ಹುಬ್ಬಳ್ಳಿ:

ಬಿಜೆಪಿ ಶಿಸ್ತಿನ ಪಕ್ಷ. ಇಲ್ಲಿ ಕಾರ್ಯಕರ್ತರಿಗೆ ದೇಶ ಮೊದಲು ನಂತರ ಪಕ್ಷ, ತದನಂತರ ವ್ಯಕ್ತಿ, ಶಿಸ್ತು, ಸಂಯಮ ಕಲಿಸಲಾಗುತ್ತದೆ. ಕಾರ್ಯಕರ್ತರು ನಿಷ್ಠೆಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಂಗಳವಾರ ಇಲ್ಲಿನ ಗೋಕುಲ್ ರಸ್ತೆಯ ರಾಜೇಶ್ವರಿ ಸಭಾ ಭವನದಲ್ಲಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ವತಿಯಿಂದ ಎರಡು ದಿನ ನಡೆಯುವ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿ ಮೂರು ವರ್ಷಕ್ಕೊಮ್ಮೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಆಯ್ಕೆಯಾದ ಬಳಿಕ ಮಂಡಲ, ಜಿಲ್ಲಾ ವಿಭಾಗ ಮತ್ತು ರಾಜ್ಯಮಟ್ಟದಲ್ಲಿ ಆಯ್ದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಎರಡು ದಿನ ಪ್ರಶಿಕ್ಷಣ ಅಭ್ಯಾಸ ವರ್ಗ ಹಮ್ಮಿಕೊಳ್ಳಲಾಗುತ್ತದೆ. ಇಲ್ಲಿ ಪ್ರಶಿಕ್ಷಣ ಅವಧಿಗಳ ಕುರಿತು ವಿಭಾಗಗಳ ಪರಿಣಿತರಿಂದ ಬೋಧಿಸಲಾಗುತ್ತದೆ ಎಂದರು.

ಪ್ರಶಿಕ್ಷಣ ವರ್ಗಗಳ ಈ ವ್ಯವಸ್ಥೆ ಬಿಜೆಪಿಯಲ್ಲಿ ಮಾತ್ರ ಇರುತ್ತದೆ. ಉಳಿದ ಪಕ್ಷಗಳಿಗೆ ಇದೆಲ್ಲ ಅರ್ಥವಾಗುವುದಿಲ್ಲ. ಇಲ್ಲಿ ಬೂತ್, ಮಂಡಲ, ಜಿಲ್ಲಾ, ರಾಜ್ಯಮಟ್ಟದ ಪ್ರಮುಖ ಪದಾಧಿಕಾರಿಗಳು ಈ ಪ್ರಶಿಕ್ಷಣ ವರ್ಗಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆಯಾ ವಿಷಯಗಳ ಕುರಿತು ತರಬೇತಿ ಪಡೆದುಕೊಳ್ಳುತ್ತಾರೆ. ಕೇಂದ್ರ ಸರ್ಕಾರಗಳ ಸಾಧನೆ, ಜನಸಂಘದಿಂದ ಬಿಜೆಪಿಯ ವರೆಗೆ ಪಕ್ಷವು ನಡೆದ ಬಂದ ಹಾದಿ ಮತ್ತು ಜನರಿಗೆ ನೀಡಿದ ಆಶ್ವಾಸನೆ, ಅವುಗಳ ಸಾಕಾರಕ್ಕೆ ಬೇಕಾದ ಎಲ್ಲ ಅಂಶಗಳ ಕುರಿತು ಇಲ್ಲಿ ಚರ್ಚಿಸಲಾಗುತ್ತದೆ. ಪ್ರಶಿಕ್ಷಣಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.


ಶಾಸಕ ಮಹೇಶ ಟೆoಗಿನಕಾಯಿ ಮಾತನಾಡಿ, ಮೂರು ವರ್ಷಗಳಿಗೊಮ್ಮೆ ನಡೆಯುವ ಪ್ರಶಿಕ್ಷಣ ಶಿಬಿರದಲ್ಲಿ ದೇಶಭಕ್ತಿ, ಸಾಮಾಜಿಕ ವಿಷಯಗಳ ಕುರಿತು ಪಕ್ಷದ ತಜ್ಞರಿಂದ ತರಬೇತಿ ನೀಡಲಾಗುತ್ತದೆ. ಇಲ್ಲಿ ಶಿಸ್ತು ಬೋಧನೆಯ ಜತೆಗೆ ಪಕ್ಷದ ಕಾರ್ಯ ಚಟುವಟಿಕೆಗಳ ಕುರಿತು ತಿಳಿಸಲಾಗುತ್ತಿದೆ. ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ನಮ್ಮ ಸರ್ಕಾರದ ಸಾಧನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹೇಗೆ ಎಂಬುದರ ಕುರಿತು ಕಾರ್ಯಕರ್ತರಿಗೆ ತಿಳವಳಿಕೆ ನೀಡಲಾಗುತ್ತದೆ ಎಂದರು.

ಕೃಷ್ಣ ಗಂಡಗಾಳಕರ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಮೇಯರ್‌ ಜ್ಯೋತಿ ಪಾಟೀಲ, ಉಪಮೇಯರ್‌ ಸಂತೋಷ ಚೌಹಾಣ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಜಗದೀಶ ಹಿರೇಮನಿ, ಮಹೇಂದ್ರ ಕೌತಾಳ, ಸಂಜಯ ಕಪಟಕರ, ಶಿವು ಮೆಣಸಿನಕಾಯಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಪ್ರಧಾನ ಕಾರ್ಯದರ್ಶಿ ರಾಮನಗೌಡ ಶೆಟ್ಟನಗೌಡರ, ಪ್ರವೀಣ ಪವಾ, ಕೃಷ್ಣ, ಸಿದ್ದು ಮೊಗಲಿಶೆಟ್ಟರ್, ಪ್ರಶಾಂತ ಜಾಧವ್ ಸೇರಿದಂತೆ ಹಲವರಿದ್ದರು.