ಬೇಡಿಕೆ ಹೆಚ್ಚಾಗಿ ವಿದ್ಯುತ್ಗೆ ಕೊರತೆ, ಹಣ ನೀಡಿ ಖರೀದಿ: ಜಾರ್ಜ್
2 Min read
Author : KannadaprabhaNewsNetwork
Published : Nov 03 2023, 12:31 AM IST
Share this Article
FB
TW
Linkdin
Whatsapp
ನರಸಿಂಹರಾಜಪುರ ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ಅವರು ಬೇಟಿ ನೀಡಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. | Kannada Prabha
Image Credit: KP
ಬೇಡಿಕೆ ಹೆಚ್ಚಾಗಿ ವಿದ್ಯುತ್ಗೆ ಕೊರತೆ, ಹಣ ನೀಡಿ ಖರೀದಿ: ಜಾರ್ಜ್
ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ ವಿದ್ಯುತ್ ಬೇಡಿಕೆ ಜಾಸ್ತಿಯಾಗಿದ್ದರಿಂದ ವಿದ್ಯುತ್ ಕೊರತೆ ಉಂಟಾಗಿದ್ದು ಶೀಘ್ರದಲ್ಲೇ ಹಣ ನೀಡಿ ವಿದ್ಯುತ್ ಖರೀದಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ತಿಳಿಸಿದರು. ಗುರುವಾರ ಪಟ್ಟಣದ ಕಾಂಗ್ರೆಸ್ ಕಚೇರಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಯಾವುದೇ ಕೈಗಾರಿಕೆಗೆ, ಕೃಷಿ ಪಂಪ್ಸೆಟ್ ಗಳಿಗೆ ಪವರ್ ಕಟ್ ಮಾಡಿಲ್ಲ. ಮುಂದಿನ ದಿನಗಳಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಲ್ಲಿ ಸೋಲಾರ್ ಯೂನಿಟ್ ಮಾಡುವ ಚಿಂತನೆಯಲ್ಲಿದ್ದೇವೆ. ಸೋಲಾರ್ ಅಳವಡಿಸಿದವರಿಗೆ ಶೇ 70 ರಷ್ಟು ಸಹಾಯಧನ ನೀಡಲಾಗುವುದು ಎಂದರು. ಭಾರತ ದೇಶದಲ್ಲಿ ತಂತ್ರಜ್ಞಾನ ಮುಂದುವರಿಯಲು ರಾಜೀವ್ ಗಾಂಧಿ ಕಾರಣರಾಗಿದ್ದರು. ಕಾಂಗ್ರೆಸ್ 50 ವರ್ಷ ಆಳ್ವಿಕೆಯಲ್ಲಿ ದೇಶ ಅಭಿವೃದ್ಧಿ ಹೊಂದಿದೆ. ಕಾಂಗ್ರೆಸ್ ಜಾತ್ಯಾತೀತ ಪಕ್ಷವಾಗಿದ್ದು ಇದರಲ್ಲಿ ಯಾರೂ ಬೇಕಾದರೂ ನಾಯಕರಾಗಿ ಬೆಳೆಯಬಹುದು, ಎಲ್ಲಾ ಧರ್ಮ, ಎಲ್ಲಾ ಜಾತಿಯವರು ಒಟ್ಟಾಗಿ ಕಾಂಗ್ರೆಸ್ ಪಕ್ಷ ಬೆಳೆಸಿದ್ದೇವೆ. ನಾನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಉತ್ತಮ ಕೆಲಸ ಮಾಡಿ ಜಿಲ್ಲೆಯ 5 ಶಾಸಕರನ್ನು ಗೆಲ್ಲಿಸಿ ಕೊಂಡು ಬಂದಿದ್ದಾರೆ. ಕಾರಣಾಂತರದಿಂದ ರಾಜೇಗೌಡರು ಮಂತ್ರಿಯಾಗಲಿಲ್ಲ. ಆದರೂ, ಶಾಸಕ ರಾಜೇಗೌಡರು ಒಳ್ಳೆಯ ಕಾರ್ಯ ಮಾಡುತ್ತಿದ್ದು ಸಿದ್ದರಾಮಯ್ಯ ಅವರಿಗೆ ಹತ್ತಿರವಾಗಿದ್ದಾರೆ. ಅವರು ಯಾವುದೇ ಯೋಜನೆ ತಂದರೂ ನನ್ನ ಸಹಕಾರ ಇದೆ. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಬಹಳ ಹಿಂದಿನಿಂದಲೂ ನನಗೆ ಪರಿಚಯ. ಅವರಿಗೂ ಅಧಿಕಾರ ನೀಡಿದರೆ ಜಿಲ್ಲೆಗೆ ಮಾತ್ರವಲ್ಲ, ರಾಜ್ಯಕ್ಕೂ ಉಪಯೋಗವಾಗಲಿದೆ. ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಘೋಷಣೆ ಮಾಡಿತ್ತು. ಇದರಲ್ಲಿ 4 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ ಎಂದರು. ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಎಷ್ಟೇ ಕೆಲಸದ ಒತ್ತಡ ಇದ್ದರೂ ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಬೆರೆಯುತ್ತಾರೆ. ಕಾಂಗ್ರೆಸ್ ವಿವಿಧ ರಾಜ್ಯಗಳ ಚುನಾವಣಾ ಕಮಿಟಿ ಸದಸ್ಯರನ್ನಾಗಿ ಜಾರ್ಜ್ ಅವರನ್ನು ನೇಮಿಸಿದೆ. ಇದರಿಂದ ಅವರು ದೆಹಲಿ ಮುಂತಾದ ಕಡೆ ಸುತ್ತಾಡಬೇಕಾಗಿದೆ. ಶೃಂಗೇರಿ ಕ್ಷೇತ್ರದ ಹಲವಾರು ಸಮಸ್ಯೆಗಳನ್ನು ಜಾರ್ಜ್ ಅವರ ಗಮನಕ್ಕೆ ತಂದಿದ್ದೇನೆ ಎಂದರು. ಸಭೆ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಜಾರ್ಜ್ ಅವರು ಜಿಲ್ಲೆಯ ಎಲ್ಲಾ ಶಾಸಕರು, ಮುಖಂಡರು, ಕಾರ್ಯಕರ್ತರ ಸಂಪರ್ಕ ಇಟ್ಟುಕೊಂಡಿದ್ದಾರೆ. ಕೆಲಸ ಮಾಡದ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ. ಪಕ್ಷವನ್ನು ಸಂಘಟಿಸಿ ಗಟ್ಟಿ ತಳಪಾಯ ಹಾಕಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ನಿಂದ ಸಚಿವ ಜಾರ್ಜ್ ಅವರನ್ನು ಸನ್ಮಾನಿಸಲಾಯಿತು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಶೃಂಗೇರಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವಿ ಅರ್ಪಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಸುಬ್ರಮಣ್ಯ ಬ್ಲಾಕ್ ಕಾಂಗ್ರೆಸ್ ಪರವಾಗಿ ಸಚಿವರಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಅವರಿಗೆ ಪ್ರವಾಸೋದ್ಯಮ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮನವಿ ನೀಡಿದರು. ಪಪಂ ಸದಸ್ಯೆ ಜುಬೇದ ಸಂವಿಧಾನ ಓದಿದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್ ಬೈಲು ನಟರಾಜ, ಮುಖಂಡರಾದ ಪಿ.ಆರ್.ಸದಾಶಿವ, ಇ.ಸಿ.ಜೋಯಿ, ಕೆ.ಎಂ.ಸುಂದರೇಶ್,ಕೆ.ಎ.ಅಬೂಬಕರ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.