ಸಾರಾಂಶ
ಜೇನು ಹುಳು ಕಡಿತದಿಂದ ನಾಲ್ಕು ಜನ ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಶ್ಯಾಡಂಬಿ ಗ್ರಾಮದ ಹೊರವಲಯದಲ್ಲಿ ಜರುಗಿದೆ.
ಶಿಗ್ಗಾಂವಿ: ಜೇನು ಹುಳು ಕಡಿತದಿಂದ ನಾಲ್ಕು ಜನ ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಶ್ಯಾಡಂಬಿ ಗ್ರಾಮದ ಹೊರವಲಯದಲ್ಲಿ ಜರುಗಿದೆ.
ಭೀಮಪ್ಪ ನಾಗಪ್ಪ ಭೀಮನವರ, ವಿರೂಪಾಕ್ಷಪ್ಪ ದ್ಯಾಮಣ್ಣಾ ಈಟಿ, ವೀರಭದ್ರಪ್ಪ ಯಲ್ಲಪ್ಪ ಈಟಿ, ಲಕ್ಷ್ಮವ್ವ ಈರಪ್ಪ ಸುಣಗಾರ ಜೇನು ಹುಳು ಕಡಿತಕ್ಕೆ ಸಾಕಷ್ಟು ಪ್ರಮಾಣದಲ್ಲಿ ಅಸ್ವಸ್ಥರಾಗಿದ್ದಾರೆ. ವೀರಭದ್ರಪ್ಪ ಈಟಿ ಆಸ್ಪತ್ರೆಯಲ್ಲಿ ಹೊರರೋಗಿ ಎಂದು ಚಿಕೆತ್ಸೆ ಪಡೆದುಕೊಂಡಿದ್ದರೆ ಉಳಿದವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಶ್ಯಾಡಂಬಿ ಗ್ರಾಮದ ಹೊರವಲಯದ ರಸ್ತೆಯಲ್ಲಿ ಕೂಲಿಗಾಗಿ ಹೋಗುತ್ತಿರುವಾಗ ಅಕಸ್ಮಿಕವಾಗಿ ಜೇನು ಹುಳುಗಳು ಅವರನ್ನು ಕಡಿಯಲಾರಂಬಿಸಿವೆ. ತಕ್ಷಣ ಓರ್ವ ಕೃಷಿ ಹೊಂಡದಲ್ಲಿ ಮುಳುಗಿ ರಕ್ಷಣೆಗೆ ಯತ್ನಿಸಿದರೂ ಸಹ ಜೇನು ನೊಣ ಬಿಡಲಿಲ್ಲ ಎನ್ನಲಾಗಿದೆ. ಗಾಯಗೊಂಡವರನ್ನು ಶಿಗ್ಗಾಂವಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ.
ಕುನ್ನೂರ ಶ್ಯಾಡಂಬಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ತಲುಪುವ ರಸ್ತೆಯಲ್ಲಿ ಇದು ಎರಡನೇ ಘಟನೆಯಾಗಿದೆ. ನೂರಾರು ವಾಹನಗಳು ಈ ಮಾರ್ಗದಲ್ಲಿ ಹೋಗುತ್ತವೆ. ಕೂಲಿ ಮಾಡಿಕೊಂಡು ತಿನ್ನುವ ಜನರಿಗೆ ಈ ರೀತಿಯಾದರೆ ಮುಂದೇನು ಅನ್ನುವಂತಾಗಿದೆ.ಈ ಕುರಿತು ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಪರಿಹಾರ ಕೊಡಿಸಬೇಕು ಎಂದು ಶ್ಯಾಡಂಬಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.