ಊಟವು ಯಜ್ಞ ಸ್ವರೂಪವಾಗಿದ್ದು, ಊಟವನ್ನು ಮಾಡುವಾಗ ಒಮ್ಮೆ ಬಾಳೆಗೆ ಬಡಿಸಿದ ನಂತರ ಅದು ಅಗ್ನಿಯ ಸಂಪರ್ಕಕ್ಕೆ ಬಂದಂತಾಗುತ್ತದೆ.

ಶ್ರೀಗಳ ಆಶೀರ್ವಾದ ಪಡೆದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ್ ಭಟ್

ಗುನಗ ಸಮಾಜದಿಂದ ಪಾದುಕಾ ಪೂಜೆ

ಕನ್ನಡಪ್ರಭ ವಾರ್ತೆ ಗೋಕರ್ಣ

ಊಟವು ಯಜ್ಞ ಸ್ವರೂಪವಾಗಿದ್ದು, ಊಟವನ್ನು ಮಾಡುವಾಗ ಒಮ್ಮೆ ಬಾಳೆಗೆ ಬಡಿಸಿದ ನಂತರ ಅದು ಅಗ್ನಿಯ ಸಂಪರ್ಕಕ್ಕೆ ಬಂದಂತಾಗುತ್ತದೆ. ಜಠರಾಗ್ನಿಯು ಅವರವರ ಕರ್ಮಕ್ಕೆ ಅನುಗುಣವಾಗಿ ಭಿನ್ನವಾಗಿದ್ದು, ಒಬ್ಬರು ಇನ್ನೊಬ್ಬರ ಎಂಜಲನ್ನು ಅಥವಾ ಇನ್ನೊಬ್ಬರ ಬಾಳೆಯಿಂದ ತೆಗೆದುಕೊಂಡು ತಿನ್ನುವುದು ವ್ಯತಿರಿಕ್ತಪರಿಣಾಮವನ್ನು ಉಂಟುಮಾಡುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.

ಅಶೋಕೆಯಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಶನಿವಾರದ ಧರ್ಮಸಭೆಯಲ್ಲಿ ಅಗ್ನಿಜಯದ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಒಬ್ಬರ ಎಂಜಲನ್ನು ಇನ್ನೊಬ್ಬರು ತಿನ್ನಬಾರದು ಎಂಬ ನಿಯಮವಿದ್ದು, ಇದು ಆರೋಗ್ಯ ಹಾಗೂ ಆಧ್ಯಾತ್ಮದ ದೃಷ್ಟಿಯಿಂದ ಅನುಸರಣೀಯವಾಗಿದೆ ಎಂದ ಶ್ರೀಗಳು, ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ದಂಪತಿಗಳಿಗೆ ಈ ನಿಯಮದಿಂದ ವಿನಾಯಿತಿ ಇದ್ದು, ಸತಿಪತಿಗಳು ಅರ್ಧನಾರೀಶ್ವರ ತತ್ತ್ವದ ಪ್ರತೀಕ. ದಂಪತಿಗಳು ಎನ್ನುವಾಗ ಅದ್ವೈತವಿರುವುದರಿಂದ ಎಂಜಲನ್ನು ತಿನ್ನಬಾರದು ಎಂಬ ನಿಯಮಕ್ಕೆ ವಿನಾಯಿತಿ ಇದೆ ವಿವರಿಸಿದರು.

ಹನುಮಂತನ ಬಾಲಕ್ಕೆ ಲಂಕೆಯಲ್ಲಿ ಬೆಂಕಿ ಹಚ್ಚಿದ ರಾಮಾಯಣದ ಸಂದರ್ಭವನ್ನು ವಿವರಿಸಿದ ಶ್ರೀಗಳು, ಇದನ್ನು ಅರಿತ ಸೀತೆಯು ತಾನು ಪತಿವ್ರತೆಯಾಗಿದ್ದರೆ ಹನುಮಂತನ ಬಾಲಕ್ಕೆ ಹಚ್ಚಿರುವ ಬೆಂಕಿಯು ತಂಪಾಗಲಿ ಎಂದು ಹೇಳುತ್ತಾಳೆ. ಆಂಜನೇಯನು ಬೆಂಕಿ ತನ್ನನ್ನು ಸುಡುತ್ತದೆ, ತಾನು ಅದನ್ನು ಸಹಿಸಬೇಕು ಎಂದು ಮಾನಸಿಕವಾಗಿ ಸಿದ್ಧನಾಗಿರುತ್ತಾನೆ. ಆದರೆ ಅಗ್ನಿಯು ಬಿಸಿಯಾಗಿ ಸುಡುವ ಬದಲು ತಂಪಾಗುತ್ತದೆ. ಗಾಳಿಯೂ ಕೂಡ ಹಿಮದ ಗಾಳಿಯಂತೆ ತಂಪಾಗಿ ಬೀಸುತ್ತದೆ. ಹನುಮಂತನ ಪಾಲಿಗೆ ಮಾತ್ರ ತಂಪಾದ ಅಗ್ನಿಯು, ಸ್ವರ್ಣಲಂಕೆಯನ್ನು ಸುಡುತ್ತದೆ. ಆದರೆ ಲಂಕೆಯನ್ನು ಸುಟ್ಟ ಅಗ್ನಿಯು ಸೀತೆಗೆ ತೊಂದರೆ ಮಾಡುವುದಿಲ್ಲ. ಇಂತಹ ವಿಸ್ಮಯ ನಡೆಯಲು ಸೀತೆಯ ಅಗ್ನಿಜಯವೇ ಕಾರಣವಾಗಿದ್ದು, ಅವಳು ಅನುಸರಿಸುತ್ತಿದ್ದ ಆಹಾರ ಕ್ರಮದಿಂದ ಇದು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ್ ಭಟ್, ಕೇಂದ್ರ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಾನಂದ ಹೆಗಡೆ ಕೆರೆಮನೆ ಶ್ರೀಗಳ ಆಶೀರ್ವಾದ ಪಡೆದರು. ಹಿರಿಯ ವಕೀಲರಾದ ರಾಜಶೇಖರ ಹಿಲ್ಯಾರ್ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಜಿ.ಕೆ ಹೆಗಡೆ ಗೋಳಗೋಡು ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.

ಗುನಗ ಸಮಾಜದಿಂದ ಸ್ವರ್ಣಪಾದುಕಾ ಸೇವೆ:

ಶ್ರೀಮಠದ ಪಾರಂಪರಿಕವಾಗಿ ನಡೆದುಕೊಳ್ಳುವ ಕುಮಟಾ, ಹೊನ್ನಾವರ, ಅಂಕೋಲಾ ಭಾಗದ ಗುನಗ ಸಮಾಜದ ಗುರುಬಂಧುಗಳಿಂದ ಸ್ವರ್ಣಪಾದುಕಾ ಸೇವೆ ನಡೆಯಿತು. ರಾಜೇಶ ಗುನಗ, ಉದಯ ಗಣಪತಿ ಗುನಗ, ರಾಜು ಗಣಪತಿ ಗುನಗ, ನಾಗರಾಜ ರಮಾಕಾಂತ ಗುನಗ ಸೇರಿದಂತೆ ಗುರುಬಂಧುಗಳು ಉಪಸ್ಥಿತರಿದ್ದರು.