ಮಡಿಕೇರಿಯಲ್ಲಿ ಉಚಿತ ಯೋಜನೆ ಫಲಾನುಭವಿಗಳ ಸಮಾವೇಶ: ಭೋಸರಾಜು

| Published : Jan 05 2024, 01:45 AM IST

ಸಾರಾಂಶ

ಮಡಿಕೇರಿಯಲ್ಲಿ ಸರ್ಕಾರದ ಉಚಿತ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ಫೆಬ್ರವರಿಯಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಶಾಲನಗರಮುಂದಿನ ತಿಂಗಳು ಮಡಿಕೇರಿಯಲ್ಲಿ ಸರ್ಕಾರದ ಉಚಿತ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.ಬುಧವಾರ ಕುಶಾಲನಗರ ಕಾವೇರಿ‌ ನೀರಾವರಿ‌ ನಿಗಮ‌‌ ಅಧೀಕ್ಷಕ ಅಭಿಯಂತರರ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಶಾಸಕರು, ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಾವೇಶದಲ್ಲಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಶಾಸಕ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಸಿಇಒ ವರ್ಣಿತ್ ನೇಗಿ, ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಎಸ್.ಪಿ. ಕೆ. ರಾಮರಾಜನ್, ಹೆಚ್ಚುವರಿ‌ ಜಿಲ್ಲಾಧಿಕಾರಿ ವೀಣಾ‌, ಸರ್ಕಾರದಿಂದ ನೂತನವಾಗಿ ನೇಮಕವಾದ‌ ತಾಲೂಕು ಉಸ್ತುವಾರಿ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿದ ಉಸ್ತುವಾರಿ ಸಚಿವರು ತಾಲೂಕಿಗೆ ನೂತನವಾಗಿ ನೇಮಕವಾಗಿರುವ ಉಸ್ತುವಾರಿ ಅಧಿಕಾರಿಗಳ ಜತೆ ಮೊದಲ ಬಾರಿ‌ ಸಭೆ‌ ನಡೆಸಲಾಗಿದೆ. ಆಡಳಿತಕ್ಕೆ ಚುರುಕು ನೀಡುವ ನಿಟ್ಟಿನಲ್ಲಿ ಈ ಸಭೆ ನಡೆದಿದೆ. ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಆದಷ್ಟು ಶೀಘ್ರ‌ ಪೂರ್ಣಗೊಳಿಸುವಂತೆ‌ ಸೂಚಿಸಲಾಗಿದೆ. ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಈ ತಿಂಗಳಾಂತ್ಯಕ್ಕೆ ಮುಗಿಸುವಂತೆ‌ ಕಟ್ಟು ನಿಟ್ಟಿನ ನಿರ್ದೇಶನ ನೀಡಲಾಗಿದ್ದು ಮುಂದಿನ ತಿಂಗಳು ಮೊದಲ ವಾರ ಮುಖ್ಯಮಂತ್ರಿ ಉದ್ಘಾಟಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.