-ಶ್ರೀರಾಂಪುರದಲ್ಲಿ ನಾಡಕಛೇರಿಗೆ ಸ್ವಂತ ಕಟ್ಟಡವಿಲ್ಲ । ಬಾಡಿಗೆ ಕಟ್ಟಡದಲ್ಲೇ ನೆಡೆಯುತ್ತಿರುವ ಕಚೇರಿ ಕೆಲಸ ಕಾರ್ಯ

----

ವರದಿ: ಎನ್‌ .ವಿಶ್ವನಾಥ್ ಶ್ರೀರಾಂಪುರ

ಕನ್ನಡಪ್ರಭ ವಾರ್ತೆ ಹೊಸದುರ್ಗ

ನೂತನ ಕಟ್ಟಡಕ್ಕೆ ಸಿಗದ ಅನುದಾನ, ಶಿಲಾಯುಗದ ಪಳಿಯುಳಿಕೆಯಂತಾದ ಕಟ್ಟಡ ಇದು, ಹೊಸದುರ್ಗ ತಾಲೂಕಿನ ಶ್ರೀರಾಂಪುರ ಹೋಬಳಿ ಕೇಂದ್ರದಲ್ಲಿ ನಿರ್ಮಾಣ ಹಂತದಲ್ಲಿರುವ ನಾಡಕಛೇರಿಯ ನೂತನ ಕಟ್ಟಡದ ಪರಿಸ್ಥಿತಿ.


ತಾಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವಾಗಿರುವ ಶ್ರೀರಾಂಪುರದಲ್ಲಿ ನಾಡಕಛೇರಿಗೆ ಸ್ವಂತ ಕಟ್ಟಡವಿಲ್ಲ. ಬಾಡಿಗೆ ಕಟ್ಟಡದಲ್ಲಿ ನೆಡೆಯುತ್ತಿದೆ. ಗೂಳಿಹಳ್ಳಿ ರಸ್ತೆಯಲ್ಲಿ 2018ರಲ್ಲಿ 18 ಲಕ್ಷ ರು. ವೆಚ್ಚದಲ್ಲಿ ನೂತನ ನಾಡಕಛೇರಿ ಕಟ್ಟಡ ಕಾಮಗಾರಿಗೆ ಅಂದಿನ ಶಾಸಕ ಗೂಳಿಹಟ್ಟಿ ಶೇಖರ್ ಭೂಮಿ ಪೂಜೆ ನೆರವೇರಿಸಿದ್ದರು.

ನಂತರ ಕಾಮಗಾರಿ ಆರಂಭಿಸಿದ ನಿರ್ಮಿತಿ ಕೇಂದ್ರದವರು, ಕಟ್ಟಡಕ್ಕೆ ತಳಪಾಯ ಹಾಕಿ ಒಂದು ವರ್ಷ ಕಾಮಗಾರಿ ಸ್ಥಗಿತಗೊಳಿಸಿದರು. ವರ್ಷದ ನಂತರ ದಿನಪತ್ರಿಕೆಗಳಲ್ಲಿ ಈ ಕುರಿತು ವರದಿ ಪ್ರಕಟವಾದ ಬಳಿಕ ಗೋಡೆ ಕಟ್ಟಡ ನಿರ್ಮಿಸಿ ಆರ್‌ಸಿಸಿ ಹಾಕಲಾಯಿತು.

ಅಲ್ಲಿಂದೀಚೆಗೆ ಕಟ್ಟಡದ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ನಿರ್ಮಾಣ ಹಂತದಲ್ಲಿಯೆ ಆರೇಳು ವರ್ಷಗಳನ್ನು ಸವೆಸಲಾಗಿದೆ. ನೂತನ ಕಟ್ಟಡ ಮುಳ್ಳಿನ ಪೊದೆಗಳ ನಡುವೆ ಮರೆಯಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಹಾಕಲಾಗಿದ್ದ ಕಬ್ಬಿಣ ತುಕ್ಕು ಹಿಡಯುತ್ತಿವೆ. ಇಟ್ಟಿಗೆಗಳು ಕರಗುತ್ತಿವೆ. ಕಟ್ಟಡದೊಳಗೆ ಪ್ರವೇಶಿಸಿದರೆ ದುರ್ವಾಸನೆ ಜೊತೆಗೆ ಮದ್ಯದ ಬಾಟಲಿಗಳ ದರ್ಶನವಾಗುತ್ತದೆ.

