ಗಾಳಿದುರ್ಗಮ್ಮ ಜಾತ್ರೆ ಮಹೋತ್ಸವ ಸಂಪನ್ನ

| Published : Apr 07 2025, 12:30 AM IST

ಸಾರಾಂಶ

ಆಧುನಿಕ ಯುಗದಲ್ಲಿ ಬರೀ ಕೆಟ್ಟದ್ದನ್ನು ಕೇಳುವ ಸಮಯದಲ್ಲಿ ಒಳ್ಳೆಯ ಕಾರ್ಯಗಳತ್ತ ಮನಸ್ಸು ಓಡುತ್ತಿರಬೇಕು. ಅಂದಾಗ ಇಡೀ ಸಮಾಜ ಸಮೃದ್ಧವಾಗಿರುತ್ತದೆ

ಧಾರವಾಡ: ತಮ್ಮ ಜೀವಿತಾವಧಿಯಲ್ಲಿ ಯಾರೂ ಮತ್ತೊಬ್ಬರಿಗೆ ಅಥವಾ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಾರೋ ಅವರಿಗೂ ಒಳ್ಳೆಯದೇ ಆಗುತ್ತದೆ ಎಂದು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಸಪ್ತಾಪೂರದ ಗಾಳಿದುರ್ಗಮ್ಮ ಜಾತ್ರೆಯ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರ ಮನವು ಒಳ್ಳೆಯದನ್ನೇ ಮಾಡಲು ತುಡಿಯುತ್ತಿರಬೇಕು. ಆಧುನಿಕ ಯುಗದಲ್ಲಿ ಬರೀ ಕೆಟ್ಟದ್ದನ್ನು ಕೇಳುವ ಸಮಯದಲ್ಲಿ ಒಳ್ಳೆಯ ಕಾರ್ಯಗಳತ್ತ ಮನಸ್ಸು ಓಡುತ್ತಿರಬೇಕು. ಅಂದಾಗ ಇಡೀ ಸಮಾಜ ಸಮೃದ್ಧವಾಗಿರುತ್ತದೆ ಎಂದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮುಂಬುರುವ ದಿನಗಳಲ್ಲಿ ದೇಗುಲದ ಅಭಿವೃದ್ಧಿಗೆ ಹಾಗೂ ಭಕ್ತರಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ಇರಲಿದೆ ಎಂದರು.

ಜಾತ್ರೆಯ ಅಂಗವಾಗಿ ವ್ಯವಸ್ಥೆ ಮಾಡಲಾಗಿದ್ದ ಅನ್ನಸಂತರ್ಪಣೆಯಲ್ಲಿ 10 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಕಾರ್ಯದರ್ಶಿ ಉದಯ ಲಾಡ್ ದೇವಸ್ಥಾನದ ಇತಿಹಾಸ ವಿವರಿಸಿದರು. ಮುಂದಿನ ದಿನಗಳಲ್ಲಿ ದೇಗುಲದ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಕಟ್ಟಡ ಅಭಿವೃದ್ಧಿ, ರಥದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಸಂಜೆ ನೆಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನ್ಯಾಯವಾದಿ ಕೆ.ಎಲ್.ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಜಾತ್ರಾಮಹೋತ್ಸವದ ಅಧ್ಯಕ್ಷ ಡಾ. ಎಚ್.ಎ. ಕಟ್ಟಿ ಮಾತನಾಡಿದರು. ಪ್ರತಿಭಾ ಹೆಗಡೆ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ದೇವಸ್ಥಾನದ ಅಧ್ಯಕ್ಷ ವಲ್ಲಭ ಪಾವಸ್ಕರ, ಸದಸ್ಯರಾದ ಪಂಪಾಪತಿ ಹಿರೇಮಠ, ಜಗದೀಶ ವಡವಡಗಿ ಇದ್ದರು.