ಕಾಡಂಚಿನ ಜನರ ತುರ್ತು ಸೇವೆಗೆ ಅರಣ್ಯ ಇಲಾಖೆ ಆ್ಯಂಬುಲೆನ್ಸ್

| Published : Jan 08 2024, 01:45 AM IST

ಸಾರಾಂಶ

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ಜನರು ಇನ್ಮುಂದೆ ಅರಣ್ಯ ಇಲಾಖೆ ಆ್ಯಂಬುಲೆನ್ಸ್ ನೆರವು ಪಡೆಯಬಹುದಾಗಿದ್ದು, ಜನಸ್ನೇಹಿ ಇಲಾಖೆಯಾಗುವತ್ತ ಅರಣ್ಯಾಧಿಕಾರಿ ಹೆಜ್ಜೆ ಇಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ಜನರು ಇನ್ಮುಂದೆ ಅರಣ್ಯ ಇಲಾಖೆ ಆ್ಯಂಬುಲೆನ್ಸ್ ನೆರವು ಪಡೆಯಬಹುದಾಗಿದ್ದು, ಜನಸ್ನೇಹಿ ಇಲಾಖೆಯಾಗುವತ್ತ ಅರಣ್ಯಾಧಿಕಾರಿ ಹೆಜ್ಜೆ ಇಟ್ಟಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಗೆ ಒಳಪಡುವ ಬಂಡೀಪುರ, ಎಲಚೆಟ್ಟಿ, ಜಕ್ಕಹಳ್ಳಿ, ಮಂಗಲ ಸೇರಿದಂತೆ ಇನ್ನಿತರ ಹಲವು ಗ್ರಾಮದ ಹಾಗೂ ಗಿರಿಜನ ಹಾಡಿಗಳಿಗೆ ಸಮರ್ಪಕವಾಗಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಜ್ವರ, ನೆಗಡಿ ಸೇರಿದಂತೆ ಇನ್ನಿತರ ಖಾಯಿಲೆಗಳು ಕಾಣಿಸಿಕೊಂಡರೆ ಜನರು ಪಟ್ಟಣದ ಆಸ್ಪತ್ರೆಗಳಿಗೆ ತೆರಳಲು ಹರಸಾಹಸ ಪಡಬೇಕಾಗಿತ್ತು. ಜೊತೆಗೆ ರಾತ್ರಿ ವೇಳೆ ವಾಹನ ಸಂಪರ್ಕವಿಲ್ಲದೆ ತೀವ್ರ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಇತ್ತು. ಇದನ್ನು ಮನಗಂಡ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶಕುಮಾರ್ ವಿಶೇಷ ಕಾಳಜಿ ವಹಿಸಿ, ಹುಲಿ ಸಂರಕ್ಷಣಾ ಪ್ರತಿಷ್ಠಾನದ ವತಿಯಿಂದ ಎರಡು ಮಾರುತಿ ಓಮಿನಿ ಕಾರುಗಳನ್ನು ಬಾಡಿಗೆಗೆ ಪಡೆದು ಕಾಡಂಚಿನ ಜನರಿಗೆ ಆರೋಗ್ಯ ಸೇವೆ ನೀಡಲು ಯೋಜನೆ ರೂಪಿಸಿದ್ದಾರೆ. ಹುಲಿ ಸಂರಕ್ಷಣಾ ಪ್ರತಿಷ್ಠಾನ ಕೊಡುಗೆಯಾಗಿ ನೀಡಿರುವ ಆ್ಯಂಬುಲೆನ್ಸ್ ದಿನದ 24 ಗಂಟೆಗಳ ಕಾಲ ಸೇವೆಗೆ ಸಿದ್ದವಿದ್ದು, ಆರೋಗ್ಯ ಸಮಸ್ಯೆ ಕಂಡು ಬಂದ ಕಾಡಂಚಿನ ಗ್ರಾಮಸ್ಥರು ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದರೆ ಕೂಡಲೇ ಆ್ಯಂಬುಲೆನ್ಸ್ ಸ್ಥಳಕ್ಕೆ ಆಗಮಿಸಿ, ಅಗತ್ಯವಿರುವ ಪ್ರಾಥಮಿಕ ಅಥವಾ ತಾಲೂಕು ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುತ್ತದೆ. ಹೆಚ್ಚಿನ ತುರ್ತು ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೂ ಕೂಡ ತೆರಳಲಿದೆ. ಜನರ ಮನವಿಗೆ ಸ್ಪಂದಿಸಿದ ಅರಣ್ಯಾಧಿಕಾರಿ: ರಾತ್ರಿ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಬಂಡೀಪುರದಿಂದ ಪಟ್ಟಣದ ಆಸ್ಪತ್ರೆಗಳಿಗೆ ತೆರಳಲು ವಾಹನಗಳ ವ್ಯವಸ್ಥೆ ಇಲ್ಲದೆ ಜನರು ಹಲವು ವರ್ಷಗಳಿಂದಲೂ ಪರದಾಡುತ್ತಿದ್ದರು. ಈ ಮಧ್ಯೆ ದ್ವಿಚಕ್ರ ವಾಹನಗಳಲ್ಲಿ ಕಾಡುಪ್ರಾಣಿಗಳ ಭಯದಲ್ಲಿ ಆಸ್ಪತ್ರೆಗಳಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಈ ಕುರಿತು ಸ್ಥಳೀಯರು ಅರಣ್ಯಾಧಿಕಾರಿಗಳ ಮುಂದೆ ಸಮಸ್ಯೆ ಚಿಚ್ಚಿಟ್ಟಿದ್ದರು. ಇದನ್ನು ಮನಗಂಡ ಅರಣ್ಯ ಇಲಾಖೆ ಇದೀಗ ಜನರ ಮನವಿ ಮೇರೆಗೆ ಕಾಡಂಚಿನ ಗ್ರಾಮಸ್ಥರಿಗೆ ಉತ್ತಮ ಆರೋಗ್ಯ ಸೇವೆ ದೊರಕಬೇಕು ಎಂಬ ಉದ್ದೇಶದಿಂದ ಎರಡು ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿದೆ. ಶೀಘ್ರದಲ್ಲೆ ಚಾಲನೆ: ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ವಿಶೇಷ ಕಾಳಜಿ ಹಾಗೂ ಹುಲಿ ಸಂರಕ್ಷಣಾ ಪ್ರತಿಷ್ಠಾನ ಕೊಡುಗೆಯಾಗಿ ನೀಡಿರುವ ಎರಡು ಆ್ಯಂಬುಲೆನ್ಸ್ ಸೇವೆಗೆ ಸಿದ್ದವಾಗಿದ್ದು, ಶಾಸಕ ಎಚ್.ಎಂ.ಗಣೇಶಪ್ರಸಾದ್ ಮೂಲಕ ಚಾಲನೆ ದೊರಕಿಸಲು ಇಲಾಖೆ ಸನ್ನದ್ಧವಾಗಿದೆ. ಆ್ಯಂಬುಲೆನ್ಸ್ ಗಳಿಗೆ ಶೀಘ್ರದಲ್ಲೆ ಹಸಿರು ನಿಶಾನೆ ಸಿಗಲಿದೆ ಎಂದು ಅರಣ್ಯಾಧಿಕಾರಿ ಡಾ.ರಮೇಶ್ ಕುಮಾರ್ ತಿಳಿಸಿದ್ದಾರೆ.