ಸಾರಾಂಶ
ದಾವಣಗೆರೆಯ ಕಿರಣ, ದಾದಾಪೀರ್, ಮಂಜುನಾಥ್, ಚಿಕ್ಕಮಗಳೂರಿನ ಇಲಿಯಾಜ್, ಚಿತ್ರದುರ್ಗದ ಮಹಾಂತೇಶ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಕನ್ನಡಪ್ರಭ ವಾರ್ತೆ, ದಾವಣಗೆರೆ
ಐರಣಿ ಮಠದ ಸ್ವಾಮೀಜಿ ಶಿಷ್ಯರೆಂದು ಹೇಳಿಕೊಂಡು ಅಸಲಿ ನೋಟಿನ ಕೆಳಗೆ ಬಿಳಿಯ ಹಾಳೆಗಳುಳ್ಳ ಬಂಡಲ್ ನೀಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದ 5 ಜನ ವಂಚಕರ ತಂಡವನ್ನು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, 2.80 ಲಕ್ಷ ರು. ನಗದು ಮತ್ತು ಕೃತ್ಯಕ್ಕೆ ಬಳಸಿದ 15 ಲಕ್ಷ ರು. ಮೌಲ್ಯದ 3 ಕಾರು ವಶಪಡಿಸಿಕೊಂಡಿದ್ದಾರೆ.ದಾವಣಗೆರೆಯ ಕಿರಣ, ದಾದಾಪೀರ್, ಮಂಜುನಾಥ್, ಚಿಕ್ಕಮಗಳೂರಿನ ಇಲಿಯಾಜ್, ಚಿತ್ರದುರ್ಗದ ಮಹಾಂತೇಶ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
2023ರಲ್ಲಿ ಹೊಸನಗರ ತಾಲೂಕಿನ ಕೆಂಚನಾಲ್ ಗ್ರಾಮದ ಚಮನ್ ಸಾಬ್ ಎನ್ನುವವರಿಗೆ ವಂಚಕರು, ನಾವು ಐರಣಿ ಮಠದ ಸ್ವಾಮೀಜಿ ಶಿಷ್ಯರು. ನಮ್ಮ ಬಳಿ 100/- ರು. ಮುಖಬೆಲೆಯ ನೋಟುಗಳಿದ್ದು ನೀವು 500 ರು. ಮುಖಬೆಲೆಯ ನೋಟುಗಳನ್ನು ನೀಡಿದರೆ ನಾವು ನಿಮಗೆ ಹೆಚ್ಚಿನ ಹಣ ನೀಡುತ್ತೇವೆಂದು ನಂಬಿಸಿ ಅಸಲಿ ನೋಟಿನ ಕೆಳಗೆ ಅದೇ ಸೈಜಿನ ಬಿಳಿಹಾಳೆಗಳ ಬಂಡಲ್ ನೀಡಿ ಹಣ ಪಡೆದು ಪರಾರಿಯಾಗಿದ್ದರು.ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್ ಕುಮಾರ್ ಸಂತೋಷ ಮತ್ತು ಮಂಜುನಾಥ ಜಿ. ಹಾಗೂ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಹರಿಹರ ಪೊಲೀಸ್ ವೃತ್ತ ನಿರೀಕ್ಷಕರಾದ ಸುರೇಶ ಸಗರಿ, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಮಂಜುನಾಥ ಎಸ್. ಕುಪ್ಪೇಲೂರ, ಚಿದಾನಂದಪ್ಪ ಸಿಬ್ಬಂದಿ ತಿಪ್ಪೇಸ್ವಾಮಿ, ನಾಗರಾಜ. ಕರಿಯಪ್ಪ, ರಮೇಶ, ದಾದಾಪೀರ್, ನೀಲಮೂರ್ತಿ, ಸತೀಶ, ಎಲ್.ಡಿ. ಹನುಮಂತಪ್ಪ, ಅರ್ಜುನ ರಾಯಲ್, ಅನಿಲ್ ಕುಮಾರ್ ನಾಯ್ಕ, ರಿಜ್ವಾನ್ ನಾಸೂರ್, ಗಂಗಾಧರ, ಪ್ರಸನ್ನಕಾಂತ, ಸುರೇಶ, ಅರ್ಜುನ್ ನಂದ್ಯಾಲ, ಮಹೇಂದ್ರ, ನಾಗರಾಜ, ಸಿದ್ದಪ್ಪ, ಮುರುಳಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿ ಸಿಬ್ಬಂದಿ ರಾಘವೇಂದ್ರ ಶಾಂತರಾಜ ಅವರನ್ನು ಒಳಗೊಂಡ ತಂಡ ಭಾಗವಹಿಸಿತ್ತು.