ಕನಕನರಸಿಂಹ ಗುಡ್ಡದ ಸುತ್ತಮುತ್ತ ಮನೆ ಕಟ್ಟದಂತೆ ಒತ್ತಾಯ

| Published : Jun 12 2024, 12:32 AM IST

ಸಾರಾಂಶ

ಶ್ರೀ ಲಕ್ಷ್ಮೀ ಕನಕನರಸಿಂಹ ಗುಡ್ಡದಲ್ಲಾಗಲಿ ಅಥವಾ ಗುಡ್ಡದ ಎದುರಿನಲ್ಲಿರುವ ಹಳ್ಳಕ್ಕೆ ಹೊಂದಿಕೊಂಡಿರುವ ಜಾಗೆಯಲ್ಲಿ ಮನೆ ಕಟ್ಟುವುದಕ್ಕಾಗಲಿ, ಇತರೆ ಯಾವುದೇ ಕೆಲಸ ಕಾರ್ಯಗಳಿಗೆ ಅನುವು ಕೊಡಬೇಡಿ.

ಕನ್ನಡಪ್ರಭ ವಾರ್ತೆ ಮುಂಡರಗಿ

ತಾಲೂಕು ಭೋವಿ ಸಮಾಜದ ಕುಲಬಾಂಧವರೆಲ್ಲರೂ ತಲೆ-ತಲಾಂತರಗಳಿಂದ ಪಟ್ಟಣಕ್ಕೆ ಹೊಂದಿಕೊಂಡಿರುವ ಶ್ರೀ ಲಕ್ಷ್ಮೀ ಕನಕನರಸಿಂಹ ಗುಡ್ಡದಲ್ಲಿ ಕಲ್ಲು ಸುಟ್ಟು, ಒಡೆದು, ಅದನ್ನು ಮಾರಿ ಬಂದಂತಹ ಹಣದಿಂದ ಸುಮಾರು 70-80 ಕುಟುಂಬಗಳು ಈ ರೀತಿಯ ಜೀವನ ಸಾಗಿಸುತ್ತಿದ್ದಾರೆ. ಇದೀಗ ಅಲ್ಲಿ ಮನೆಗಳನ್ನು ಕಟ್ಟುತ್ತಿದ್ದು, ಅದಕ್ಕೆ ಅನುವು ಮಾಡಿಕೊಡಬಾರದು ಎಂದು ಮಂಗಳವಾರ ಮುಂಡರಗಿ ತಾಲೂಕು ಭೋವಿ ವಡ್ಡರ ಸಮಾಜದ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಇತ್ತೀಚಿನ ದಿನಮಾನಗಳಲ್ಲಿ ಶ್ರೀ ಲಕ್ಷ್ಮೀ ಕನಕನರಸಿಂಹ ಗುಡ್ಡದ ಪಕ್ಕದಲ್ಲಿ ಕೆಲವರು ಕಟ್ಟಡಗಳನ್ನು ಕಟ್ಟುತ್ತಿದ್ದು, ಆ ಮನೆಗಳಿಗೆ ನಾವು ಸುಟ್ಟು ಒಡೆದಂತಹ ಕಲ್ಲುಗಳಿಂದ ತೊಂದರೆ ಉಂಟಾಗುವ ಸಂಭವವಿದೆ. ಕಾರಣ ಅಲ್ಲಿ ನಮಗೆಲ್ಲ ಕೆಲಸ ಮಾಡಲು ತೊಂದರೆ ಉಂಟಾಗುತ್ತಿದ್ದು, ಗುಡ್ಡದ ಪಕ್ಕದಲ್ಲಾಗಲಿ ಅಥವಾ ಗುಡ್ಡದ ಎದುರಿನಲ್ಲಿರುವ ಹಳ್ಳಕ್ಕೆ ಹೊಂದಿಕೊಂಡಿರುವ ಜಾಗೆಯಲ್ಲಿ ಮನೆ ಕಟ್ಟುವುದಕ್ಕಾಗಲಿ, ಇತರೆ ಯಾವುದೇ ಕೆಲಸ ಕಾರ್ಯಗಳಿಗೆ ಅನುವು ಮಾಡಿಕೊಡದೇ ತಲೆ ತಲಾಂತರಗಳಿಂದ ಅಲ್ಲಿ ಕಲ್ಲು ಒಡೆದು ಜೀವನ ನಡೆಸುವಂತಹ ಕುಟುಂಬಗಳಿಗೆ ಮಾತ್ರ ಅವಕಾಶ ನೀಡಿ. ಆ ಕುಟುಂಬಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಶ್ರಮವಹಿಸಬೇಕು ಎಂದು ತಾಲೂಕು ಭೋವಿ, ವಡ್ಡರ ಸಮಾಜದ ಅಧ್ಯಕ್ಷ ರಾಘವೇಂದ್ರ ನರೇಗಲ್ ವಿನಂತಿಸಿದರು.

ಭೋವಿ, ವಡ್ಡರ ಸಮಾಜದ ಪ್ರಶಾಂತ ನಾಗರಹಳ್ಳಿ, ಮಹೇಶ ವಡ್ಡರ, ಯಮನಪ್ಪ ಬೆಣ್ಣಿಹಳ್ಳಿ, ಚನ್ನಪ್ಪ ಗುಗ್ಗರಿ, ವೆಂಕಪ್ಪ ಕಟ್ಟಿಮನಿ, ಮಂಜಪ್ಪ ಗುಗ್ಗರಿ, ಹುಲಿಗೆಪ್ಪ ಬಿಡನಾಳ, ಹನುಮಪ್ಪ ಬಂಡಿವಡ್ಡರ, ಕನಕರಾಯ ಕಟ್ಟಿಮನಿ, ಪರಶುರಾಮ್ ಗೊಂಡಬಾಳ, ಸಂತೋಷ ಸಿಂದೋಗಿ, ಹನುಮಂತ ವಡ್ಡರ, ಮಾರುತಿ ದೊಡ್ಡಮನಿ, ದೇವಣ್ಣಿ ಸಂದಿಮನಿ, ನಾಗಪ್ಪ ದೊಡ್ಡಮನಿ, ಕೃಷ್ಣ ಕಟ್ಟಿಮನಿ, ಹನುಮಂತ ಕರಡಿಗುಡ್ಡ, ಮಂಜುನಾಥ ಕಟ್ಟಿಮನಿ, ಶಿವಕುಮಾರ, ವಾಸು ಬಾದಾಮಿ, ಮಾರುತಿ ಕಲ್ಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.