ಕನ್ನಡಪ್ರಭ ವಾರ್ತೆ ಇಂಡಿ

ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಪ್ರಗತಿ ಸಾಧಿಸಿದ ದಶವಂತ ಕುಟುಂಬದ ಶ್ರಮ ಶ್ಲಾಘನೀಯ. ಈ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣದ ನೀಡುವ ಸಹಾಯ ಮಾಡುತ್ತಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಶ್ಲಾಘಿಸಿದರು.

ತಾಲೂಕಿನ ಚವಡಿಹಾಳ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಶ್ರೀ ಭಾಗ್ಯವಂತಿ ವಿದ್ಯಾವರ್ಧಕ ಸಂಘ ಇವರ ಸಹಯೋಗದಲ್ಲಿ ಹಮ್ಮಿಕೊಂಡ 2025-26ನೇ ಸಾಲಿನ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪ್ರೇರಣಾ ಶಿಬಿರ ಹಾಗೂ ಶುಭ ಹಾರೈಕೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಫಲಿತಾಂಶ ಸುಧಾರಣೆ ಕೇವಲ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಪ್ರತಿಯೊಬ್ಬ ಶಾಲಾ ಶಿಕ್ಷಕರು, ಅಧಿಕಾರಿಗಳು ಸಾಮೂಹಿಕವಾಗಿ ಪ್ರಯತ್ನ ಮಾಡಿದಾಗ ಮಾತ್ರ ಆ ಯಶಸ್ಸಿಗೆ ಕಾರಣವಾಗುತ್ತದೆ. ಆ ಕೆಲಸ ನಡೆಯಲಿ. ಫಲಿತಾಂಶದಲ್ಲಿ ಸಾಧನೆ ಮಾಡಲಿ ಎಂದು ಹೇಳಿದರು.

ಫಲಿತಾಂಶ ಸುಧಾರಣೆಯಲ್ಲಿ ಸರ್ಕಾರ, ಸಂಘ ಸಂಸ್ಥೆಗಳು ಕಳಕಳಿಯಿಂದ ಈ ವರ್ಷದ ವಿದ್ಯಾರ್ಥಿಗಳಿಗೆ ಅನೇಕ ತಯಾರಿಗಾಗಿ ಸಹಾಯ, ಸಹಕಾರ ಮಾಡಿವೆ. ಧೈರ್ಯ, ಆತ್ಮಬಲದಿಂದ ಪರೀಕ್ಷೆ ಬರೆಯಬೇಕು. ಉತ್ತಮ ಅಂಕ ಗಳಿಸಬೇಕು. ನಿಮ್ಮ ಭವಿಷ್ಯ ಉಜ್ವಲಗೊಳ್ಳಲು ಶುಭ ಹಾರೈಸಲು ಇಲ್ಲಿ ನಾವೆಲ್ಲ ಕೂಡಿದ್ದೇವೆ. ಮಕ್ಕಳಿಗೆ ಶುಭ ಹಾರೈಸುವುದು ನಾಗರಿಕ ಸಮಾಜದ ಕರ್ತವ್ಯ. ಮಕ್ಕಳನ್ನು ದೇವರ ಸಮಾನವಾಗಿ ಕಾಣುತ್ತೇವೆ. ಪೂರ್ವಜರು ನಮಗೆಲ್ಲ ಸಂಸ್ಕಾರ ಕೊಟ್ಟಿದ್ದಾರೆ. ಪ್ರತಿ ಮಗುವಿಗೆ ಅಕ್ಕರೆಯಿಂದ ಪ್ರೀತಿಸುವ ಸಂಸ್ಕೃತಿ ಈ ದೇಶದ್ದಾಗಿದೆ ಎಂದರು.

