ಕಾಫಿ ಬೆಳೆಯ ಮಾಹಿತಿ ಕಾರ್ಯಾಗಾರದಲ್ಲಿ ಟಿ.ಎಮ್.ಎಸ್. ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಸಿದ್ದಾಪುರಅಡಕೆ ತೊಟ ರೋಗ ಬಾಧೆಯಿಂದ ನಾಶವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆಗಾರರು ಧೈರ್ಯ ಕಳೆದುಕೊಳ್ಳದೆ ಪರ್ಯಾಯ ಬೆಳೆಗಳಾದ ಕಾಫಿ, ಕೋಕ್ಕೋ ಮುಂತಾದ ಬೆಳೆಗಳನ್ನು ಬೆಳೆಸುವತ್ತ ಸೂಕ್ತ ಜ್ಞಾನ ಹೊಂದುವುದು ಅಗತ್ಯ ಎಂದು ಟಿ.ಎಮ್.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.
ಬಾಳೇಸರದ ಶ್ರೀ ಮಲ್ಲಿಕಾರ್ಜುನ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಮತ್ತು ಕೃಷಿ ವಿಚಾರ ವಿನಿಮಯ ಕೇಂದ್ರ ಟ್ರಸ್ಟ್ ಇವುಗಳ ಸಹಯೋಗದಲ್ಲಿ ಬಾಳೇಸರದ ಮಲ್ಲಿಕಾರ್ಜುನಾ ಸಭಾಭವನದಲ್ಲಿ ಅಡಕೆ ತೋಟದಲ್ಲಿ ಕಾಫಿ ಬೆಳೆಯ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಅಡಕೆ ತೋಟಗಳಲ್ಲಿ ಸಾಮಾನ್ಯವಾಗಿ ಕಾಫಿ ಸೂಕ್ತವಾದ ಬೆಳೆಯಾಗಿದೆ. ಅದನ್ನು ತುಂಬಾ ಕಾಳಜಿಯಿಂದ ಬೆಳೆಯಲು ಸೂಕ್ತವಾದ ಮಾಹಿತಿಯನ್ನ ತಜ್ಞರಿಂದ ಪಡೆದುಕೊಳ್ಳಬೇಕು. ೧೯೫೦ರಿಂದ ಅಡಕೆಗೆ ವಿಪತ್ತು ಬಂತು ಹಾಗೆಯೇ ೧೯೭೧ರ ನಂತರ ದರ ಇಳಿಕೆಯಾಯಿತು. ಇತ್ತೀಚೆಗೆ ದರ ಏರಿಕೆ ಹಾಗೂ ರೋಗಬಾಧೆ ಅಧಿಕವಾಗಿ ಕಾಡುತ್ತಿದ್ದು, ರೈತರು ತೀರಾ ಕಂಗಾಲಾಗಿದ್ದಾರೆ. ಅದಕ್ಕೆ ಕಾಫಿ ಬೆಳೆಯನ್ನು ಬೆಳೆಯಲು ಗಮನಹರಿಸುವ ಅಗತ್ಯತೆ ಇದೆ ಎಂದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಪಿ. ಶಾಸ್ತ್ರಿ ಮಾತನಾ,ಡಿ ಬೆಳೆಗಾರರು ಸೂಕ್ತವಾದ ಜ್ಞಾನವನ್ನು ಪಡೆದುಕೊಳ್ಳುವುದು ಅಗತ್ಯವಿದೆ. ಕಾಫಿ ನಮ್ಮ ನೆಲಕ್ಕೆ ಪರ್ಯಾಯವಾದ ಬೆಳೆಯಾಗಿದ್ದು ಅದನ್ನು ಬೆಳೆಯುವತ್ತ ರೈತರು ಗಮನ ಹರಿಸಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಮಾತನಾಡಿ, ತೀರಾ ಕಂಗಾಲದ ಸ್ಥಿತಿಯಲ್ಲಿ ಅಡಕೆ ಬೆಳೆಗಾರರು ಇದ್ದು, ಧೈರ್ಯ ತೆಗೆದುಕೊಂಡು ಪರ್ಯಾಯ ಬೆಳೆಯನ್ನು ಬೆಳೆಯಲು ಯೋಚಿಸಬೇಕಾಗಿದೆ ಎಂದುರು.
ಪತ್ರಕರ್ತ ಪ್ರವೀಣ್ ಬಾಲಚಂದ್ರ ಹೆಗಡೆ ಮಾತನಾಡಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಕಾಫಿ ಬೆಳೆಯ ಪ್ರಗತಿಪರ ಕೃಷಿಕ ಕೊಪ್ಪದ ಪ್ರಸನ್ನ ಕುಮಾರ, ಕೃಷಿ ವಿಜ್ಞಾನಿ (ಕಾಫಿ ಬೆಳೆ) ತಂಗರಾಜ, ಉಪನಿರ್ದೇಶಕರು ಕಾಫಿಬೋರ್ಡ ಹಾಗೂ ಸಿ.ಸಿ.ಆರ್.ಐ.ನ ಡಾ. ಮುಖಾರಿಬ್, ಡಾ. ಕಿಶೋರ್ ಮೋಟೆ, ಮನೋಜ್ ಕುಮಾರ ಕಾರ್ಯಾಗಾರ ನಡೆಸಿಕೊಟ್ಟರು.
ಮಲ್ಲಿಕಾರ್ಜುನ ವ್ಯವಸಾಯ ಸೇವ ಸಹಕಾರಿ ಸಂಘದ ಅಧ್ಯಕ್ಷ ಸಿ.ಎನ್. ಹೆಗಡೆ ತಂಗಾರಮನೆ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಚಾರ ವಿನಿಮಯ ಕೇಂದ್ರದ ಜಿ.ಎಂ. ಹೆಗಡೆ ಬಾಳೇಸರ ನಿರೂಪಿಸಿ, ವಂದಿಸಿದರು.