ಸಾರಾಂಶ
ಗ್ರಾಮೀಣ ಪ್ರದೇಶದಲ್ಲಿ ಜನಪದ ಗೀತೆಗಳು ಇನ್ನು ಜೀವಂತವಾಗಿದೆ. ಪಟ್ಟಣ ಪ್ರದೇಶಗಳಲ್ಲಿ ಅವು ಉಳಿಯಬೇಕಾದರೆ ಜನಪದ ಕ್ರೀಡೆಗಳಾದ ಕಬಡ್ಡಿ, ಕೋಲಾಟ , ಚಿನ್ನಿಕೋಲು ಮತ್ತು ಜನಪದ ಗೀತೆ, ಸೋಬಾನ ಪದಗಳು ನಿರಂತರವಾಗಿ ನಡೆಸಿಕೊಂಡು ಬರಬೇಕಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ನಾಡಿನ ಜನಪದ ಗೀತೆಗಳು, ಹಬ್ಬಗಳು, ಉತ್ಸವಗಳು, ಕ್ರೀಡೆಗಳ ಆಯೋಜನೆ ನಿರಂತರವಾಗಿದ್ದರೆ ಮಾತ್ರ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯ ಉಳಿಸಿಕೊಳ್ಳಲು ಸಾಧ್ಯ ಎಂದು ಹಲಗೂರು ಪ್ರಥಮ ದರ್ಜೆ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಧಾಬಿದರಿ ತಿಳಿಸಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜನಪದ ಗೀತೆಗಳು ಇನ್ನು ಜೀವಂತವಾಗಿದೆ. ಪಟ್ಟಣ ಪ್ರದೇಶಗಳಲ್ಲಿ ಅವು ಉಳಿಯಬೇಕಾದರೆ ಜನಪದ ಕ್ರೀಡೆಗಳಾದ ಕಬಡ್ಡಿ, ಕೋಲಾಟ , ಚಿನ್ನಿಕೋಲು ಮತ್ತು ಜನಪದ ಗೀತೆ, ಸೋಬಾನ ಪದಗಳು ನಿರಂತರವಾಗಿ ನಡೆಸಿಕೊಂಡು ಬರಬೇಕಿದೆ ಎಂದರು.
ಇದೇ ವೇಳೆ ಜಾನಪದ ಕಲೆ, ಹಳ್ಳಿಯ ಹಬ್ಬ, ಹರಿದಿನಗಳು, ವಿವಿಧ ಆಹಾರ ತಿಂಡಿ ತಿನಿಸುಗಳ ಪ್ರದರ್ಶನ ಹಾಗೂ ಆಯುಧ ಪೂಜೆ, ಸಿರಿಧಾನ್ಯಗಳ ಮಹತ್ವ, ಆಲೆಮನೆ, ಕಬ್ಬಿನ ಬೆಳೆಯ ಮಹತ್ವ, ಕಾವೇರಿ ಜುಳುಜುಳು ನಾದ ಮುಂತಾದ ಭಾವಚಿತ್ರಗಳೊಂದಿಗೆ ಹಲವು ಜಾನಪದ ತಂಡಗಳೊಂದಿಗೆ, ಹಳ್ಳಿಕಾರ್ ಎತ್ತಿನ ಗಾಡಿ ಮೆರವಣಿಗೆ, ಪೂಜಾ ಕುಣಿತ ಮತ್ತು ಹೆಸರಾಂತ ಹಲಗೂರು ತಮಟೆ ಕಲಾವಿದರು ಸೇರಿದಂತೆ ಹಲವರು ಕಲಾತಂಡಗಳು, ಬೋಧಕರು ಹಾಗೂ ಬೋಧಕೇತರ ವರ್ಗದವರು ವಿಶೇಷ ಹಳ್ಳಿಯ ಉಡುಪಿನಲ್ಲಿ ಗಮನ ಸೆಳೆದು ಪ್ರಮುಖ ಬೀದಿಗಳಲ್ಲಿ ಜನಪದ ಉತ್ಸವದ ಕಲಾಸಿರಿಯನ್ನು ಹರಡುವ ಮೂಲಕ, ಸಾರ್ವಜನಿಕರು ರೈತಾಪಿ ವರ್ಗದವರು, ವ್ಯಾಪಾರಸ್ಥರು, ಶಾಲಾ ಮಕ್ಕಳಲ್ಲಿ ಜನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಿದರು.ಕಾರ್ಯಕ್ರಮವನ್ನು ಡಾ.ಎಂ.ಎಸ್.ಶಂಕರೇಗೌಡ ಉದ್ಘಾಟಿಸಿದರು. ಪ್ರಾಂಶುಪಾಲ ಆಲಂಗೂರು ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಡಾ.ಸೀಮಾ ಕೌಸರ್, ತಾರಾಜಯಲಕ್ಷ್ಮಿ, ಪ್ರೊ.ಮಹೇಶ್ ಬಾಬು, ಪ್ರೊ.ಗುರುಪ್ರಸಾದ್, ಪ್ರೊ.ಬಿ.ಸಿ.ರವಿ ಇದ್ದರು.