ಕಳೆದ ವರ್ಷ ನಮ್ಮ ಜಿಲ್ಲೆಗೆ ಕಪ್ಪುಚುಕ್ಕೆ ಬಿದ್ದಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಕಡೆಯ ಸ್ಥಾನದಲ್ಲಿದ್ದೇವೆ. ಕೋವಿಡ್‌ ಸಂದರ್ಭದಲ್ಲಿ ಜಿಲ್ಲೆಗೆ ದೊಡ್ದ ಹೆಸರು ಬಂದಿತ್ತು. ಕೆಲವೇ ವರ್ಷದಲ್ಲಿ ಅದು ನಶಿಸಿಹೋಗಿದೆ. ಈ ಬಾರಿ ನಮ್ಮ ಜಿಲ್ಲೆ ಫಲಿತಾಂಶದಲ್ಲಿ ಮುಂಚೂಣಿಯಲ್ಲಿರಬೇಕು. ಮಕ್ಕಳಿಗೆ ಧೈರ್ಯ ತುಂಬಬೇಕು. ಸಾಧ್ಯವಾದರೆ ಎಲ್ಲಾ ತಯಾರಿ ಮಾಡಿಕೊಡಬೇಕು ಎಂದು ಸೂಚಿಸಿದರು.ವಿದ್ಯಾರ್ಥಿಗಳು ಪರೀಕ್ಷೆ ಸಾಮಾನ್ಯವಾಗಿ ತೆಗೆದುಕೊಳ್ಳಬೇಕು. ಸರಳವಾಗಿ ಎದುರಿಸಬೇಕು. ಆತ್ಮಬಲದಿಂದ ಪರೀಕ್ಷೆ ತಯಾರಿ ಮಾಡಿಕೊಳ್ಳಬೇಕು. ಮಕ್ಕಳಲ್ಲಿ ಅಭದ್ರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಮಕ್ಕಳು ಪರೀಕ್ಷೆಯಲ್ಲಿ ಭಯಮುಕ್ತರಾಗಿ ಬರೆಯಬೇಕು. ಈ ಬಾರಿ ಪರೀಕ್ಷೆಯಲ್ಲಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಬಹಳ ಪ್ರಯತ್ನ ಮಾಡುತ್ತಿದೆ. ವಿದ್ಯಾರ್ಥಿಗಳು ಶಿಕ್ಷಕರು ಹೇಳಿದ ಅಭ್ಯಾಸ ಮಾಡಬೇಕು. ಪಿಯುಸಿ, ಎಸ್ಎಸ್ಎಲ್‌ಸಿ ಉನ್ನತ ವ್ಯಾಸಂಕ್ಕೆ ಹೋಗಲು ಮೊದಲ ಹೆಜ್ಜೆ. ಈ ಹೆಜ್ಜೆಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ಶಿಕ್ಷಣ ಇಲಾಖೆ ಫಲಿತಾಂಶ ಸುಧಾರಣೆಗೆ ಬಹಳ ಮುತುವರ್ಜಿ ವಹಿಸಿದೆ. ಈ ಬಾರಿ ವಿಜಯಪುರ ಜಿಲ್ಲೆ ಫಲಿತಾಂಶದಲ್ಲಿ ವಿಶೇಷ ನಂಬರ್‌ನಲ್ಲಿ ಇರುತ್ತದೆ. ಈ ವಿಶ್ವಾಸಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕು ಎಂದು ಹೇಳಿದರು.


ಈ ಭಾಗದ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಶ್ರಮಿಸಬೇಕು. ಜತೆಗೆ ಫಲಿತಾಂಶದ ಕಳಂಕವನ್ನು ಕಳಚಿ ಹಾಕಬೇಕು. ಮಕ್ಕಳ ಆರೋಗ್ಯ, ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 16 ವರ್ಷದ ಒಳಗಿನಮಕ್ಕಳಿಗೆ ಮೊಬೈಲ್‌ ಬ್ಯಾನ್‌ ಮಾಡಿರುವುದು ನಿರ್ಣಯ ಐತಿಹಾಸಿಕವಾದದ್ದು. ಅದಕ್ಕೆ ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಅಭಿನಂದಿಸುತ್ತೇನೆ ಎಂದರು.

ಈ ವೇಳೆ ಕಲ್ಲಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಇಲಿಯಾಸ ಬೊರಾಮಣಿ, ಪ್ರಶಾಂತ ಕಾಳೆ, ತಾಪಂ ಇಒ ಡಾ.ಭೀಮಾಶಂಕರ ಕನ್ನೂರ, ಡಿಡಿಪಿಐ ವೀರಯ್ಯ ಸಾಲಿಮಠ, ಶಿವಯೋಗೆಪ್ಪ ಚನಗೊಂಡ, ಕಾಮಣ್ಣ ದಶವಂತ, ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ದಶವಂತ, ಶಿವಾನಂದ ದಶವಂತ, ಅಶೋಕ ದಶವಂತ, ಅಪ್ಪಾರಾಯ ದಶವಂತ, ಪ್ರಾಂಶುಪಾಲ ಚಂದ್ರಶೇಖರ ದಶವಂತ, ನಿಜಣ್ಣ ಕಾಳೆ, ಎಸ್ಎಸ್‌ಎಲ್‌ಸಿ ನೋಡಲ್‌ ಅಧಿಕಾರಿ ಅಂಬಣ್ಣ ಹೂಗಾರ, ಬಿಇಒ ಸಯಿದಾ ಮುಜಾವರ,ಕ್ಷೇತ್ರ ಸಮನ್ವಯಾಧಿಕಾರಿ ಎಸ್‌.ಆರ್‌.ನಡಗಡ್ಡಿ, ಅಣ್ಣಾರಾಯಗೌಡ ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು ,ಶಿಕ್ಷಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.