ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ₹50 ಕೋಟಿ ಹಣ ಬರಲಿದ್ದು, ಅದನ್ನು ಬಳಸಿಕೊಂಡು ಕ್ಷೇತ್ರದ ಉಳಿದ ಎಲ್ಲಾ ರಸ್ತೆಗಳನ್ನು ಸುಗಮಗೊಳಿಸಲಾಗುವುದು.
ಕನ್ನಡಪ್ರಭ ವಾರ್ತೆ ಚೇಳೂರು
ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಬಿಳ್ಳೂರಿನಿಂದ ಚಾಕವೇಲುವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ₹18 ಕೋಟಿ ವಿನಿಯೋಗಿಸಲಾಗುತ್ತಿದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೇಳಿದರು.ತಾಲೂಕಿನ ಉಗ್ರಾಣಪಲ್ಲಿಯಿಂದ ರಾಶ್ಚೇರವು ಹಾಗೂ ಚಾಕವೇಲು ಗ್ರಾಮದವರೆಗೆ ₹5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ರಸ್ತೆ ಯೋಜನೆಯ ಒಟ್ಟು ವೆಚ್ಚದ ಕುರಿತು ಮಾಹಿತಿ ನೀಡಿದ ಶಾಸಕರು, ವಿವಿಧ ಹಂತಗಳಲ್ಲಿ ಅನುದಾನ ಹಂಚಿಕೆಯಾಗಿರುವುದನ್ನು ವಿವರಿಸಿದರು.ಚಾಕವೇಲು ಗ್ರಾಮದ ವ್ಯಾಪ್ತಿಗೆ ₹5 ಕೋಟಿ, ಬಿಲ್ಲೂರಿನಿಂದ ಉಗ್ರಾಣಪಲ್ಲಿ ವರೆಗೆ ₹3.5 ಕೋಟಿ, ರಾಶ್ಚೇರವು ಮಾರ್ಗಕ್ಕೆ ₹4.5 ಕೋಟಿ ಹಾಗೂ ಇತರೆ ಸಂಪರ್ಕ ರಸ್ತೆಗಳ ಅಭಿವೃದ್ಧಿಗಾಗಿ ₹4.75 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಸರಿಯಾದ ಅನುದಾನ ಸಿಗದೆ ಸಾರ್ವಜನಿಕರು ತೊಂದರೆ ಅನುಭವಿಸಿದ್ದರು. ಈಗ ನಮ್ಮ ಸರ್ಕಾರ ಬಂದ ಮೇಲೆ ಗರಿಷ್ಠ ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಶೇ. 75 ರಿಂದ 80 ರಷ್ಟು ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಅವರು ತಿಳಿಸಿದರು.ಹೆಚ್ಚುವರಿ ಅನುದಾನ: ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ₹50 ಕೋಟಿ ಹಣ ಬರಲಿದ್ದು, ಅದನ್ನು ಬಳಸಿಕೊಂಡು ಕ್ಷೇತ್ರದ ಉಳಿದ ಎಲ್ಲಾ ರಸ್ತೆಗಳನ್ನು ಸುಗಮಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕರು ಶ್ರೀನಿವಾಸ್ ಎಂ., ವಕೀಲರಾದ ಚಂದ್ರಶೇಖರ್, ಸಹದೇವ ರೆಡ್ಡಿ, ಜೆ ಎನ್ ಜಾಲರಿ, ಜಿವಿ ಸುರೇಂದ್ರ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.