ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣೆ ಸಮಾರಂಭ ಶನಿವಾರ ಜರುಗಿತು.
ಬಂಟ್ವಾಳ: ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣೆ ಸಮಾರಂಭ ಶನಿವಾರ ಜನತಾ ಪದವಿಪೂರ್ವ ಕಾಲೇಜಿನ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಜರುಗಿತು.ಕೆನರಾ ಬ್ಯಾಂಕ್ ಮಣಿಪಾಲ ಇದರ ಜನರಲ್ ಮ್ಯಾನೇಜರ್ ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿ ಕೆ. ರಾಮ ನಾಯ್ಕ್ ಪಾಲ್ಗೊಂಡು ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನತಾ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಸಾಯ ಕೃಷ್ಣ ಭಟ್ ಹಾಗೂ ವಾರಣಾಶಿ ಸುಬ್ರಾಯ ಭಟ್ ಅವರು ದೂರದರ್ಶಿತ್ವ ಹೊಂದಿದ್ದರು. ಅವರಿಂದ ಸ್ಥಾಪನೆಯಾದ ಈ ವಿದ್ಯಾಸಂಸ್ಥೆ ಇಂದು ಖ್ಯಾತಿ ಪಡೆಯುತ್ತಿರುವುದು ಅಭಿಮಾನದ ವಿಷಯ ಎಂದರು. ಜನತಾ ವಿದ್ಯಾಸಂಸ್ಥೆಗಳ ಸಂಚಾಲಕ ಡಾ. ಅಶ್ವಿನಿ ಕೃಷ್ಣಮೂರ್ತಿ ಸ್ವಾಗತಿಸಿದರು. ಜನತಾ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ವೀಣಾ ಟಿ. ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರಾಮ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಜನತಾ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕ ಪ್ರಶಾಂತ ಎಂ. ಸನ್ಮಾನ ಪತ್ರ ವಾಚಿಸಿದರು.ದತ್ತಿನಿಧಿಯ ವರದಿಯನ್ನು ಜನತಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಟಿ.ಆರ್. ನಾಯ್ಕ್ ವಾಚಿಸಿದರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರು, ಆಡಳಿತ ಮಂಡಳಿ ಕೋಶಾಧಿಕಾರಿ ಕೇಶವ ಭಟ್ ಚವರ್ಕಾಡು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಮುಳಿಯಾಲ, ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರವಿ ಕುಮಾರ್ ಆರ್.ಎಸ್., ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಪಕಿ ಹರಿಣಾಕ್ಷಿ ಎ., ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ ಎಂ. ಉಪಸ್ಥಿತರಿದ್ದರು.
ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕ ದಿ. ವಾರಣಾಶಿ ಸುಬ್ರಾಯ ಭಟ್ ಹಾಗೂ ದಿ. ಸಾಯ ಕೃಷ್ಣ ಭಟ್ ಅವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ, ದತ್ತಿನಿಧಿ ಬಹುಮಾನಗಳು, ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಅಧ್ಯಾಪಕ ವೃಂದದ ಸುಗುಣ ರೈ, ಕುಸುಮಾವತಿ, ಅಪೂರ್ವ, ದಿವ್ಯ, ಮಂಜುಶ್ರೀ, ಗೀತಾ ಕುಮಾರಿ, ಸದಾನಂದ ರೈ ಬಹುಮಾನ ವಿಜೇತರ ವಿವರ ವಾಚಿಸಿದರು.ದಿ. ಪಾರ್ವತಿ ಅಮ್ಮ ಹಾಗೂ ಅವರ ಮಗ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಿ. ನಾರಾಯಣ ಜೋಶಿ ಚವರ್ಕಾಡು ಅವರ ಸ್ಮರಣಾರ್ಥ ಅವರ ಪತ್ನಿ ಸರೋಜಾ ನಾರಾಯಣ ಜೋಶಿ ಅವರಿಂದ ಸಿಹಿತಿಂಡಿ ವಿತರಣೆ ನಡೆಯಿತು. ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಸ್ಫೂರ್ತಿ ಗೀತೆ ಹಾಡಿದರು. ಕನ್ನಡ ಉಪನ್ಯಾಸಕ ಶೀನಪ್ಪ ನಾಯ್ಕ್ ಹಾಗೂ ಕನ್ನಡ ಅಧ್ಯಾಪಕ ಶಿವಕುಮಾರ್ ಸಾಯ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಜಯಶ್ರೀ ಕೆ.ಆರ್. ವಂದಿಸಿದರು.