ಸಂಚಾರಿ ನಿಯಮ ಪಾಲಿಸಿ: ಸಿಪಿಐ

| Published : Jun 14 2025, 02:48 AM IST

ಸಾರಾಂಶ

ಯಾವುದೇ ವಾಹನಗಳ ಚಾಲನೆ ಸಮಯದಲ್ಲಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದರಿಂದ ಎಲ್ಲರೂ ಸುರಕ್ಷಿತವಾಗಿ ಪ್ರಯಾಣಿಸಬಹುದು ಎಂದು ನಗರದ ವೃತ್ತ ನಿರೀಕ್ಷಕ ಸುರೇಶ್ ಸಗರಿ ಹೇಳಿದ್ದಾರೆ.

- ಹರಿಹರ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಹರಿಹರ

ಯಾವುದೇ ವಾಹನಗಳ ಚಾಲನೆ ಸಮಯದಲ್ಲಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದರಿಂದ ಎಲ್ಲರೂ ಸುರಕ್ಷಿತವಾಗಿ ಪ್ರಯಾಣಿಸಬಹುದು ಎಂದು ನಗರದ ವೃತ್ತ ನಿರೀಕ್ಷಕ ಸುರೇಶ್ ಸಗರಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ, ರಸ್ತೆ ಸಂಚಾರಿ ಸುರಕ್ಷಾ ನಿಯಮಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ತಮ್ಮ ಜೀವ ಉಳಿಸಿಕೊಳ್ಳುವಂತಾಗಬೇಕು. ವಾಹನ ಚಾಲನೆ ಮಾಡುವ ಸಂದರ್ಭ ಚಾಲಕರು ಮೊಬೈಲ್ ಫೋನ್‌ನಲ್ಲಿ ಮಾತನಾಡಬಾರದು. ಇದರಿಂದ ವಾಹನ ಹತೋಟಿ ತಪ್ಪಿ ಅಪಘಾತಗಳು ನಡೆಯುವ ಸಾಧ್ಯತೆ ಹೆಚ್ಚು. ಇತರೆ ವಾಹನಗಳಿಗೂ ಸಮಸ್ಯೆಯಾಗುವುದು ಎಂದರು.

ಅಪಘಾತಗಳಿಂದ ಅನೇಕರು ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು. 4 ಚಕ್ರ ವಾಹನಗಳ ಚಾಲಕರು ತಪ್ಪದೇ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ವೇಗವಾಗಿ ಚಾಲನೆ ಮಾಡುವ ಸಮಯದಲ್ಲಿ 4 ಚಕ್ರ ವಾಹನಗಳು ಇದ್ದಕ್ಕಿದ್ದಂತೆ ಬ್ರೇಕ್ ಹಾಕುವುದರಿಂದ ಆಗುವ ಅವಘಡಗಳನ್ನು ಸೀಟ್ ಬೆಲ್ಟ್ ತಪ್ಪಿಸುತ್ತದೆ. ಯಾವುದೇ ವಾಹನಗಳ ಚಾಲನೆಯಲ್ಕಿ ವೇಗದ ಮಿತಿ ಇರಲಿ. ನಿಮ್ಮನ್ನು ನೀವೇ ರಕ್ಷಣೆ ಮಾಡಿಕೊಳ್ಳಬೇಕು ಎಂದು ರಸ್ತೆ ಸುರಕ್ಷತೆ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಎನ್. ರಮೇಶ್ ಮಾತನಾಡಿದರು. ಪಿಎಸ್‌ಐ ಶ್ರೀಪತಿ ಗಿನ್ನಿ, ಎಎಸ್‌ಐ ನಾಗರಾಜು, ಪಿಸಿ ರವಿ, ಐ.ಕ್ಯೂ.ಎಸ್.ಸಿ. ಸಂಯೋಜಕ ಡಾ.ಅನಂತನಾಗ್ ಎಚ್.ಪಿ., ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಬಿ.ಕೆ., ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಾಬು ಕೆ.ಎ., ಸಹ ಪ್ರಾಧ್ಯಾಪಕ ಡಾ.ಲಕ್ಷ್ಮಣ ನಾಯ್ಕ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವೆಂಕಪ್ಪನವರ ಬಸವರಾಜು, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಯೋಗೇಶ್ ಕೆ.ಜೆ. ಉಪಸ್ಥಿತರಿದ್ದರು.

- - -

-12HRR01.ಜೆಪಿಜಿ:

ಕಾರ್ಯಕ್ರಮವನ್ನು ಸಿಪಿಐ ಸುರೇಶ ಸಗರಿ ಉದ್ಘಾಟಿಸಿದರು.