ಭಟ್ಕಳ: ನನ್ನ ಶಾಸಕತ್ವದ ಅವಧಿಯಲ್ಲಿ ವೈದ್ಯರು ಮತ್ತು ರೋಗಿಗಳಿಂದ ತುಂಬಿ ತುಳುಕುತ್ತಿದ್ದ ಸರಕಾರಿ ಆಸ್ಪತ್ರೆಯಲ್ಲಿ ಇಂದು ಸರಿಯಾದ ವೈದ್ಯರಿಲ್ಲದೇ ಜನರಿಗೆ ವೈದ್ಯಕೀಯ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ. ಸರಕಾರಿ ಆಸ್ಪತ್ರೆಯ ವ್ಯವಸ್ಥೆಯನ್ನು ಸರಿಪಡಿಸಬೇಕಾದ ಮಾಜಿ ಸಚಿವ, ಶಾಸಕ ಮಂಕಾಳ ವೈದ್ಯ ಅವರು ಸುಮ್ಮನಿರುವುದು ಮತ್ತು ನಿರ್ಲಕ್ಷ್ಯ ತಾಳಿರುವುದರ ಹಿಂದೆ ಯಾರಿಗೋ ಲಾಭ ಮಾಡಿಕೊಡುವ ಉದ್ದೇಶ ಇದೆಯೇ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಪ್ರಶ್ನಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಟ್ಕಳ ಸರಕಾರಿ ಆಸ್ಪತ್ರೆ ಕೋವಿಡ್ ಸಂದರ್ಭದಲ್ಲಿ ಉತ್ತಮ ವೈದ್ಯಕೀಯ ಸೇವೆಗಾಗಿ ಹೆಸರು ಮಾಡಿತ್ತು. ದಿನದ 24 ಗಂಟೆಯೂ ಉತ್ತಮ ವೈದ್ಯಕೀಯ ಸೇವೆ ಕೊಡುತ್ತಿದ್ದ ಆಸ್ಪತ್ರೆಯ ಪರಿಸ್ಥಿತಿ ಕಂಡು ದು:ಖ ಆಗುತ್ತಿದೆ. ಈಗಿನ ಶಾಸಕರ ಬಳಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಕೊಡುತ್ತಿದ್ದ ವೈದ್ಯರನ್ನು ಉಳಿಸಿಕೊಳ್ಳಲು ಆಗಿಲ್ಲ. ಸರಕಾರಿ ಆಸ್ಪತ್ರೆ ಬಗ್ಗೆ ಅವರು ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದಾರೆ. ಕಳೆದ ತಿಂಗಳು ಮಂಕಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆ ಸಂದರ್ಭದಲ್ಲಿ ಒಂದು ತಿಂಗಳಲ್ಲಿ ವೈದ್ಯರು, ಸಿಬ್ಬಂದಿಯನ್ನು ಭರ್ತಿ ಮಾಡಲಾಗುವುದು ಎಂದಿದ್ದ ಶಾಸಕರು ಯಾವುದೇ ಕ್ರಮ ಕೈಗೊಂಡಿಲ್ಲ. ಭಟ್ಕಳ, ಶಿರಾಲಿ ಆಸ್ಪತ್ರೆಯಿಂದ ತಜ್ಞ ವೈದ್ಯರು ಬೇರೆಡೆಗೆ ವರ್ಗ ಆಗಿದ್ದರೂ ಅವರಿಂದ ಇಲ್ಲಿನ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಸರ್ಜನ್ ಅರುಣ ಕುಮಾರ ಅವರಿಗೆ ಆಡಳಿತ ವೈದ್ಯಾಧಿಕಾರಿ ಹುದ್ದೆ ಕೊಟ್ಟು ಅವರಿಗೆ ಸರಿಯಾಗಿ ಕೆಲಸ ಮಾಡದ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಯನ್ನು