ಕಟ್ಟಡ ಕಟ್ಟುವ ಜಾಗದಲ್ಲಿ ಪಾಯ ತೆಗೆಯುವಾಗ ಸಡಿಲ ಮಣ್ಣು ಸಿಕ್ಕಿದ್ದರಿಂದ ಪಾಯವನ್ನು 8-10 ಅಡಿಗಳವರೆಗೆ ತೆಗೆದು ಮುಚ್ಚಬೇಕಾಯಿತು. ಇದಕ್ಕೆ ಅಧಿಕ ಹಣ ಖರ್ಚಾಯಿತು. ಉಳಿಕೆ ಹಣದಲ್ಲಿ ಕಟ್ಟಡ ಕಟ್ಟಿ ಆರ್.ಸಿ.ಸಿ. ಹಾಕಲಾಗಿದೆ. ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ. ನಾಡ ಕಛೇರಿ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲು ಅನುದಾನ ದೊರಕಿಸಿಕೊಡುವುದಾಗಿ ಶಾಸಕ ಬಿ.ಜಿ.ಗೋವಿಂದಪ್ಪನವರು ಭರವಸೆ ನೀಡಿದ್ದರು. ಆದರೆ, ಇದುವರೆವಿಗೂ ಯಾವುದೇ ಅನುದಾನ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ .

ಅಲ್ಲದೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರುವ ಗಣಿ ಬಾಧಿತ ಪ್ರದೆಶಾಭಿವೃದ್ಧಿ ಯೋಜನೆಯಲ್ಲಿ ಅನುದಾನ ನೀಡಲಾಗುತ್ತದೆ ಎನ್ನುವ ಮಾಹಿತಿ ಇತ್ತು. ಆದರೆ ಅದನ್ನು ಜಿಲ್ಲಾಧಿಕಾರಿಗಳು ನೀಡಿಲ್ಲ ಎನ್ನಲಾಗುತ್ತಿದೆ. ತಮ್ಮ ಇಲಾಖೆಯ ಕಟ್ಟಡಕ್ಕೆ ಅನುದಾನ ನೀಡಲು ಜಿಲ್ಲಾಧಿಕಾರಿಗಳು ಆಸಕ್ತಿ ವಹಿಸದಿರುವುದು ವಿಪರ್ಯಾಸವೇ ಸರಿ

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ನೆನೆಗುದಿಗೆ ಬಿದ್ದಿರುವ ಕಟ್ಟಡ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ, ರೈತರ ಜಮೀನುಗಳ ದಾಖಲಾತಿಗಳನ್ನು ಸಂರಕ್ಷಿಸಲು ಕ್ರಮವಹಿಸಬೇಕಿದೆ.

ಕೋಟ್..1

ಶ್ರೀರಾಂಪುರದಲ್ಲಿ ಈಗಿರುವ ನಾಡಕಛೇರಿ ಕಟ್ಟಡ ಸೋರುತ್ತಿದ್ದು, ರೈತರ ಜಮೀನುಗಳ ಅಮೂಲ್ಯ ದಾಖಲಾತಿಗಳು ಹಾಳಾಗುವ ಭೀತಿಯಲ್ಲಿದೆ. ಅಲ್ಲದೆ ಮಳೆಗಾಲ ಶುರುವಾಯಿತೆಂದರೆ ಕಛೇರಿಯೊಳಗೆ ಛತ್ರಿ ಹಿಡಿದು ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ, ನೂತನ ಕಟ್ಟಡದ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಟ್ಟರೆ ಅನುಕೂಲ.

