ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳದ ಬಸಾಪುರ ಬಳಿ ಮಂಗಳವಾರ ನಡೆದ 46ನೇ ರೈತ ಹುತಾತ್ಮ ದಿನಾಚರಣೆ ಸಂದರ್ಭದಲ್ಲಿ ಬಲ್ಡೋಟಾದ ವಶದಲ್ಲಿರುವ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕೆಂದು ಒತ್ತಾಯಿಸಿ ರೈತರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾನಿರತ ರೈತನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ರೈತ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಮಂಗಳವಾರ ಕೊಪ್ಪಳ ತಾಲೂಕಿನ ಬಸಾಪುರ ಬಳಿ ಕಾರ್ಖಾನೆ ಎದುರು ರಾಜ್ಯ ರೈತ ಸಂಘ, ಪರಿಸರ ಹಿತರಕ್ಷಣಾ ವೇದಿಕೆ, ಜಂಟಿ ಕ್ರಿಯಾ ವೇದಿಕೆ ಸಹಯೋಗದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ಪ್ರಗತಿಪರ ರೈತ ಮುಖಂಡರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಬಸಾಪುರ ಕೆರೆ ವ್ಯಾಪ್ತಿಗೆ ಬರುವ ಬಲ್ಡೋಟಾ ಕಾರ್ಖಾನೆಯ ವಶದಲ್ಲಿರುವ 44 ಎಕರೆ ಪ್ರದೇಶವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಒತ್ತಾಯಿಸಿ ಸಾವಿರಾರು ರೈತರು ಕಾರ್ಖಾನೆ ಎದುರು ಬೃಹತ್‌ ಪ್ರತಿಭಟನೆ ನಡೆಸಿದರು. ಐದು ತಾಸಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ-67ನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ರೈತರು, ರೈತ ಮಹಿಳೆಯರು ಏಕಾಏಕಿ ಬಲ್ದೋಟಾ ಕಾರ್ಖಾನೆಯ ತಡೆಗೋಡೆ ಒಡೆದು, ಕಬ್ಬಿಣದ ಬೃಹತ್ ಗೇಟ್ ಮುರಿದು, ಕಾರ್ಖಾನೆ ಒಳ ಪ್ರವೇಶಿದರು. ಕಾರ್ಖಾನೆ ವ್ಯಾಪ್ತಿಗೆ ಸೇರಿದ ಬಸಾಪುರ ಕೆರೆಯತ್ತ ನುಗ್ಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೆರೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿ. ಬಲ್ದೋಟಾ ತೊಲಗಿಸಲೇ ಬೇಕು. ಈ ಕಾರ್ಖಾನೆ ನಮಗೆ ಬೇಡ. ನಮ್ಮ ಕೆರೆಯನ್ನು ನಮಗೆ ನೀಡಿ ಎಂದು ಆಗ್ರಹಿಸಿದರು. ಈ ವೇಳೆ, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ವೇಳೆ, ಪ್ರತಿಭಟನಾನಿರತ ರೈತ, ಯಮನೂರಪ್ಪ ಎಂಬುವರು ನಮಗೆ ಕೆರೆ ಬೇಕೆ ಬೇಕು ಎಂದು ಘೋಷಣೆ ಕೂಗುತ್ತಾ ಕೆರೆಗೆ ಹಾರಿ, ಆತ್ಮಹತ್ಯೆಗೆ ಯತ್ನಿಸಿದ ಪ್ರಸಂಗ ಜರುಗಿತು. ತಕ್ಷಣವೇ ಪೊಲೀಸರು ಆತನನ್ನು ಕಾಪಾಡಿದರು.