ದಾನಿಗಳ ಸಹಾಯದಿಂದ ಉತ್ತಮವಾಗಿ ಅಭಿವೃದ್ಧಿ ಪಡಿಸಿದ್ದ ಡಾ. ಸವಿತಾ ಕಾಮತರನ್ನೂ ವರ್ಗ ಮಾಡಿಸಲಾಗಿದೆ. ನನ್ನ ಅವಧಿಯಲ್ಲಿ 30 ಬೆಡ್ ಹೆಚ್ಚುವರಿ ಆಗಿದ್ದರೂ ನನ್ನ ಹೆಸರು ಬರುತ್ತದೆ ಎಂದು ಇನ್ನೂ ಉದ್ಘಾಟನೆ ಮಾಡಿಸಿಲ್ಲ ಎಂದು ಆರೋಪಿಸಿದರು.ಚುನಾವಣೆ ಪೂರ್ವದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತೇನೆ ಎಂದು ಹೇಳಿರುವುದು ನಿಮ್ಮ ಚುನಾವಣಾ ಗಿಮಿಕ್ಕಾ ಅಥವಾ ಬರೀ ಬಡಾಯಿಯಾ?, ಸಚಿವರಾಗಿ ಸರಕಾರಿ ಆಸ್ಪತ್ರೆಗೆ ತಾವು ಏನೂ ಮಾಡಿಲ್ಲ. ಇನ್ನಾದರೂ ಭಟ್ಕಳ, ಶಿರಾಲಿ ಆಸ್ಪತ್ರೆಗೆ ತಜ್ಞ ವೈದ್ಯರನ್ನು ನೇಮಕ ಮಾಡಿ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಸಿಗುವಂತೆ ಮಾಡಿ. ರಾಜ್ಯದಲ್ಲಿ ತಮ್ಮದೇ ಸರಕಾರ ಇದ್ದು, ಸರಕಾರದಿಂದ ಆಸ್ಪತ್ರೆಗೆ ಹೆಚ್ಚಿನ ಸೌಲಭ್ಯ ಕೊಡಿಸಿ ದೇವರು ಮೆಚ್ಚುವ ಕೆಲಸ ಮಾಡಿ. ನಿಮ್ಮಿಂದ ಸಾಧ್ಯವಾಗದೇ ಇದ್ದರೆ ಜನರ ಕ್ಷಮೆಯಾದರೂ ಕೇಳಿ ಎಂದು ಆಗ್ರಹಿಸಿದರು. ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಬ್ರಾಯ ದೇವಡಿಗ, ಪ್ರಮುಖರಾದ ರಾಜೇಶ ನಾಯ್ಕ, ಮೋಹನ ನಾಯ್ಕ, ಉಮೇಶ ನಾಯ್ಕ, ಶ್ರೀಧರ ನಾಯ್ಕ, ಪ್ರಮೋದ ಜೋಷಿ, ಯಶೋಧರ ನಾಯ್ಕ, ವಿಜಯಾ ನಾಯ್ಕ ಮುಂತಾದವರಿದ್ದರು.
ಕಾಂಗ್ರೆಸ್ ಅಧ್ಯಕ್ಷ ಪಾಪದವ!ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಾಪದವರು. ಅವರನ್ನು ಬರೀ ಪತ್ರಿಕಾಗೋಷ್ಠಿ ಮಾಡಲು ಮಾತ್ರ ಸೀಮಿತಗೊಳಿಸಲಾಗಿದೆಯೇ ಹೊರತು ಅವರನ್ನು ಬೇರೆ ಯಾವುದಕ್ಕೂ ಬಳಸಿಕೊಂಡಿಲ್ಲ. ನನ್ನ ವಿರುದ್ದ, ಬಿಜೆಪಿ ವಿರುದ್ಧ ಅವರು ಕೂಡಲೇ ಪ್ರೆಸ್ ಮೀಟ್ ಮಾಡಿ ಆರೋಪ ಮಾಡಿಸುವಂತೆ ಮಾಡುತ್ತಾರೆ. ನನ್ನ ಮತ್ತು ನನ್ನ ಪಕ್ಷದ ಮೇಲೆ ನೀವು ಎಷ್ಟೇ ಆರೋಪ ಮಾಡಿದರೂ ಸತ್ಯ ಮರೆ ಮಾಚಲು ಆಗುವುದಿಲ್ಲ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.