ಗದಗ:
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಗದಗ ಜಿಲ್ಲೆ ಶೇ. 76.65ರಷ್ಟು ಫಲಿತಾಂಶ ದಾಖಲಿಸಿದ್ದು, ಕಳೆದ ಸಾಲಿಗಿಂತ 5 ಸ್ಥಾನ ಕುಸಿದು ರಾಜ್ಯ ಮಟ್ಟದಲ್ಲಿ 30ನೇ ಸ್ಥಾನ ಪಡೆದಿದೆ. ಈ ಬಾರಿ ಶೇ. 10.01ರಷ್ಟು ಹೆಚ್ಚು ಫಲಿತಾಂಶ ದಾಖಲಿಸಿದ್ದರೂ, ರ್ಯಾಂಕಿಂಗ್ನಲ್ಲಿ ಇನ್ನಷ್ಟು ಕೆಳಕ್ಕೆ ಕುಸಿದಿದೆ.ಕಳೆದ ಮೂರು ವರ್ಷಗಳ ಫಲಿತಾಂಶದ ಅಂಕಿ ಅಂಶಗಳನ್ನು ಗಮನಿಸಿದರೆ ಗದಗ ಜಿಲ್ಲೆ ರ್ಯಾಂಕಿಂಗ್ನಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. 2022- 23ನೇ ಸಾಲಿನಲ್ಲಿ ಶೇ. 66.91 ಫಲಿತಾಂಶ ದಾಖಲಿಸಿ, 30ನೇ ಸ್ಥಾನದಲ್ಲಿತ್ತು. 2023- 24ನೇ ಸಾಲಿನಲ್ಲಿ ಗದಗ ಜಿಲ್ಲೆ ಶೇ. 72.86 ಫಲಿತಾಂಶ ದಾಖಲಿಸಿ, ಕೊನೆಯ ಸ್ಥಾನದಲ್ಲಿತ್ತು. 2024- 25ನೇ ಸಾಲಿನಲ್ಲಿ ಶೇ. 66.64 ಫಲಿತಾಂಶ ದಾಖಲಿಸಿ, 25ನೇ ಸ್ಥಾನದಲ್ಲಿತ್ತು. ಪ್ರಸಕ್ತ ವರ್ಷ ಶೇ. 76.65 ಫಲಿತಾಂಶ ದಾಖಲಿಸಿ 30ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.ಕಳಪೆ ಸಾಧನೆ: ಪಿಯು ಫಲಿತಾಂಶ ಸುಧಾರಣೆಯ ಬಗ್ಗೆ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ ಉಪನ್ಯಾಸಕರಿಗೆ ತರಬೇತಿ ಶಿಬಿರ, ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ಪ್ರಶ್ನೆಪತ್ರಿಕೆ ಬಿಡಿಸುವ ಕಾರ್ಯಾಗಾರ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗಿತ್ತು. ಆದರೆ, ಗದಗ ಜಿಲ್ಲೆ ಪಿಯು ಫಲಿತಾಂಶದಲ್ಲಿ ಈ ಬಾರಿಯಾದರೂ ಟಾಪ್ ಟೆನ್ ಒಳಗೆ ಸ್ಥಾನ ಪಡೆಯಬೇಕು ಎಂಬ ಗುರಿ ಈಡೇರಿಲ್ಲ. ಬದಲಾಗಿ, ಕಳೆದ ವರ್ಷಕ್ಕಿಂತ ಮತ್ತಷ್ಟು ಕಳಪೆ ಸಾಧನೆ ಮಾಡಿರುವುದು ಬೇಸರದ ಸಂಗತಿಯಾಗಿದೆ.ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ
ಗದಗ: ನಗರದ ಆದರ್ಶ ಶಿಕ್ಷಣ ಸಮಿತಿ ದೇವದತ್ತ ಶಂಕರರಾವ್ ಕುರ್ತಕೋಟಿ ಮೆಮೋರಿಯಲ್ ಪಪೂ ಮಹಾವಿದ್ಯಾಲಯ ಪಿಯುಸಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.ಒಟ್ಟು ಮೂರು ವಿದ್ಯಾರ್ಥಿಗಳು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದು, ವಿನೀತ್ ಬಂದಾ 589, ಪ್ರಿಯಾಂಕ ಹುಚ್ಚನಗೌಡರು 589 ಹಾಗೂ ಆದಿತ್ಯ ರಾಯಬಾಗಿ 589 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಪ್ರಿಯಾಂಕ ಖೋಡೆ- 586 ದ್ವಿತೀಯ, ವೈಷ್ಣವಿ ಇಟಗಿ- 585 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ವಿಶಿಷ್ಟ ಶ್ರೇಣಿ ಸಹಿತ- 44, ಪ್ರಥಮ ಶ್ರೇಣಿ- 85, ದ್ವಿತೀಯ ಶ್ರೇಣಿ- 30 ಹಾಗೂ ಸಾಮಾನ್ಯ ಶ್ರೇಣಿ-14 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಕಾಲೇಜಿನ ಫಲಿತಾಂಶ ಶೇ. 96.89ರಷ್ಟಾಗಿದೆ.ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಾ. ಆರ್.ಆರ್. ಕುಲಕರ್ಣಿ, ಸಂಸ್ಥೆ ಅಧ್ಯಕ್ಷ ಕೆ.ವಿ. ಕುಷ್ಟಗಿ, ಚೇರ್ಮನ್ ಆನಂದ್ ಎಲ್. ಪೋತ್ನಿಸ್, ಉಪಾಧ್ಯಕ್ಷರಾದ ಪಿ.ಆರ್. ಅಡವಿ, ಜಿ.ವಿ. ಬೆಳಗಾನೂರ, ಆನಂದ ಡಿ. ಗೋಡಖಿಂಡಿ, ಎಂ.ಎಲ್. ಪೋತ್ನಿಸ್, ಶೈಲೇಶ್ ಬಾಗಮಾರ ಹಾಗೂ ಸದಸ್ಯರು, ಸಿಬ್ಬಂದಿ ಅಭಿನಂದಿಸಿದ್ದಾರೆ.