ಕಳೆದ ಮೂರು ದಶಕದಿಂದ ಅರಣ್ಯವಾಸಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿರುವ ರವೀಂದ್ರ ನಾಯ್ಕ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಹೋರಾಟ ವೇದಿಕೆಯ ಪ್ರಮುಖರಾದ ಪಾಂಡುರಂಗ ನಾಯ್ಕ ಬೆಳಕೆ, ಚಂದ್ರ ನಾಯ್ಕ ಬೆಳಕೆ, ನಾರಾಯಣ ಶಿರಜ್ಜಿಮನೆ, ಪದ್ಮಾವತಿ ವೆಂಕಟೇಶ, ಮಾದೇವಿ ನಾಯ್ಕ, ಸುಬ್ರಾಯ ನಾಯ್ಕ ಬೈಲೂರು ಮುಂತಾದವರಿದ್ದರು.