ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡ್ನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಚರಂಡಿ ಹೂಳು ತೆಗೆಯುವ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿದರು. ಈ ವೇಳೆ ಕ್ಷೇತ್ರ ಕಾಂಗ್ರೆಸ್ ಮುಖಂಡರು ಸೇರಿದಂತೆ ಇತರರು ಇದ್ದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಟಿಎಂ ವಿಧಾನಸಭಾ ಕ್ಷೇತ್ರದ ಎನ್.ಎಸ್.ಪಾಳ್ಯ, ಮಡಿವಾಳ, ಸನ್ಶೈನ್ ಕಾಲೋನಿ ವಿವಿಧೆಡೆ ರಸ್ತೆ ಬದಿಯ ಚರಂಡಿಗಳ ಹೂಳು ತೆಗೆಯುವ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಗುದ್ದಲಿಪೂಜೆ ನೆರವೇರಿಸಿದರು.ಶುಕ್ರವಾರ ಶಾಸಕರ ವಿಶೇಷ ಅನುದಾನದಡಿ ಎನ್ಎಸ್ಪಾಳ್ಯ ವಾರ್ಡ್ 176 ಅಂಬೇಡ್ಕರ್ ಸಮುದಾಯ ಭವನ ಸಮೀಪದ 13ನೇ ಕ್ರಾಸ್, ಎಸ್ಎಫ್ಎಚ್ ಲೇಔಟ್ ದಾವಣಗೆರೆ ಬೆಣ್ಣೆದೋಸೆ ಹೋಟೆಲ್ ಸಮೀಪ 4ನೇ ಮೈನ್,ಕೆಂಪೇಗೌಡ ಆಟದ ಮೈದಾನ ಸಮೀಪ, ಸನ್ಶೈನ್ ಕಾಲೋನಿ, ತಾವರಕೆರೆ ಬಸ್ನಿಲ್ದಾಣ ಸಮಿಪ ಮತ್ತು ಬಾಲಾಜಿನಗರ ಎಸ್.ಜಿ.ಪಾಳ್ಯ ವಾರ್ಡ್ 152 ಸೇರಿದಂತೆ ಇತ್ಯಾದಿ ಕಡೆಗಳಲ್ಲಿ ಚರಂಡಿಗಳ ಹೂಳೆತ್ತುವ ಕಾಮಗಾರಿಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಬಿಎಂಟಿ ಕ್ಷೇತ್ರದ ಎಲ್ಲಾ ವಾರ್ಡ್ಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗಿದೆ. ಈ ಮೂಲಕ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಕ್ಷೇತ್ರದ ನಿವಾಸಿಗಳು ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ಇಲ್ಲವೇ ಫೋನ್ ಕರೆಗಳ ಮೂಲಕ ದೂರು ನೀಡಿದರೆ ಶೀಘ್ರದಲ್ಲೇ ಪರಿಹರಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.