ಸಾರಾಂಶ
ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಆಗಾಗ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬುಧವಾರ ಸಂಜೆ ಭಾರೀ ಮಳೆಗೆ ಹಲವೆಡೆ ಧರೆ ಕುಸಿತ ಉಂಟಾಗಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು.
ಚಿಕ್ಕಮಗಳೂರು:
ಜಿಲ್ಲೆಯ ಹಲವೆಡೆ ಆಗಾಗ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬುಧವಾರ ಸಂಜೆ ಭಾರೀ ಮಳೆಗೆ ಹಲವೆಡೆ ಧರೆ ಕುಸಿತ ಉಂಟಾಗಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು.ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಸಂಜೆ 4 ಗಂಟೆಗೆ ಆರಂಭವಾದ ಮಳೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿಯಿತು. ಘಾಟಿ ರಸ್ತೆಯ ಹಲವೆಡೆ ಹಳ್ಳದಂತೆ ನೀರು ರಭಸವಾಗಿ ಹರಿಯುತ್ತಿದ್ದು, ನೋಡು ನೋಡುತ್ತಿದ್ದಂತೆ ಹಲವೆಡೆ ರಸ್ತೆಯ ಮೇಲೆ ಗುಡ್ಡ ಮಣ್ಣು ಜರಿ ಯುತ್ತಿತ್ತು. ಹಲವೆಡೆ ತಿರುವಿನಲ್ಲಿ 2-3 ಕಡೆಗಳಲ್ಲಿ ರಸ್ತೆಗೆ ಮಣ್ಣು ಜರಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು.
ಭಾರೀ ಮಳೆ ಮತ್ತು ಧರೆ ಕುಸಿತದಿಂದಾಗಿ ವಾಹನಗಳ ಚಾಲಕರು ಪರದಾಡಿದರು. ಟ್ರಾಫಿಕ್ ಜಾಮ್ನಿಂದಾಗಿ ಗಂಟೆಗಟ್ಟಲೆ ವಾಹನಗಳು ರಸ್ತೆಯ ಮೇಲೆಯೇ ನಿಲ್ಲುವಂತಾಯಿತು. ಕೆಲವು ಗಂಟೆಗಳ ಕಾಲ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣಗೊಂಡಿತ್ತು.ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ಅದರ ನಡುವೆ ರಸ್ತೆಯಲ್ಲಿ ಬಿದ್ದಿರುವ ಮಣ್ಣನ್ನು ಕೂಡಲೇ ತೆರವುಗೊಳಿಸುವ ಕಾರ್ಯ ಮಾಡಿದ್ದರಿಂದ ಮಳೆ ನಿಂತ ಮೇಲೆ ವಾಹನಗಳ ಸಂಚಾರ ಮುಂದುವರಿಯಿತು.ಪೋಟೋ ಫೈಲ್ ನೇಮ್ 9 ಕೆಸಿಕೆಎಂ 8ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬುಧವಾರ ಸಂಜೆ ಧರೆ ಕುಸಿತ ಉಂಟಾಗಿರುವುದು.