ಸಾರಾಂಶ
ಮಂಡಳಿ ಮೂಲಕ ಸಾರಿಗೆ ರಂಗದ ಕಾರ್ಮಿಕರಿಗೆ ಕನಿಷ್ಠ ₹1000 ಕೋಟಿ ಅನುದಾನ ನೀಡಬೇಕು.
ಹೊಸಪೇಟೆ: ಸಾರಿಗೆ ರಂಗದ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಿಸಿ, ಅಖಿಲ ಭಾರತ ರಸ್ತೆ ಸಾರಿಗೆ ಕಾರ್ಮಿಕರ ಒಕ್ಕೂಟದ ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ನಗರದ ಜೈ ಭೀಮ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
ಈ ವೇಳೆ ಆಟೋ ಚಾಲಕರ ಸಂಘದ ಮುಖಂಡ ಕೆ.ಎಂ. ಸಂತೋಷ್ ಮಾತನಾಡಿ, ನಿರಂತರ 28 ವರ್ಷಗಳ ಕಾಲ ಸಂಘಟನೆ ಹೋರಾಟಕ್ಕೆ ಇದೀಗ ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ ಮಾಡಿದ್ದು, ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಮಂಡಳಿ ಮೂಲಕ ಸಾರಿಗೆ ರಂಗದ ಕಾರ್ಮಿಕರಿಗೆ ಕನಿಷ್ಠ ₹1000 ಕೋಟಿ ಅನುದಾನ ನೀಡಬೇಕು. ಸಾರಿಗೆ ಕ್ಷೇತ್ರದಲ್ಲಿ ಸೆಸ್ ರೂಪದಲ್ಲಿ ಸಂಗ್ರಹವಾಗುತ್ತಿರುವ ಹಣವನ್ನು ಕಾರ್ಮಿಕರ ಕಲ್ಯಾಣ ಯೋಜನೆಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.ಸಾರಿಗೆ ರಂಗದ ಕಾರ್ಮಿಕರಿಗೆ ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ ಮಾಡಬೇಕೆಂಬ ಬೇಡಿಕೆಯನ್ನು ರಾಜ್ಯದ ಪ್ರಮುಖ ಕಾರ್ಮಿಕ ಸಂಘಟನೆಯಾದ ಸಿಐಟಿಯು ನೇತೃತ್ವದಲ್ಲಿ ರಾಜ್ಯದಲ್ಲಿ ಆಟೋರಿಕ್ಷಾ ಚಾಲಕರ ಸಂಘ ನೋಂದಣಿಯಾಗಿ ಆಟೋ ಚಾಲಕರು ಸಂಘಟಿತರಾಗಲು ಮುನ್ನುಡಿ ಬರೆಯಿತು. ಸಾರಿಗೆ ರಂಗದ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚನೆ ಮಾಡಬೇಕೆಂದು ಆಗ್ರಹಿಸಿ, ಖಾಸಗಿ ವಾಣಿಜ್ಯ ವಾಹನ ಚಾಲಕರನ್ನು ಒಗ್ಗೂಡಿಸಿ ಅಖಿಲ ಭಾರತ ರಸ್ತೆ ಸಾರಿಗೆ ಕಾರ್ಮಿಕರ ಒಕ್ಕೂಟದ ರಾಜ್ಯ ಸಂಚಾಲನಾ ಸಮಿತಿ ಮೂಲಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಎರಡು ಬಾರಿ ರಾಜ್ಯ ಸಮಾವೇಶಗಳನ್ನು ನಡೆಸಲಾಯಿತು. ನಿರಂತರ ಹೋರಾಟದ ಪರಿಶ್ರಮದಿಂದ ರಾಜ್ಯದಲ್ಲಿ ಕರ್ನಾಟಕ ಮೋಟಾರ್ ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಅಧಿನಿಯಮ-2024ಅನ್ನು ರಾಜ್ಯ ಸರ್ಕಾರ ಸಾರಿಗೆ ರಂಗದ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ ಮಾಡಿದೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಅನಂತಶಯನ, ಮೈನುದ್ದೀನ್, ಅಸ್ಲಾಂ, ಚಾಂದ್ ಬಾಷಾ, ಎಸ್.ಯಮನಪ್ಪ, ಸಿ.ರಾಮಚಂದ್ರ, ಚನ್ನ ಬಸವನಗೌಡ, ವಿಕ್ರಂ ದೀಕ್ಷಿತ್ ಹಾಗೂ ಮಹೇಶ್ ಸೇರಿದಂತೆ ಮತ್ತಿತರರಿದ್ದರು.