ಸಾರಾಂಶ
ಕನ್ನಡಪ್ರಭವಾರ್ತೆ, ಹಾಸನ
ತಾಲೂಕಿನ ಮೊಸಳೆಹೊಸಳ್ಳಿಯಲ್ಲಿ ಗಣಪತಿ ಮೆರವಣಿಗೆಯ ಸಂದರ್ಭದಲ್ಲಿ ಸಂಭವಿಸಿದ ಭೀಕರ ದುರಂತ ಅನೇಕ ಜೀವಗಳನ್ನು ಬಲಿ ಪಡೆದಿದ್ದು, ರಾಜ್ಯಾದ್ಯಂತ ಶೋಕ ವಾತಾವರಣ ನಿರ್ಮಾಣವಾಗಿದೆ. ಈ ದುರ್ಘಟನೆಯ ಸ್ಥಳಕ್ಕೂ, ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲಾದ ಗಾಯಾಳುಗಳಿಗೂ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಸಿ.ಟಿ. ರವಿ ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಆಸ್ಪತ್ರೆಯಲ್ಲಿ ಗಾಯಾಳುಗಳ ಸ್ಥಿತಿ ವಿಚಾರಿಸಿದ ನಂತರ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿ, ಸಂಭ್ರಮದ ಕ್ಷಣವೇ ಅನೇಕರ ಜೀವವನ್ನು ಬಲಿ ತೆಗೆದುಕೊಂಡಿದೆ. ಕೆಲವೊಮ್ಮೆ ಭಗವಂತ ಏಕೆ ಇಷ್ಟು ಕಠೋರನಾಗುತ್ತಾನೆ ಎಂದು ಅನ್ನಿಸುತ್ತದೆ. ಕೆಲವರಿಗೆ ಒಬ್ಬನೇ ಮಗನು ಇದ್ದನು, ಆ ಮಗನನ್ನು ಓದಿ, ಮುಂದೆ ನಮ್ಮನ್ನು ಸಾಕುತ್ತಾನೆ ಎಂದು ಕನಸು ಕಂಡಾಗ ವಿಧಿಯೇ ಬಲಿ ತೆಗೆದುಕೊಂಡಿದೆ. ಇಂತಹ ನೋವು ಯಾವ ಕುಟುಂಬಕ್ಕೂ ಆಗಬಾರದು ಎಂದು ಕಣ್ಣೀರಿಟ್ಟರು. ಅಪಘಾತಕ್ಕೆ ಸಂಬಂಧಿಸಿದಂತೆ ಹಲವು ಶಂಕೆಗಳನ್ನು ಅವರು ಉಲ್ಲೇಖಿಸಿದರು. ಟ್ರಕ್ ಚಾಲಕ ಮೂಲ ಚಾಲಕ ಅಲ್ಲ ಎಂದು ಮಾಹಿತಿ ಬಂದಿದೆ. ಕೆಲವರು ಅವನು ಮದ್ಯಪಾನ ಮಾಡಿದ್ದಾನೆ ಎಂದಿದ್ದಾರೆ. ಮತ್ತೊಬ್ಬರು ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ್ದನು ಎಂದು ಹೇಳಿದ್ದಾರೆ. ಇನ್ನೊಬ್ಬರು ಸಡನ್ನಾಗಿ ವಾಹನ ತಿರುಗಿಸಿ ಬಿಟ್ಟನು ಎಂದಿದ್ದಾರೆ. ನಿಜಕ್ಕೂ ಏನಾಗಿದೆ ಎನ್ನುವುದನ್ನು ಆಳವಾದ ತನಿಖೆಯ ಬಳಿಕವೇ ತಿಳಿಯಬೇಕು ಎಂದು ಸ್ಪಷ್ಟಪಡಿಸಿದರು.
ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಇಂತಹ ದುರಂತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಜನಸಮುದಾಯದಲ್ಲಿ ಸಂಭ್ರಮಿಸುವಾಗ ಎಚ್ಚರಿಕೆ ಅತ್ಯಗತ್ಯ. ಆದರೆ ನಾವು ನೋಡುತ್ತಿದ್ದೇವೆ, ಕ್ಷಣಮಾತ್ರದಲ್ಲಿ ಅಪಘಾತ ಸಂಭವಿಸಿ ಕುಟುಂಬಗಳು ನಾಶವಾಗುತ್ತಿವೆ. ಮುಂದೆಯಾದರೂ ಇಂತಹ ದುರ್ಘಟನೆಗಳು ಎಲ್ಲಿಯೂ ನಡೆಯಬಾರದು. ಸರ್ಕಾರ ಮತ್ತು ಆಡಳಿತವು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕುಟುಂಬಸ್ಥರ ನೋವನ್ನು ಆಲಿಸಿದ ಸಿ.ಟಿ. ರವಿ, ಅವರ ಅಳಲುಗಳನ್ನು ಹಂಚಿಕೊಂಡು ಸಾಂತ್ವನ ಹೇಳಿದರು.