-ದಿಲೀಪ್‌ ಕುಮಾರ್‌, ಉಪತಹಶೀಲ್ದಾರ್‌ ನಾಡಕಛೇರಿ, ಶ್ರೀರಾಂಪುರ.

-----

ಕೋಟ್‌..2 ನಾಡ ಕಛೇರಿ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲು ಮಾರ್ಚ್ ನಂತರ ಅನುದಾನ ದೊರಕಿಸಿಕೊಡುವುದಾಗಿ ಶಾಸಕ ಬಿ.ಜಿ.ಗೋವಿಂದಪ್ಪನವರು ಭರವಸೆ ನೀಡಿದ್ದಾರೆ. ಅನುದಾನ ಬಂದ ಕೂಡಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು

-ಕೃಷ್ಣೇಗೌಡ, ಯೋಜನಾಧಿಕಾರಿ, ನಿರ್ಮಿತಿ ಕೇಂದ್ರ , ಚಿತ್ರದುರ್ಗ.

----

..ಬಾಕ್ಸ್‌ ...

ಬಾಡಿಗೆ ಕಟ್ಟಡದಲ್ಲಿ ನೆಡೆಯುತ್ತಿರುವ ನಾಡಕಛೇರಿ

ನಾಡಕಛೇರಿಗೆ ಈವರೆಗೂ ಸ್ವಂತ ಕಟ್ಟಡವಿಲ್ಲ. ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಿದ ಬಾಡಿಗೆ ಕಟ್ಟಡದಲ್ಲಿ ಕಛೇರಿಯ ಚಟುವಟಿಕೆಗಳು ನೆಡೆಯುತ್ತಿವೆ. ಈ ಕಟ್ಟಡವೂ ಸಹ ಈಗಾಗಲೇ ಶಿಥಿಲಾವಸ್ಥೆಯಲ್ಲಿದ್ದು, ಮೇಲ್ಛಾವಣಿ ಸೋರುತ್ತಿದೆ. ಸಾರ್ವಜನಿಕರ ಜಮೀನಿನ ಹಳೆಯ ದಾಖಲಾತಿಗಳು ಹಾಳಾಗುವ ಆತಂಕ ಎದುರಾಗಿದೆ. ಮಳೆ ಬಂದಾಗ ಸೋರುವುದರಿಂದ ತಪ್ಪಿಸಿಕೊಳ್ಳಲು ಕಛೇರಿಯ ಸಿಬ್ಬಂದಿ ತಮ್ಮ ಕುರ್ಚಿ ಟೇಬಲ್ ಸರಿಸಿ ಕೂರುತ್ತಾರೆ. ಕಂಪ್ಯೂಟರ್ ಗಳಗೆ ತಾಡಪಲ್ ಹೊದಿಸಿ ರಕ್ಷಿಸಿಡುವ ಪರಿಸ್ಥಿತಿ ಇದೆ. ರೈತರ ಜಮೀನುಗಳ ಅಮೂಲ್ಯ ದಾಖಲೆ ಪತ್ರಗಳು ಹಾಳಾಗುವ ಸ್ಥಿತಿಯಲ್ಲಿದ್ದು ಅವುಗಳನ್ನು ಸಂರಕ್ಷಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

-----

ಪೋಟೋ:

8ಎಚ್‌ಎಸ್‌ಡಿ1:ಮುಳ್ಳಿನ ಪೊದೆಯೊಳಗೆ ಹಳೆ ಕಾಲದ ಪಳಿಯುಳಿಕೆಯಂತೆ ಕಾಣುತ್ತಿರುವ ಶ್ರೀರಾಂಪುರದ ನಾಡಕಛೇರಿಯ ನೂತನ ಕಟ್ಟಡ